ಗೋಲ್ಡನ್ ಸ್ಟಾರ್ ಗಣೇಶ್ಗೆ ಬಲೆ ಬೀಸಿದ ಬಿ ಸುರೇಶ್
ಇದೇ ಮೊದಲ ಬಾರಿಗೆ ನಟ, ನಿರ್ದೇಶಕ ಹಾಗೂ ಸಕ್ರಿಯ ರಂಗಕರ್ಮಿ, ಕಿರುತೆರೆ ಹಾಗೂ ಬೆಳ್ಳಿತೆರೆಯ ಕ್ರಿಯಾಶೀಲ ಕಲಾವಿದ ಬಿ ಸುರೇಶ್ ಕಮರ್ಷಿಯಲ್ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ತಮ್ಮ ಹೊಸ ಚಿತ್ರದ ನಾಯಕ ನಟನ್ನಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ.
ಈಗಾಗಲೆ ತೆರೆಕಂಡಿರುವ ಗಣೇಶ್ ಅಭಿನಯದ 'ಮದುವೆ ಮನೆ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗಣೇಶನ ಸಾಲು ಸಾಲು ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ಏತನ್ಮಧ್ಯೆ ಬಿ ಸುರೇಶ್ ಅವರ ಕತೆ ಕೇಳಿರುವ ಗಣೇಶ್ ಮರು ಮಾತನಾಡದೆ ಚಿತ್ರಕ್ಕೆ ಮೌನ ಸಮ್ಮತಿ ಸೂಚಿಸಿದ್ದಾರೆ.
ಬಿ ಸುರೇಶ್ ಅವರ ಕ್ಯಾಂಪಿನಲ್ಲಿ ಗಣೇಶ್ ಈ ಹಿಂದೆ ಕೆಲಸ ಮಾಡಿದ್ದರು. ಕಿರುತೆರೆಯಲ್ಲಿ ಸಾಕಷ್ಟು ತೊಡಗಿಕೊಂಡಿರುವ ಸುರೇಶ್ ಅವರ 'ಪುಟ್ಟಕ್ಕನ ಹೈವೆ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ ಮೂಡಿದ್ದು ಅವರ ಜವಾಬ್ದಾರಿಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಹಿಂದೆ ಪ್ರಕಾಶ್ ರೈ ಜೊತೆ ಕೈ ಜೋಡಿಸಿ ಸುರೇಶ್ ಅವರು 'ನಾನು ನನ್ನ ಕನಸ'ನ್ನು ನಿರ್ಮಿಸಿದ್ದರು. ಬಾಕ್ಸಾಫೀಸ್ ಗಳಿಕೆಯಲ್ಲಿ ಕೊಂಚ ಡಲ್ ಹೊಡೆದರೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಚಿತ್ರ ಗೆದ್ದಿತ್ತು. ಉದಯ ಟಿವಿಗಾಗಿ 'ಪ್ರೀತಿ ಪ್ರೇಮ' ಎಂಬ ಧಾರಾವಾಹಿಯಲ್ಲೂ ಸುರೇಶ್ ಬ್ಯುಸಿಯಾಗಿದ್ದಾರೆ.
'ಕ್ರಾಂತಿ' ಎಂಬ ಚಿತ್ರದಲ್ಲೂ ಬಣ್ಣ ಹಚ್ಚಿರುವ ಸುರೇಶ್ ಹಲವಾರು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಕಾಶ್ ರೈ ಜೊತೆ 'ಬಹುರೂಪಿ' ಎಂಬ ಮತ್ತೊಂದು ಚಿತ್ರವನ್ನೂ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಲವರ್ ಬಾಯ್ ಪಾತ್ರಗಳಲ್ಲೇ ಗಣೇಶ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಏಕತಾನತೆಯನ್ನು ಮುರಿಯುವ ಪ್ರಯತ್ನ ಬೀಸು ಅವರಿಂದ ಆಗಲಿ ಎಂದು ಆಶಿಸೋಣ. (ಒನ್ಇಂಡಿಯಾ ಕನ್ನಡ)


Click it and Unblock the Notifications











