ನಧೀಂ ಧೀಂ ತನ ಹುಡುಗಿ ಭಾವನಾ ರಾವ್ ಎಲ್ಲಿ?
ಭಾವನಾ ರಾವ್ ಗೊತ್ತಲ್ಲ, ಅದೇ ಕಂಡ್ರೀ, ಖ್ಯಾತ ನಿರ್ದೇಶಕ ಯೋಗರಾಜಭಟ್ ನಿರ್ದೇಶನದ 'ಗಾಳಿಪಟ' ಚಿತ್ರದಲ್ಲಿ ಗಾಯಕ ಹಾಗೂ ನಟ ರಾಜೇಶ್ ಕೃಷ್ಣನ್ ಜತೆ ''ನಧೀಂ ಧೀಂ ತನ...'' ಎನ್ನುವ ಪ್ರಸಿದ್ಧ ಹಾಡಿಗೆ ಕುಣಿದ ಚೆಲುವೆ. ಆಕೆ ಇದೀಗ ಮತ್ತೆ ಎರಡು ಚಿತ್ರದಲ್ಲಿ ನಟಿಸುತ್ತಿದ್ದಾಳೆ.
ಯೋಗರಾಜಭಟ್ ಅವರಿಂದ ಬೆಳಕಿಗೆ ಬಂದ ಈ ಕನ್ನಡದ ಪ್ರತಿಭಾವಂತ ನಟಿಗೆ ಗಾಳಿಪಟ ಚಿತ್ರ ಯಶಸ್ವಿಯಾಗಿದ್ದರೂ ಅವಕಾಶ ಸಿಗಲಿಲ್ಲ. ಹೀಗೆಂದರೆ ಅವರು ಸಿಟ್ಟಾಗುತ್ತಾರೆ. ಹಾಗೇನು ಇಲ್ಲ ಅವಕಾಶಗಳು ಬಂದಿವೆ. ಆದರೆ ಗಟ್ಟಿ ಪಾತ್ರದಲ್ಲಿ ನಟಿಸಬೇಕು ಎನ್ನುವ ಉದ್ದೇಶದಿಂದ ಸಣ್ಣಪುಟ್ಟ ಪಾತ್ರಗಳನ್ನು ನಿರಾಕರಿಸಿದ್ದೇನೆ ಹೊರತು ಅವಕಾಶಗಳಿಗೆ ಕೊರತೆ ಏನು ಇಲ್ಲ ಎನ್ನುತ್ತಾರೆ.
ಗಾಳಿಪಟ ಚಿತ್ರದಲ್ಲಿ ಯೋಗರಾಜ ಭಟ್ ರ ಗರಡಿಯಲ್ಲಿ ತಯಾರಾದ ಭಾವನಾರಾವ್ ತಾನೊಬ್ಬ ಉತ್ತಮ ನಟಿ ಎಂದು ನಿರೂಪಿಸಿದ್ದರು. ಸಾಧ್ಯವಾದ ಮಟ್ಟಿಗೆ ಗ್ಲಾಮರಸ್ ಆಗಿ ಗಾಳಿಪಟದಲ್ಲಿ ಮಿಂಚಿದ್ದರು. ಆದರೂ ಕೂಡಾ ಅವಕಾಶಗಳು ಕಡಿಮೆಯಾದವು. ಕನ್ನಡ ಕಲಾವಿದೆಯರನ್ನು ಉತ್ತಮವಾಗಿ ಬಳಸಿಕೊಳ್ಳದ ಉದ್ಯಮ ಮುಂಬೈ ಬೆಡಗಿರಿಗೆ ಕೇಳಿದಷ್ಟು ಹಣ ನೀಡಿ ಕರೆ ತರುತ್ತಾರೆ. ಕಾರಣ ಏನೆಂಬುದು ಗೊತ್ತಿಲ್ಲ ಎನ್ನುವುದು ಇಂತಹ ಅನೇಕ ನಟಿಯರ ಕೊರಗು.
ಗೋವಿಂದರಾಜ್ ನಿರ್ದೇಶನದ ಅಕುಲ್ ಬಾಲಾಜಿ ನಾಯಕನಾಗಿರುವ 'ಗಗನಚುಕ್ಕಿ' ಹಾಗೂ ದಿಗಂತ್ ನಾಯಕನಾಗಿ ನಟಿಸಿರುವ 'ಕರೆಯೇ ಕೋಗಿಲೆ ಮಾಧವನ' ಎಂಬ ಎರಡು ಚಿತ್ರದಲ್ಲಿ ಭಾವನಾರಾವ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಉತ್ತಮ ನೃತ್ಯ ಕಲಾವಿದೆಯಾಗಿರುವ ಭಾವನಾ, ಸಂತೋಷ ಶಿವನ್ ನಿರ್ದೇಶನದ 'ವರ್ಣಂ ' ಎಂಬ ತಮಿಳು ಚಿತ್ರದಲ್ಲೂ ನಟಿಸುತ್ತಿದ್ದಾರೆ. ಉತ್ತಮ ಕಲಾವಿದೆಯಾದ ಭಾವನಾ ರಾವ್ ಅವರನ್ನು ಕನ್ನಡ ಚಿತ್ರರಂಗ ಉತ್ತಮವಾಗಿ ಬಳಸಿಕೊಳ್ಳಬೇಕಿದೆ.
(ದಟ್ಸ್ ಕನ್ನಡ ಸಿನಿ ವಾರ್ತೆ)


Click it and Unblock the Notifications