ಮನಬಿಚ್ಚಿ ಮಾತನಾಡಿದ 'ಗಜ' ಚಿತ್ರದ ನಾಯಕಿ
'ಗಜ' ಚಿತ್ರ 50 ದಿನಗಳನ್ನು ಪೂರೈಸಿದ್ದಕ್ಕಾಗಿ ಚಿತ್ರತಂಡ ಬೆಂಗಳೂರಿನ ಸಾಲಿಡಾರ್ ಹೋಟೆಲ್ನಲ್ಲಿ ಸೋಮವಾರ ಸಂಜೆ ಸಂತೋಷ ಕೂಟವನ್ನು ಏರ್ಪಡಿಸಿತ್ತು. 'ಗಜ' ಚಿತ್ರದ ನಾಯಕಿ ಮಲಯಾಳಿ ಮಲ್ಲು ನವ್ಯಾ ನಾಯರ್ ಮಾತನಾಡುತ್ತಾ ಕನ್ನಡದಲ್ಲಿ ನಟಿಸಿದ ನನ್ನ ಪ್ರಥಮ ಚಿತ್ರ 'ಗಜ' ಗೆದ್ದಿದ್ದಕ್ಕೆ ನಾನು ಆ ದೇವರಿಗೆ ಕೃತಜ್ಞಳಾಗಿದ್ದೇನೆ ಎಂದರು.
ನನ್ನ 7 ವರ್ಷಗಳ ವೃತ್ತಿ ಜೀವನದಲ್ಲಿ 32 ಮಲೆಯಾಳಿ ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿದ್ದೇನೆ. ಅಲ್ಲೆಲ್ಲೂ ಸಿಗದ ಖುಷಿ 'ಗಜ' ಚಿತ್ರತಂಡದಲ್ಲಿ ಸಿಕ್ಕಿತು. ಚಿತ್ರೀಕರಣ ವೇಳೆ ನನ್ನ ಆರೋಗ್ಯ ಕೈಕೊಟ್ಟಿತ್ತು. ಆ ಸಂದರ್ಭದಲ್ಲಿ 'ಗಜ' ಚಿತ್ರ ತಂಡ ನನ್ನ ಬಗ್ಗೆ ವಹಿಸಿದ ಕಾಳಜಿ , ಕೊಟ್ಟ ಆರೈಕೆಯನ್ನು ನಿಜಕ್ಕೂ ನಾನು ಮರೆಯುವುದಿಲ್ಲ.. ಸಾಮಾನ್ಯವಾಗಿ ನಾನು ನಟಿಸಿದ ಚಿತ್ರಗಳು ತೆರೆಕಂಡು 25 ದಿನಗಳನ್ನು ಪೂರೈಸಿದ ನಂತರವೇ ನಾನು ನೋಡುವುದು. ಆದರೆ ನಾನು ನಟಿಸಿದ ನನ್ನ ಪ್ರಥಮ ಚಿತ್ರವನ್ನು 121 ದಿನಗಳ ನಂತರ ನೋಡಿದ್ದೆ. ಈಗ 'ಗಜ' ಚಿತ್ರ 50 ದಿನಗಳನ್ನು ಪೂರೈಸಿರುವ ಸಂದರ್ಭದಲ್ಲಿ ಬೆಂಗಳೂರಿಗೆ ಬಂದಿದ್ದೇನೆ ಎನ್ನುತ್ತಾರೆ ನವ್ಯಾ ನಾಯರ್.
ಕಲಾವಿದರು ತಮ್ಮ ಆರೋಗ್ಯವನ್ನು ಹೂವಿನ ತರಹ ನೋಡಿಕೊಳ್ಳ ಬೇಕು ಎಂದು ಎಲ್ಲೋ ಒಮ್ಮೆ ಮಲೆಯಾಳಂ ನಿರ್ದೇಶಕ ಲೋಹಿತ್ ದಾಸ್ ಹೇಳಿದ್ದರು. ಅದೇ ರೀತಿ ನನ್ನನ್ನು ಹೂವಿನ ತರಹ 'ಗಜ' ಚಿತ್ರ ತಂಡ ನೋಡಿಕೊಂಡಿತು. ನಿರ್ಮಾಪಕ ಸುರೇಶ್ ಗೌಡ, ನಿರ್ದೇಶಕ ಮಾದೇಶ ಹಾಗೂ ನಟ ದರ್ಶನ್ ಅವರ ಆರೈಕೆಯನ್ನು ನಾನು ಮರೆಯುವುದಿಲ್ಲ. ಚಿತ್ರೀಕರಣದಲ್ಲಿ ನಾನು ಕಾಯಿಲೆ ಬಿದ್ದಾಗ ನಿಪುಣ ವೈದ್ಯರನ್ನು ಕರೆಸಿ ಉತ್ತಮ ಚಿಕಿತ್ಸೆಯನ್ನು ಕೊಡಿಸಿದರು. 'ಗಜ' ಸೆಟ್ಟಿನಲ್ಲಿದ್ದಾಗ ಯಾವುದೇ ರೀತಿಯ ತೊಂದರೆ ಆಗದಂತೆ ಅವರು ನೋಡಿಕೊಂಡರು ಎಂದು ತಮ್ಮ 'ಗಜ' ಚಿತ್ರೀಕರಣದ ದಿನಗಳನ್ನು ನವ್ಯಾ ನಾಯರ್ ನೆನಪಿಸಿಕೊಂಡರು. ಪತ್ರಕರ್ತರೊಂದಿಗೆ ಇಷ್ಟೆಲ್ಲಾ ಮಾತನಾಡಿದ ನವ್ಯಾ ನಾಯರ್ ತಮ್ಮ ಮುಂದಿನ ಚಿತ್ರದ ಬಗ್ಗೆಯೂ ಸುಳಿವು ಕೊಟ್ಟರು. ಶಿವರಾಜ್ಕುಮಾರ್ ಜೊತೆಗೆ ನನ್ನ ಮುಂದಿನ ಚಿತ್ರ ಇರುತ್ತದೆ. ಇದು ಕನ್ನಡದಲ್ಲಿ ಬರುತ್ತಿರುವ ನನ್ನ ಎರಡನೆಯ ಚಿತ್ರವಾಗಲಿದೆ ಎಂದು ನವ್ಯಾ ನಾಯರ್ ಹೇಳಿದರು.
(ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications