ದುಬೈ ಕನ್ನಡ ರಾಜ್ಯೋತ್ಸವಕ್ಕೆ ಚಾಲೆಂಜಿಂಗ್ ಸ್ಟಾರ್
ಕೊಲ್ಲಿ ರಾಷ್ಟ್ರದಲ್ಲಿ ಅನೇಕ ಕನ್ನಡ ಸಂಘಟನೆಗಳಿವೆ. ಅವುಗಳಲ್ಲಿ ಮುಖ್ಯವಾಗಿ ಕನ್ನಡ ಸಂಘ ಬಹರೇನ್, ಅಬು-ಧಾಬಿ ಕರ್ನಾಟಕ ಸಂಘ, ಕನ್ನಡ ಸಂಘ ದುಬೈ... ಹೀಗೆ ಹೆಸರಿಸಬಹುದು. ಈ ಸಂಘಟನೆಗಳೆಲ್ಲಾ ವರ್ಷದುದ್ದಕ್ಕೂ ಒಂದಲ್ಲ ಒಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಭಾಷೆಯನ್ನು ಬೆಳೆಸುವಲ್ಲಿ ಉತ್ತಮ ಪ್ರಯತ್ನಗಳನ್ನು ಮಾಡುತ್ತಿವೆ. ಈಗ ದುಬೈ ಕನ್ನಡ ಸಂಘವು ಅಂತಹದ್ದೇ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮಕ್ಕೆ ಕನ್ನಡ ಚಲನಚಿತ್ರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಆಹ್ವಾನಿಸಲಾಗಿದೆ. ದರ್ಶನ್ ಜೊತೆಗೆ ನಟರಾದ ಸಾಧು ಕೋಕಿಲ, ಬುಲೆಟ್ ಪ್ರಕಾಶ್ ಅವರಿಗೂ ಆಹ್ವಾನ ನೀಡಲಾಗಿದೆ. ಡಿಸೆಂಬರ್ 9ರಂದು ದುಬೈನಲ್ಲಿ ನಡೆಯಲಿರುವ ದುಬೈ ಕನ್ನಡ ಸಂಘದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಲ್ ಸಫದ್ ಜೆಎಸ್ಎಸ್ ಸಭಾಂಗಣ ಸಿದ್ಧವಾಗುತ್ತಿದೆ.
ದುಬೈ ಕನ್ನಡ ಸಂಘದ ಅಧ್ಯಕ್ಷ ಗಿರೀಶ್ ಶೆಟ್ಟಿ ಅವರು ಕನ್ನಡ ರಾಜ್ಯೋತ್ಸವನ್ನು ವರ್ಣರಂಜಿತವಾಗಿ ಆಚರಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ನೃತ್ಯ, ಸಂಗೀತ ಕಾರ್ಯಕ್ರಮ ಸೇರಿದಂತೆ ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಅನಿವಾಸಿ ಕನ್ನಡಿಗರನ್ನು ಮೈಮರೆಸಲಿವೆ.
ಸುಗಮ ಸಂಗೀತ ಗಾಯಕರಾದ ಕಿಕ್ಕೇರಿ ಕೃಷ್ಣಮೂರ್ತಿ, ರಮೇಶ್ ಚಂದ್ರ, ನಾಗಚಂದ್ರಿಕಾ ಭಟ್, ಲಿಟ್ಲ್ ಚಾಂಪಿಯನ್ ಅಶ್ವಿನ್ ಶರ್ಮ ಅವರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದುಬೈ ರಾಕರ್ಸ್ ತಂಡದಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











