ಪುನೀತ್ ಬೆಲೆ ಬರೀ ಒಂದೂವರೆ ಕೋಟಿ ಅಷ್ಟೆ!
ಕನ್ನಡ ಚಿತ್ರರಂಗದ ಸ್ಟಾರ್ಗಳು ಸಿಕ್ಕಾಪಟ್ಟೆ ಸಂಭಾವನೆ ಪಡೆಯುತ್ತಿದ್ದಾರೆ. ಅದರಿಂದ ನಿರ್ಮಾಪಕರು ಹಾಳಾಗುತ್ತಿದ್ದಾರೆ. ಅವರು ಶೇಕಡಾ ಇಪ್ಪತ್ತೈದರಷ್ಟು ಸಂಭಾವನೆ ಕಡಿತ ಮಾಡಿಕೊಳ್ಳಬೇಕು..." ಹೀಗೊಂದು ನಿಮಯವನ್ನು ಜಾರಿಗೆ ತರಲು ನಿರ್ಮಾಪಕರ ಸಂಘ ಯೋಚಿಸುತ್ತಿದೆ. ಅಲ್ಲಿಗೆ ಇನ್ನೊಂದು ಯುದ್ಧ ಆರಂಭವಾದಂತಾಗಿದೆ.
ಇಲ್ಲಿವರೆಗೆ ಒಳಗೊಳಗೆ ಕತ್ತಿ ಮಸೆಯುತ್ತಿದ್ದವರೆಲ್ಲ ಈಗ ಬಹಿರಂವಾಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ಇದು ಇಂದು ನಿನ್ನೆಯ ಮಾತಲ್ಲ. ತುಂಬಾ ವರ್ಷಗಳಿಂದ ನಿರ್ಮಾಪಕರು ತಮ್ಮ ಆಪ್ತರ ಹತ್ತಿರ ಈ ವಿಷಯದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸುತ್ತಾ ಬಂದಿದ್ದಾರೆ. ಆದರೆ ಒಟ್ಟಾಗಿ ಮುಂದೆ ನಿಂತಿರಲಿಲ್ಲ. ಯಾಕೆಂದರೆ ಎಲ್ಲರಿಗೂ ದೊಡ್ಡ ಸ್ಟಾರ್ನ ಕಾಲ್ಶೀಟ್ ಸಿಕ್ಕರೆ 'ಸಿಕ್ಕದ್ದೇ ಪುಣ್ಯ" ಎಂದು ಆತ ಕೇಳಿದಷ್ಟು ದುಡ್ಡು ಕೊಡುತ್ತಾರೆ.
ಬಂಪರ್ ಹೊಡೆದರೆ ಅದರ ಮೂರು ಪಟ್ಟು ಲಾಭ ಗಳಿಸಬಹುದೆನ್ನುವ ಲೆಕ್ಕಾಚಾರ. ಈಗ ಕೆಲವು ನಿರ್ಮಾಪಕರು ವರಾತ ತೆಗೆದಿದ್ದಾರೆ. ಆರ್ಥಿಕ ಹಿಂಜರಿತ ಮತ್ತು ಸಿನಿಮಾಗಳ ಸೋಲು ನಮ್ಮನ್ನು ಕಂಗೆಡೆಸಿವೆ. ಇವರು ಕೋಟಿ ಕೋಟಿ ಪಡೆಯುವುದನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವುದು ಅವರ ನಿಲುವು. ಇದು ಒಂದು ಮುಖ. ಇತ್ತ ಬನ್ನಿ. ಈ ಸ್ಟಾರ್ಗಳ ಮಾತನ್ನೂ ಕೊಂಚ ಕೇಳಿ.
ವಿಷ್ಣು, ಸುದೀಪ್, ದರ್ಶನ್, ದುನಿಯಾ ವಿಜಯ್, ಗಣೇಶ್, ಉಪ್ಪಿ, ವಿಜಯ ರಾಘವೇಂದ್ರ, ಶ್ರೀನಗರ ಕಿಟ್ಟಿ, ಮುರುಳಿ...ಹಾಗೇ ರಮ್ಯಾ, ಆಂದ್ರಿತಾ ರೇ, ಪೂಜಾಗಾಂಧಿ,ಅಮೂಲ್ಯಾ...ಇತ್ಯಾದಿ ನಾಯಕ-ನಾಯಕಿಯರು ತಮ್ಮ ತಮ್ಮ ಸಂಭಾವನೆಯನ್ನು ಇಂತಿಷ್ಟು ಎಂದು ಫಿಕ್ಸ್ ಮಾಡಿದ್ದಾರೆ.
ಪುನೀತ್ ಒಂದೂವರೆ ಕೋಟಿ, ಗಣೇಶ್ ಒಂದು ಹತ್ತು, ದರ್ಶನ್ ಒಂದೂ ಕಾಲು, ವಿಷ್ಣುವರ್ಧನ್ ಎಪ್ಪತ್ತೈದು ಲಕ್ಷ, ವಿಜಯ್ ಎಪ್ಪತ್ತೈದು ಲಕ್ಷ, ಸುದೀಪ್ ಎಪ್ಪತ್ತೈದು, ರಮ್ಯಾ ಇಪ್ಪತ್ತು ಲಕ್ಷ, ಅಂದ್ರಿತಾ ಹತ್ತು, ಪೂಜಾ ಗಾಂಧಿ ಎಂಟು ಲಕ್ಷ ಸಂಭವನೀಯ ಸಂಭಾವನೆ ಪಡೆಯುತ್ತಿದ್ದಾರೆ. ಇದರಲ್ಲಿ ಕೆಲವೊಮ್ಮೆ ಹೆಚ್ಚು ಕಮ್ಮಿ ಆಗುವುದೂ ಉಂಟು. ಹೊಸ ನಿರ್ಮಾಪಕರಿಗೆ ಈ ಸ್ಟಾರ್ಗಳು ಜಗ್ಗುವುದಿಲ್ಲ.
ಪ್ರತಿಷ್ಠಿತ ನಿರ್ಮಾಪಕರ ಹೆಸರಿಗಾದರೂ ಕೊಂಚ ಮರ್ಯಾ ಕೊಡುತ್ತಾರೆ. ಆದರೆ ಇವರು ಯಾಕೆ ಕಮ್ಮಿ ಮಾಡಿಕೊಳ್ಳಬೇಕು ಎಂಬುದು ಪ್ರಶ್ನೆ. ಈ ಸ್ಟಾರ್ಗಳು ಒಂದಲ್ಲ ಒಂದು ದಿನ ಎಲ್ಲರಂತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದರು. ಸಣ್ಣ ಪುಟ್ಟ ಪಾತ್ರ ಗಳಿಗೂ ನಿರ್ಮಾಪಕರ ಮನೆ ಬಾಗಿಲಿಗೆ ಹೋಗಿದ್ದರು. ಇಂದು ಕೋಟಿ ಕೊಡುವ ನಿರ್ಮಾಪಕರನೇ ಅಂದು ಸಾವಿರದಷ್ಟೂ ದುಡ್ಡನ್ನೂ ಇವರಿಗೆ ಕೊಟ್ಟಿರಲಿಲ್ಲ ಎನ್ನುವುದು ಅಷ್ಟೇ ಸತ್ಯ.
ವಿಜಯ್ , ಗಣೇಶ್ , ದರ್ಶನ್ ...ಹಿಂದೊಮ್ಮೆ ಹೀಗೆ ಅಲೆದಿದ್ದಾರೆ. ಅವರು ಹುಟ್ಟಾ ಶ್ರೀಮಂತರಲ್ಲ. ಆದರೆ ಅದೃಷ್ಟ ಕೈ ಹಿಡಿಯಿತು. ಸಹಜವಾಗಿ ಅವರು ದುಡ್ಡು ಕೇಳುತ್ತಾರೆ. ಯಾಕೆಂದರೆ ಹಾಕಿದ
ಬಂಡವಾಳವನ್ನು ಇವರು ವಾಪಸ್ ಮಾಡುತ್ತಾರೆ ಎನ್ನುವುದು ನಿರ್ಮಾಪಕರ ನಂಬಿಕೆ. ಅದನ್ನು ಬಹಳಷ್ಟು ಸಲ ಸ್ಟಾರ್ಗಳೂ ಉಳಿಸಿಕೊಂಡಿದ್ದಾರೆ. ಜನರು ನೋಡುತ್ತಾರೆ ಅಂತಲೇ ಇವರ ಮೇಲೆ ನಿರ್ಮಾಪಕರು ಕಾಸು ಸುರಿಯುತ್ತಾರೆ. ಇಲ್ಲದಿದ್ದರೆ ಅವರಾದರೂ ಯಾಕೆ ಕೊಡುತ್ತಾರೆ ಹೇಳಿ ?
ಈ ವಿಷಯಕ್ಕೆ ಸಂಬಂಧಿ ಸಿದಂತೆ ಪುನೀತ್ ಹೇಳಿದ್ದರು. ' ಯಾರೂ ಸುಮ್ಮನೆ ದುಡ್ಡು ಕೊಡುವುದಿಲ್ಲವೆ ಅಲ್ಲವೆ ?" ಇದು ಎಲ್ಲರಿಗೂ ಸೂಕ್ತವಾದ ಉತ್ತರ. ಸ್ಟಾರ್ಗಳಿಗೆ ಕೋಟಿ ಕೊಡೋದು ಕಷ್ಟ ಎನ್ನುವ ನಿರ್ಮಾಪಕರೇ ಹೊಸ ಹುಡುಗರಿಗೆ ನಯಾ ಪೈಸೆ ಬಿಚ್ಚುವುದಿಲ್ಲ ಎನ್ನುವ ಸತ್ಯ ನಿಮಗೆ ಗೊತ್ತಿರಲಿ. ಕೆಲವರು ದುಡ್ಡು ಕೊಟ್ಟು ನಾಯಕರಾಗುತ್ತಾರೆ. ಏನೇ ಆದರೂ ಒಬ್ಬ ನಟನ ಯೋಗ್ಯತೆಯನ್ನು ಜನರು ಅಳೆಯುತ್ತಾರೆ.
ಆ ಅಳತೆಯನ್ನು ನಿರ್ಮಾಪಕರು ಅಳೆದು ಸ್ಟಾರ್ ಗಳಿಗೆ ದುಡ್ಡು ಹೂಡುತ್ತಾರೆ. ಕೆಳಮಟ್ಟದ ಕಲಾವಿದರಿಗೆ ಸಾವಿರ ದುಡ್ಡು ಕೊಡಲೂ ಹಿಂದೆ ಮುಂದೆ ನೋಡುವ ನಿರ್ಮಾಪಕರಿಗೆ ಸ್ಟಾರ್ಗಳೇ ಸರಿಯಾದ ಉತ್ತರ ನೀಡುತ್ತಾರೆ...ನೀಡಲಿ...ಬಿಡಿ...


Click it and Unblock the Notifications











