ಮುಕ್ತಾಯ ಹಂತದಲ್ಲಿ ನಾಗತಿಹಳ್ಳಿ ಬ್ರೇಕಿಂಗ್ ನ್ಯೂಸ್
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬ್ರೇಕಿಂಗ್ ನ್ಯೂಸ್ ಚಿತ್ರ ಮುಕ್ತಾಯ ಹಂತ ತಲುಪಿದೆ. ಇದು ಒಂದು ಸದಭಿರುಚಿಯ ಸಿನಿಮಾ. ಕನ್ನಡದಲ್ಲಿ ಇದು ಮೊದಲ ಪ್ರಯತ್ನ. ವಿದ್ಯುನ್ಮಾನ ಮಾಧ್ಯಮಗಳ ಹಿನ್ನೆಲೆಯಲ್ಲಿ ನಡೆಯುವ ಕಥೆ. ಹಾಗಂತ ನಾಗತಿಹಳ್ಳಿಯವರು ತಮ್ಮ ಚಿತ್ರದ ಬಗ್ಗೆ ಹೇಳಿಕೊಂಡಿದ್ದಾರೆ.
ಈಗ ಎಲ್ಲರೂ ಬ್ರೇಕಿಂಗ್ ನ್ಯೂಸ್ಗೆ ತಹತಹಿಸುವ ಕಾಲ. ಒಳ್ಳೆಯ ಸುದ್ದಿಗಳೂ, ಕೆಟ್ಟ ಸುದ್ದಿಗಳೂ ಬ್ರೇಕಿಂಗ್ ನ್ಯೂಸ್ ವ್ಯಾಪ್ತಿಯಲ್ಲಿ ಇರುತ್ತವೆ. ಸದಾ ಪ್ರಸ್ತುತ ಸಾಮಾಜಿಕ ವಸ್ತುಗಳನ್ನೇ ಆಧರಿಸಿ ಚಿತ್ರ ನಿರ್ದೇಶಿಸುತ್ತಾ ಬಂದಿರುವ ಲೇಖಕ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರು ಈ ಬಾರಿಯೂ ಅಂಥದ್ದೇ ವಸ್ತುವನ್ನು ಆರಿಸಿಕೊಂಡು ಅದನ್ನು ಎಂದಿನ ತಮ್ಮ ವ್ಯಂಗ್ಯ ಮತ್ತು ತಮಾಷೆಯ ಶೈಲಿಯಲ್ಲಿ ಚಿತ್ರಿಸಿದ್ದಾರೆ.
ಈಗ ಚಿತ್ರೀಕರಣ ಬಹುತೇಕ ಮುಕ್ತಾಯ ಹಂತ ತಲುಪಿದೆ. ದೊಡ್ಡ ಬಳಗವೇ ತಾರಾಗಣದಲ್ಲಿದೆ. ಅಜಯ್ ರಾವ್, ರಾಧಿಕಾ ಪಂಡಿತ್, ಅನಂತನಾಗ್, ರಂಗಾಯಣ ರಘು, ಸಾಧು ಕೋಕಿಲ, ಮಂಡ್ಯ ರಮೇಶ್, ಬಿರಾದಾರ್, ಬ್ಯಾಂಕ್ ಜನಾರ್ಧನ್, ಎಸ್ ಶಿವರಾಂ, ಸಿ ಆರ್ ಸಿಂಹ, ಗುರುದತ್, ಸಿಹಿಕಹಿ ಚಂದ್ರು, ಕಾಸರಗೋಡು ಚಿನ್ನಾ ವಿಜಯಸಾರಥಿ ಹೀಗೆ ಅನೇಕರಿದ್ದಾರೆ.
ತಂತ್ರಜ್ಞರಾಗಿ 'ಪ್ಯಾರಿಸ್ ಪ್ರಣಯ' ಖ್ಯಾತಿಯ ಸ್ಟೀಫನ್ ಪ್ರಯೋಗ್ ಸಂಗೀತ ನಿರ್ದೇಶಕರಾಗಿ, ಕೃಷ್ಣಕುಮಾರ್ ಛಾಯಾ ನಿರ್ದೇಶಕರಾಗಿ, ಮೋಹನ್ ಬಿ.ಕೆರೆ ಕಲಾ ನಿರ್ದೇಶಕರಾಗಿ, ಸಕ್ಕರೆಬೈಲು ಶ್ರೀನಿವಾಸ್ ಮತ್ತು ಎಚ್ ನಾಗೇಶ್ ಸಹ ನಿರ್ದೇಶಕರಾಗಿ, ಹರಿಪ್ರಸಾದ್ ಜಯಣ್ಣ ಸಹಾಯಕ ನಿರ್ದೇಶಕರಾಗಿರುವ ಈ ಚಿತ್ರಕ್ಕೆ ಯೋಗರಾಜ್ ಭಟ್ ಮತ್ತು ಪ್ರೊ.ನಾ.ದಾಮೋದರ ಶೆಟ್ಟಿ ಅವರೊಂದಿಗೆ ನಾಗತಿಹಳ್ಳಿಯವರು ಗೀತೆಗಳನ್ನು ಬರೆದಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











