'ಸುಗ್ರೀವ'ನ ದಾಖಲೆ ಅಳಿಸಲು ಬರಲಿದೆ ರಾಜವಂಶ
ಇದೊಂಥರಾ ವಿಭಿನ್ನವಾದ ಚಿತ್ರ. ಸಾಮಾನ್ಯವಾಗಿ ಚಿತ್ರವೊಂದಕ್ಕೆ ಎಷ್ಟು ಮಂದಿ ನಿರ್ದೇಶಕರಿರಬಹುದು? ಒಬ್ಬರು ಅಥವಾ ಇಬ್ಬರು. ಆದರೆ ಶೈಲೇಂದ್ರ ಬಾಬು ನಿರ್ಮಿಸುತ್ತಿರುವ ಚಿತ್ರಕ್ಕೆ ಬರೋಬ್ಬರಿ 40 ಮಂದಿ ನಿರ್ದೇಶಕರು ಆಕ್ಷನ್, ಕಟ್ ಹೇಳಲು ಹೊರಟಿದ್ದಾರೆ. ಚಿತ್ರದ ಹೆಸರು 'ರಾಜ ವಂಶ'.
ಈ ಹಿಂದೆ ಶೈಲೇಂದ್ರ ಬಾಬು ಅವರು 'ಗೌರಮ್ಮ', 'ಕುಟುಂಬ' ಮತ್ತು 'ದುಬೈ ಬಾಬು' ಚಿತ್ರಗಳನ್ನು ನಿರ್ಮಿಸಿದ್ದರು. ಈ ಎಲ್ಲಾ ಚಿತ್ರಗಳಲ್ಲಿ ಉಪೇಂದ್ರ ಅವರೇ ನಾಯಕ ನಟರಾಗಿದ್ದರು. ಈಗ ತಮ್ಮ 'ರಾಜ ವಂಶ' ಚಿತ್ರಕ್ಕೆ ಹೊಸ ಮುಖವನ್ನು ಪರಿಚಯಿಸುತ್ತಿದ್ದಾರೆ. ಅವರು ಬೇರ್ಯಾರು ಅಲ್ಲ ಅವರ ಪುತ್ರ ಸುಮಂತ್ ಬಾಬು!
ಈ ಚಿತ್ರವನ್ನು 40 ಮಂದಿ ನಿರ್ದೇಶಿಸಲಿದ್ದಾರೆ ಎನ್ನುತ್ತವೆ ಗಾಂಧಿನಗರದ ಮೂಲಗಳು. ಅವರಲ್ಲಿ ಒಬ್ಬರಾದ ಎಸ್ ಮಹೇಂದರ್ ಅವರು ಹೇಳುವುದೇನೆಂದರೆ, ನಲವತ್ತು ಮಂದಿ ಅಲ್ಲದಿದ್ದರೂ ಕನಿಷ್ಠ ಮೂವತ್ತು ಮಂದಿಯಾದರು ಇರುತ್ತಾರೆ ಎನ್ನುತ್ತಾರೆ. ಈ ಬಗ್ಗೆ ಸದ್ಯಕ್ಕೆ ನಿಖರ ಮಾಹಿತಿಗಳಿಲ್ಲ.
ಈಗಾಗಲೆ ಎಲ್ಲ ನಿರ್ದೇಶಕರ ಜೊತೆ ಒಂದು ಸುತ್ತಿನ ಮಾತುಕತೆಯೂ ಮುಗಿದಿದೆ. ಎಲ್ಲರೂ ಒಪ್ಪಿಗೆಯನ್ನೂ ಸೂಚಿಸಿದ್ದಾರೆ. ಸದ್ಯದಲ್ಲೆ ವಿವರಗಳನ್ನು ಬಹಿರಂಗಪಡಿಸುವುದಾಗಿ ಎಸ್ ಮಹೇಂದರ್ ಹೇಳಿದ್ದಾರೆ. ನಾಯಕಿ ಸೇರಿದಂತೆ ಪೋಷಕರ ಪಾತ್ರಗಳ ಆಯ್ಕೆ ನಡೆಯಬೇಕಿದೆ.
ಗುರುಕಿರಣ್ ಸಂಗೀತ, ಬಿ ಎ ಮಧು ಸಂಭಾಷಣೆ ಚಿತ್ರಕ್ಕಿರಲಿದೆ. ಎಲ್ಲವೂ ಫೈನಲ್ ಆಗುತ್ತದೆ ಎಂಬ ನಂಬಿಕೆಯಲ್ಲಿ ಮಹೇಂದರ್ ಇದ್ದಾರೆ. ಬಹುಶಃ ನವೆಂಬರ್ 1ಕ್ಕೆ ಕನ್ನಡ ರಾಜ್ಯೋತ್ಸವದ ದಿನ 'ರಾಜವಂಶ' ಚಿತ್ರ ಸೆಟ್ಟೇರುವ ಸಾಧ್ಯತೆಗಳಿವೆ. ಸುಗ್ರೀವ ಚಿತ್ರದಲ್ಲಿ 10 ಮಂದಿ ನಿರ್ದೇಶರು 10 ಛಾಯಾಗ್ರಾಹಕರು ಸೇರಿ ಕೇವಲ 18 ಗಂಟೆಯಲ್ಲಿ ಚಿತ್ರೀಕರಣ ಮುಗಿಸಿದ್ದರು. ಕನ್ನಡ ಚಿತ್ರೋದ್ಯಮದಲ್ಲಿ ಈ ಚಿತ್ರ ಹೊಸ ದಾಖಲೆಯನ್ನು ನಿರ್ಮಿಸಿತ್ತು. ಈಗ ಈ ದಾಖಲೆಯನ್ನು ಹಳೆಸಲು ಹೊರಡುತ್ತಿದ್ದಾರೆ ಶೈಲೇಂದ್ರ ಬಾಬು.


Click it and Unblock the Notifications











