ಲಕ್ಷ್ಮಿಗೋಪಾಲಸ್ವಾಮಿ ‘ಪೂರ್ವಾಪರ’
- ದಟ್ಸ್ಕನ್ನಡ ಬ್ಯೂರೊ
ಹಾಗೆ ನೋಡಿದರೆ ಲಕ್ಷ್ಮಿ ಗೋಪಾಲಸ್ವಾಮಿ ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿಯಲ್ಲಿ ಯೇ ಒಂದು ರೀತಿಯ ಅಸಂಗತವಿದೆ. ಹೇಳಿಕೇಳಿ ಲಕ್ಷ್ಮಿ ಕನ್ನಡದ ಹೆಣ್ಣುಮಗಳು. ಕನ್ನಡತಿಯಾಬ್ಬಳು, ಹಲವಾರು ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ ನಂತರ ಕನ್ನಡದಲ್ಲಿ ನಟಿಸುತ್ತಿ ದ್ದಾಳೆ ಎನ್ನುವ ಸುದ್ದಿ ಅಸಂಗತವಲ್ಲದೆ ಇನ್ನೇನು?
ಪ್ರತಿಭಾವಂತೆ. ಚೆನ್ನಾಗಿ ಡಾನ್ಸ್ ಮಾಡುತ್ತಾಳೆ. ನೋಡಲಿಕ್ಕೆ ಚೆನ್ನಾಗಿದ್ದಾಳೆ- ಮುಂತಾದ ಬಣ್ಣನೆಗಳ ಲಕ್ಷ್ಮಿ ಗೋಪಾಲಸ್ವಾಮಿ ಬಗ್ಗೆ ದೂರುಗಳೂ ಇವೆ. ಅದು ಕನ್ನಡ ಚಿತ್ರರಂಗದ ಕುರಿತು ಸಂಬಂಧಪಟ್ಟಿದ್ದು.
ಕನ್ನಡ ಸಿನಿಮಾ ಕುರಿತು ಲಕ್ಷ್ಮಿಗೆ ಒಂಥರಾ ಅಸಡ್ಡೆ ಎಂದು ಕೆಲವರು ಗಟ್ಟಿಯಾಗೇ ದೂರುತ್ತಾರೆ. ಈ ದೂರುಗಳಿಗೆ ತಕ್ಕಂತೆಯೇ ಆಕೆಯ ವರ್ತನೆಯೂ ಇದೆ. ನೀವು ಕನ್ನಡ ಚಿತ್ರಗಳಲ್ಲಿ ಯಾಕೆ ನಟಿಸಿಲ್ಲ ? ಎಂದರೆ- ಪಾತ್ರ, ಚಿತ್ರದ ಗುಣಮಟ್ಟ ಇತ್ಯಾದಿ ಬಗ್ಗೆ ಆಕೆ ಮಾತನಾಡುತ್ತಾರೆ. ಆದರೆ, ಆಕೆ ಮಲಯಾಳಂನಲ್ಲಿ ಮಾಡಿರುವ ಪಾತ್ರಗಳೆಲ್ಲ ಅದ್ಭುತ ಎನ್ನುವಂತೇನೂ ಇಲ್ಲ . ಅತಿ ಸಾಧಾರಣ ಎನ್ನುವಂಥ ಚಿತ್ರಗಳಲ್ಲೂ ಆಕೆ ನಟಿಸಿದ್ದಾರೆ. ಕನ್ನಡದ ಮಟ್ಟಿಗೆ ಮಾತ್ರ- ಪಾತ್ರ ತೂಕದ್ದಾಗಿರಬೇಕು, ಅದು ಸಭ್ಯವಾಗಿಯೂ ಇರಬೇಕು !
ಹಳೆಯ ಮಾತು ಬಿಡಿ. ‘ಪೂರ್ವಾಪರ’ ಚಿತ್ರದಲ್ಲಿ ಆಕೆಗೊಂದು ಒಳ್ಳೆಯ ಪಾತ್ರವಿದೆ. ನವೀನ್ ಮಯೂರ್, ಒಂದಾನೊಂದು ಕಾಲದ ನಾಯಕಿ ಗೀತಾ ಕೂಡಾ ಚಿತ್ರದಲ್ಲಿದ್ದಾರೆ. ಜನಪ್ರಿಯ ಕಾದಂಬರಿಗಾರ್ತಿ ಎಂ.ಕೆ.ಇಂದಿರಾ ಅವರ ಕಾದಂಬರಿ ಆಧಾರಿತ ಚಿತ್ರವಿದು.
ಶೃಂಗೇರಿಯ ದೇವಸ್ಥಾನದಲ್ಲಿ ದೃಶ್ಯವೊಂದರ ಚಿತ್ರೀಕರಣದೊಂದಿಗೆ ‘ಪೂರ್ವಾಪರ’ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಯಿತು. ‘ಎಡಕಲ್ಲು ಗುಡ್ಡದ ಮೇಲೆ’ ಎನ್ನುವ ಪುಟ್ಟಣ್ಣನವರ ಚಿತ್ರ ನೆನಪಿದೆಯಲ್ಲಾ ; ಆ ಚಿತ್ರದಲ್ಲಿನ ರೋಮಿಯೋ- ಚಂದ್ರಶೇಖರ್ ‘ಪೂರ್ವಾಪರ’ ಚಿತ್ರವನ್ನು ನಿರ್ಮಿಸಿದ್ದಾರೆ.
ಎಡಕಲ್ಲು ಗುಡ್ಡ ದ ಚಂದ್ರಶೇಖರ್ ಎಂದೇ ಪ್ರಸಿದ್ಧರಾದ ಚಂದ್ರು ಪ್ರಸ್ತುತ ಅಮೆರಿಕಾ ವಾಸಿ. ಆ ಕಾರಣದಿಂದಲೇ ಒಟ್ಟಾವ, ಟೊರಾಂಟೊ, ಮಾಂಟ್ರಿಯಲ್, ನಯಾಗರ ಫಾಲ್ಸ್ , ಬ್ರಾಕ್ವಿಲ್ಲೆ ಗಳಲ್ಲಿ ‘ಪೂರ್ವಾಪರ’ದ ಚಿತ್ರೀಕರಣ ನಡೆದಿದೆ. ಚಂದ್ರು ದುಡ್ಡು ಹೂಡಿದ್ದಷ್ಟೇ ಅಲ್ಲ ; ತುಂಬ ದಿನಗಳ ನಂತರ ಬಣ್ಣ ಹಚ್ಚಿದ್ದಾರೆ. ಅವರ ಕಣ್ಣುಗಳಲ್ಲಿನ ತುಂಟತನ ಇನ್ನೂ ಹಾಗೇ ಇದೆಯೋ ?
‘ಚಿಗುರಿದ ಕನಸು’ ಚಿತ್ರಕ್ಕೆ ಒಳ್ಳೆಯ ಸಂಭಾಷಣೆ ಬರೆದಿದ್ದ ಕಥೆಗಾರ ಜಯಂತ ಕಾಯ್ಕಿಣಿ ‘ಪೂರ್ವಾಪರ’ಕ್ಕೂ ಮಾತು ಬರೆದಿದ್ದಾರೆ. ಛಾಯಾಗ್ರಹಣ ಜಿ.ಎಸ್.ಭಾಸ್ಕರ್ ಅವರದು. ಕಾಯ್ಕಿಣಿ, ದಿ.ವಿಜಯ ನಾರಸಿಂಹ ಮತ್ತು ಸಂಧ್ಯಾ ರವೀಂದ್ರನಾಥ್ ಗೀತೆಗಳನ್ನು ಬರೆದಿದ್ದಾರೆ. ಅಂದಹಾಗೆ, ದಿವಂಗತ ವಿಜಯಭಾಸ್ಕರ್ ಅವರ ಸಂಗೀತ ನಿರ್ದೇಶನದ ಕೊನೆಯ ಚಿತ್ರ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications