ಇನ್ನೆಲ್ಲಿ ನಮ್ಮ ‘ವಜ್ರ’ ಮುನಿ?!
ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ, ನಟ ಭಯಂಕರ ವಜ್ರಮುನಿ(62) ಇನ್ನಿಲ್ಲ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುವಾರ ಮುಂಜಾನೆ 5.30ಕ್ಕೆ, ನಗರದ ಅಪೋಲೋ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು. ಕಳೆದ ಕೆಲವು ವರ್ಷಗಳಿಂದ ಅವರು ಕಿಡ್ನಿ ವೈಫಲ್ಯಕ್ಕೆ ತುತ್ತಾಗಿದ್ದರು. ಪತ್ನಿ ಮತ್ತು ಮೂವರು ಪುತ್ರರನ್ನು ವಜ್ರಮುನಿ ಅಗಲಿದ್ದಾರೆ.
ಸುಮಾರು 300ಚಿತ್ರಗಳಲ್ಲಿ ಸ್ಮರಣೀಯ ಅಭಿನಯ ನೀಡಿದ್ದ ಅವರು, ರಂಗಭೂಮಿಯಲ್ಲೂ ತಮ್ಮ ಛಾಪು ಮೂಡಿಸಿದ್ದರು. ಅವರ ‘ಪ್ರಚಂಡ ರಾವಣ’ ನಾಟಕ ರಂಗಭೂಮಿಯಲ್ಲಿ ಅತ್ಯಂತ ಜನಪ್ರಿಯವಾಗಿದೆ.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಮಲ್ಲಮ್ಮನ ಪವಾಡ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ಸಾಮಾಜಿಕ ಚಿತ್ರಗಳಲ್ಲಿ ಮಾತ್ರವಲ್ಲ ಪೌರಾಣಿಕ, ಜಾನಪದ, ಐತಿಹಾಸಿಕ ಚಿತ್ರಗಳಲ್ಲೂ ತಮ್ಮ ಅಭಿನಯದ ಸಾಮಾರ್ಥ್ಯವನ್ನು ಪ್ರದರ್ಶಿಸಿದ್ದರು.
ಕನ್ನಡ ಚಿತ್ರರಂಗ ಕಂಡ ಖಳನಟರಲ್ಲಿ ವಜ್ರಮುನಿಗೆ ಅಗ್ರಸ್ಥಾನ. ಚಿತ್ರರಂಗದಲ್ಲಿ ಸಲ್ಲಿಸಿದ ಸಾಧನೆಗೆ ರಾಜ್ಯ ಸರ್ಕಾರದ ಮನ್ನಣೆ ಸಂದಿತ್ತು.
ಗಂಡು ಭೇರುಂಡ, ಬ್ರಹ್ಮಾಸ್ತ್ರ , ರಣಭೇರಿ ಚಿತ್ರಗಳನ್ನು ವಜ್ರಮುನಿ ನಿರ್ಮಾಣ ಮಾಡಿ ಕೈಸುಟ್ಟುಕೊಂಡಿದ್ದರು. ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications