ಕ್ಯಾನ್ಸರ್ ದೇಹಕ್ಕೆ ಹೊರತು ನನ್ನ ಕನಸುಗಳಿಗಲ್ಲ -ಎಂ.ಪಿ.ಶಂಕರ್
ವನ್ಯಜೀವಿಗಳನ್ನು ಬೆಳ್ಳಿತೆರೆ ಮೇಲಕ್ಕೆ ತಂದು, ಕನ್ನಡ ಚಿತ್ರಪ್ರೇಮಿಗಳಿಗೆ ಹೊಸ ಅನುಭವ ನೀಡಿದ ನಟ ಮತ್ತು ನಿರ್ಮಾಪಕ ಎಂ.ಪಿ.ಶಂಕರ್ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಆದರೂ ಅವರಲ್ಲಿನ ಜೀವನೋತ್ಸಾಹ ಸಾಸಿವೆಯಷ್ಟು ಸಹಾ ಕಡಿಮೆಯಾಗಿಲ್ಲ.
- ದಟ್ಸ್ ಕನ್ನಡ ಸಿನಿಡೆಸ್ಕ್
ನಗರದ ಖಾಸಗಿ ಹೋಟೆಲ್ನಲ್ಲಿ ಉಳಿದುಕೊಂಡಿರುವ ಎಂ.ಪಿ.ಶಂಕರ್, ಕಳೆದ ನಾಲ್ಕೈದು ದಿನಗಳಿಂದ ಸೈಂಟ್ ಜಾನ್ ಆಸ್ಪತ್ರೆಯಲ್ಲಿ ರೇಡಿಯೋ ಥೆರಪಿ ಮತ್ತು ಖಿಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಯಾನ್ಸರ್ ಜೊತೆಗೆ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಗಳೂ ಅವರನ್ನು ಪೀಡಿಸುತ್ತಿವೆ.
ದುಡ್ಡಿಗೆ ಕಷ್ಟ, ಆದರೆ ಕೈಚಾಚುವುದಿಲ್ಲ..
ಎಂ.ಪಿ.ಶಂಕರ್ ಅವರ ಆರ್ಥಿಕ ಸ್ಥಿತಿ ಆಶಾದಾಯಕವಾಗಿಲ್ಲ. ಜೊತೆಗೆ ವಿನಿವಿಂಕ್ನಲ್ಲಿ ಹಣಹೂಡಿ ಮೋಸ ಹೋದ ಕಹಿ ಅನುಭವವೂ ಅವರದು. ಆದರೆ ಮೈಸೂರಿನಲ್ಲೊಂದು ಸ್ವಂತದ ಮನೆಯಿದೆ. ಪೀಡಿಸುವ ಕ್ಯಾನ್ಸರ್, ಎಷ್ಟು ಹಣ ತಿನ್ನುವುದೋ ಗೊತ್ತಿಲ್ಲ. ಈಗಾಗಲೇ 2-3ಲಕ್ಷ ಕರಗಿದ್ದು, ಮುಂದಿನ ನಾಲ್ಕೈದು ವಾರಗಳಲ್ಲಿ ಅದೆಷ್ಟು ಲಕ್ಷಗಳು ಖರ್ಚಾಗುತ್ತವೆಯೋ ಗೊತ್ತಿಲ್ಲ.
ಎಂ.ಪಿ.ಶಂಕರ್ಗೆ ಸ್ವಾಭಿಮಾನ ಎಲ್ಲರಿಗಿಂತಲೂ ಸ್ವಲ್ಪ ಜಾಸ್ತಿಯೇ ಇದೆ. ಹೀಗಾಗಿ ಅವರು ಸರ್ಕಾರದ ಮುಂದೆ ಕೈಚಾಚಿಲ್ಲ.
ಹಾಸಿಗೆ ಮೇಲೂ ಸಿನಿಮಾ ಕನಸು!
‘ಗಂಧದ ಗುಡಿ’ ಸೇರಿದಂತೆ 110 ಚಿತ್ರಗಳಲ್ಲಿ ನಟಿಸಿ, 15ಕ್ಕೂ ಅಧಿಕ ಚಿತ್ರಗಳನ್ನು ನಿರ್ಮಾಣ ಮಾಡಿರುವ ಹೆಗ್ಗಳಿಕೆ ಎಂ.ಪಿ.ಶಂಕರ್ ಅವರದು. ತಮ್ಮ ಅನಾರೋಗ್ಯದ ಮಧ್ಯೆಯೂ ಅವರ ಸಿನಿಮಾ ಪ್ರೀತಿ ಕುಗ್ಗಿಲ್ಲ. ‘ವನ್ಯಜೀವಿಗಳ ಬಳಸಿಕೊಂಡು ಚೆಂದದ ಚಿತ್ರ ತಯಾರಿಸುವ ಹಂಬಲ ನನ್ನಲ್ಲಿದೆ. ದೇವರು ಮತ್ತು ಅಭಿಮಾನಿಗಳ ಆಶೀರ್ವಾದದಿಂದ ನನ್ನ ಕ್ಯಾನ್ಸರ್ ರಗಳೆ ಮುಗಿದ ತಕ್ಷಣ, ಚಿತ್ರ ಆರಂಭಿಸುತ್ತೇನೆ’ ಎಂದು ಸುದ್ದಿಗಾರರ ಬಳಿ ಅವರು ಹೇಳಿದ್ದಾರೆ.
ಅವರು ಬೇಗ ಗುಣಮುಖರಾಗಲಿ ಎಂಬುದು ದಟ್ಸ್ ಕನ್ನಡದ ಹಾರೈಕೆ.


Click it and Unblock the Notifications