ಅಭಿನಯವನ್ನೇ ಪೂರ್ಣಾವಧಿ ಉದ್ಯೋಗವನ್ನಾಗಿ ಆರಿಸಿಕೊಂಡಿರುವ ಬಿ.ಸಿ.ಪಾಟೀಲ
ವಿಷ್ಣುವರ್ಧನ್ ಅವರ ತಮಿಳು ಮೀಸೆ ಭಾರೀ ಜನಪ್ರಿಯವಾಗಿದೆ. ಬಿ.ಸಿ.ಪಾಟೀಲ್ ತಮ್ಮ ಹತ್ತೂರ ಒಡೆಯ ಚಿತ್ರಕ್ಕಾಗಿ ಈಗ ಅಂಥದ್ದೇ ಮೀಸೆಯನ್ನು ಅಂಟಿಸಿಕೊಂಡಿದ್ದಾರೆ.
'ಸೂರ್ಯ ಐಪಿಎಸ್" ಸೋಲಿನ ನಂತರ ಬಿ.ಸಿ.ಪಾಟೀಲ್ ಅವರು ನಿರ್ಮಿಸುತ್ತಿರುವ ಮಹತ್ವಾಕಾಂಕ್ಷೆಯ ಚಿತ್ರ 'ಹತ್ತೂರ ಒಡೆಯ." ಓಂ ಶಕ್ತಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಇದು ಬಿ.ಸಿ.ಪಾಟೀಲ್ ನಿರ್ಮಾಣದ ಹನ್ನೆರಡನೇ ಚಿತ್ರ. ಕಥೆ ಚೆನ್ನಾಗಿ ಬಂದಿದೆ ಯಶಸ್ವಿಯಾಗುವ ಬಗ್ಗೆ ನಂಬಿಕೆಯಿದೆ ಎನ್ನುತ್ತಾರೆ ಪಾಟೀಲ್.
ಇದೇ ಮೊದಲ ಬಾರಿಗೆ ಪಾಟೀಲ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಪ್ಪ ಹಾಗೂ ಮಗನ ದ್ವಿಪಾತ್ರದ ಅಭಿನಯ ಹತ್ತೂರ ಒಡೆಯನ ಪ್ರಮುಖ ಆಕರ್ಷಣೆಗಳಲ್ಲೊಂದು. ಚಿತ್ರದಲ್ಲಿ ನಮ್ಮ ಸಂಸ್ಕೃತಿಗೆ ಮೊದಲ ಸ್ಥಾನವಂತೆ. ಪಾಟೀಲರು ಹೇಳುವಂತೆ 45 ದಿನಗಳ ಒಂದೇ ಷೆಡ್ಯೂಲ್ನಲ್ಲಿ ಚಿತ್ರೀಕರಣ ಮುಕ್ತಾಯವಾಗುತ್ತದೆ. ಚಿತ್ರದಲ್ಲಿ ಏಳು ಹಾಡುಗಳಿವೆ. ಚಿತ್ರದ ಚಿತ್ರೀಕರಣ ಹುಬ್ಬಳ್ಳಿಯ ಮೂರು ಸಾವಿರ ಮಠ, ಮೈಸೂರು ಹಾಗೂ ಪಾಟೀಲರ ಸ್ವಂತ ಊರಾದ ಎಲಿವಾಳದಲ್ಲಿ ನಡೆಯಲಿದೆ.
ಪಾಟೀಲರ ಮೆಚ್ಚಿನ ಕಥೆಗಾರರಾದ ಬಿ.ಎ. ಮಧು ಹತ್ತೂರ ಒಡೆಯನಿಗೆ ಕಥೆ ಬರೆದಿದ್ದಾರೆ. ಸಂಭಾಷಣೆಯೂ ಅವರದೇ. ಕಥೆ ಮಾಡಲಿಕ್ಕೆ ಮಧು 3 ತಿಂಗಳು ಸಮಯ ತೆಗೆದುಕೊಂಡಿದ್ದಾರೆ. ಹತ್ತೂರ ಒಡೆಯ ಅವರ 50 ನೇ ಚಿತ್ರವಾದ್ದರಿಂದ ಕಥೆ ಹೊಸೆಯಲು ವಿಶೇಷ ಮುತುವರ್ಜಿ ವಹಿಸಿದ್ದಾರೆ.


Click it and Unblock the Notifications