ಸ್ಯಾಂಡಲ್ವುಡ್ ಮೇಲೆ ಸು.ಕೋರ್ಟ್ ತೀರ್ಪಿನ ಕರಿನೆರಳು!
ಬೆಂಗಳೂರು : ಸುಪ್ರೀಂಕೋರ್ಟ್ ತೀರ್ಪು, ಕನ್ನಡ ಚಿತ್ರರಂಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆಯೇ ಎಂಬುದು ಎಲ್ಲೆಡೆ ಚರ್ಚೆಯ ವಿಷಯ.
ಸುಪ್ರೀಂಕೋರ್ಟ್ನ ಹೊಸ ಆದೇಶದ ಪ್ರಕಾರ - ರಾಜ್ಯ ಸರ್ಕಾರಗಳು, ತೆರಿಗೆ ವ್ಯತ್ಯಾಸ ಮಾಡುವಂತಿಲ್ಲ. ಎಲ್ಲಾ ಭಾಷೆಯ ಚಿತ್ರಗಳಿಗೂ ಒಂದೇ ಬಗೆಯ ತೆರಿಗೆ ವಿಧಿಸಬೇಕು. ತಾರತಮ್ಯ ಮಾಡುವಂತಿಲ್ಲ. ಅಂದರೆ, ಸ್ಥಳೀಯ ಭಾಷಾ ಚಲನಚಿತ್ರಗಳಿಗೆ ಕಡಿಮೆ ತೆರಿಗೆ ವಿಧಿಸುವಂತಿಲ್ಲ.
ಹಿನ್ನೆಲೆ : ತೆಲುಗು ಚಿತ್ರಗಳಿಗೆ ಶೇ.10ರಷ್ಟು, ಪರಭಾಷಾ ಚಿತ್ರಗಳಿಗೆ ಶೇ.24ರಷ್ಟು ಮನರಂಜನಾ ತೆರಿಗೆಯನ್ನು ಆಂಧ್ರ ಸರ್ಕಾರ ವಿಧಿಸುತ್ತದೆ. ಸರ್ಕಾರದ ಧೋರಣೆ ವಿರೋಧಿಸಿ, ಆಶೀರ್ವಾದ್ ಫಿಲಂಸ್ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿ, ಸುಪ್ರೀಂ ಕೋರ್ಟ್ ಮೇಲ್ಕಂಡ ತೀರ್ಪನ್ನು ನೀಡಿದೆ.
ಕರ್ನಾಟಕದಲ್ಲಿ ಮುಂದೇನು?
ಸ್ವಮೇಕ್ ಮತ್ತು ಕರ್ನಾಟಕದಲ್ಲೇ ಚಿತ್ರೀಕರಣ ಪೂರ್ಣಗೊಳಿಸಿದ ಕನ್ನಡ ಚಿತ್ರಗಳಿಗೆ ಮನರಂಜನಾ ತೆರಿಗೆಯಲ್ಲಿ ಸಂಪೂರ್ಣ ವಿನಾಯಿತಿಯನ್ನು ಕರ್ನಾಟಕ ಸರ್ಕಾರ ನೀಡುತ್ತಿದೆ. ಪರಭಾಷಾ ಚಿತ್ರಗಳಿಗೆ ಶೇ.40ರಷ್ಟು ತೆರಿಗೆ ವಿಧಿಸಲಾಗಿದೆ. ಹೀಗಾಗಿಯೇ ಪರಭಾಷಾ ಚಿತ್ರಗಳ ಟಿಕೆಟ್ ದರ ದುಬಾರಿ. ಸುಪ್ರೀಂಕೋರ್ಟ್ ತೀರ್ಪಿನ ವ್ಯಾಪ್ತಿ ಮತ್ತು ಪರಿಣಾಮಗಳ ಬಗ್ಗೆ ಕನ್ನಡ ಚಿತ್ರರಂಗದ ಪ್ರಜ್ಞಾವಂತರು ಚರ್ಚೆ ನಡೆಸಿದ್ದಾರೆ.
‘ಭಾಷೆಗಿಂತಲೂ ಮನರಂಜನೆ ಮುಖ್ಯ, ಭಾಷೆಗಳನ್ವಯ ತೆರಿಗೆ ವಿಧಿಸುವುದು ಒಕ್ಕೂಟ ವ್ಯವಸ್ಥೆಗೆ ಅಪಾಯ ಉಂಟು ಮಾಡುತ್ತದೆ’ ಎಂಬುದು ಸುಪ್ರೀಂಕೋರ್ಟ್ ಅಭಿಪ್ರಾಯ.
ಸುಪ್ರೀಂ ಕೋರ್ಟ್ ತೀರ್ಪಿನಿಂದ ಟಿಕೆಟ್ ದರ ಜಾಸ್ತಿಯಾಗುತ್ತಾ ಅನ್ನೋದು ಎಲ್ಲರ ಪ್ರಶ್ನೆ. ಕನ್ನಡ ಚಿತ್ರಗಳನ್ನು ಕಾಪಾಡಿಕೊಳ್ಳುವುದು ಹೇಗೆ? ನಿಮ್ಮ ಸಲಹೆಗಳಿಗೆ ಸ್ವಾಗತ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications