ತಮ್ಮ ಹೊಸ ಸಿನಿಮಾ ತೆರೆ ಕಾಣುವ ಹೊತ್ತಲ್ಲಿ ವಿಷ್ಣು ಸದಾ ಗಾಯಬ್ಬು. ಅದು ಅವರೇ ಹಾಕಿಕೊಂಡ ನಿಯಮ ! ಇದೀಗ ‘ಸಿಂಹಾದ್ರಿಯ ಸಿಂಹ’ನ ಘರ್ಜನೆಗೆ ಎರಡು ದಿನ ಇರುವಾಗ ವಿಷ್ಣು ಊರು ಬಿಟ್ಟಿದ್ದಾರೆ.
*ನಾಗರಾಜ ಹರಿಯಬ್ಬೆ
ವಿಷ್ಣುವರ್ಧನ್ ದಂಪತಿಗಳಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಜೋರು ಬೀಳ್ಕೊಡುಗೆ !
ಮುಖ್ಯಮಂತ್ರಿಗಳಿಗೋ, ವಿದೇಶೀ ರಾಜಕೀಯ ಪ್ರತಿನಿಧಿಗೋ ಟಾಟಾ ಹೇಳುವ ಪರಿಯ ಸಂಭ್ರಮ. ನೇಪಾಳ ಪ್ರವಾಸಕ್ಕೆ ಹೊರಟಿದ್ದ ವಿಷ್ಣುವರ್ಧನ್ ದಂಪತಿಗಳನ್ನು ವಿಮಾನ ಹತ್ತಿಸಲು ‘ಜಮೀನ್ದಾರ್ರು’ ನಿರ್ಮಾಪಕ ಕೊಬ್ರಿ ಮಂಜು, ಸೂರಪ್ಪ ಬಾಬು ಹಾಗೂ ‘ಸಿಂಹಾದ್ರಿಯ ಸಿಂಹ’ದ ನಿರ್ಮಾಪಕ ವಿಜಯ ಕುಮಾರ್ ಮೊದಲಾದವರ ಗೆಳೆಯರು ಮತ್ತು ಖಾಸಾ ಅಭಿಮಾನಿಗಳ ಬಳಗ ಬೊಕೆ ಹಿಡಿದು ನಿಂತಿತ್ತು.
ಸಿನಿಮಾ ರಿಲೀಸಾಗುವಾಗ ವಿಷ್ಣು ಟೂರ್ ಗ್ಯಾರಂಟಿ, ಇದೇ ಪ್ರತೀತಿ :
ಅವರ ಲೇಟೆಸ್ಟ್ ಸಿನಿಮಾ ಗಳ ಪೈಕಿ ಒಂದರ ಬಿಡುಗಡೆಯ ದಿನ ಮಾತ್ರ ವಿಷ್ಣು ಬೆಂಗಳೂರಲ್ಲಿದ್ದಿದ್ದು. ಆಗ ಅದೇ ಒಂದು ದೊಡ್ಡ ಸುದ್ದಿ. ವಿಷ್ಣು ಗೆಳೆಯರ ಬಳಗಕ್ಕೆ ಪರಮಾಶ್ಚರ್ಯ! ತಮ್ಮ ಸಿನಿಮಾ ಬಿಡುಗಡೆಯಾದ ತಕ್ಷಣ ಅದನ್ನು ನೋಡದಿರುವುದು ವಿಷ್ಣು ಹಾಬಿ. ನೋಡದಿರುವುದು ಹಾಗಿರಲಿ, ಸಿನಿಮಾ ಬಿಡುಗಡೆಯಾಗುವ ಮುನ್ನವೇ ಎಲ್ಲಿಗಾದರೂ ಟೂರ್ ಹೊರಡುತ್ತಾರೆ. ಬರುವುದು ಸಿನಿಮಾ ಒಂದು ವಾರ ಪೂರೈಸಿದ ನಂತರವೇ. ಇದೀಗ ವಿಷ್ಣು ನೇಪಾಳ ನೋಡಲು 10 ದಿನ ರಜೆ ತೆಗೆದುಕೊಂಡಿದ್ದಾರೆ; ‘ಸಿಂಹಾದ್ರಿಯ ಸಿಂಹ’ ಬಿಡುಗಡೆಯಾಗುವ ಎರಡು ದಿನ ಮುಂಚೆ ! ಜೂನ್ 14ಕ್ಕೆ ಪ್ರವಾಸದಿಂದ ವಾಪಸ್. ನಂತರ ಇನ್ನೊಂದು ಸಿಂಹನಾಗಿ ಘರ್ಜನೆ. ಥರ್ಟಿ ಫಾರ್ಟಿ ಮೀಸೆ ಅಂಟಿಸಿಕೊಳುವ ಈಗಿನ ಸರದಿ ‘ರಾಜ ಸಿಂಹ’ನದ್ದು. ಈ ಸಿನಿಮಾ ನಿರ್ದೇಶನದ ಹೊಣೆ ಕೂಡ ಭಾಗೀರಥಿ ಧಾರಾವಾಹಿ ಖ್ಯಾತಿಯ ಎಸ್.ನಾರಾಯಣರೇ ಹೊತ್ತಿದ್ದಾರೆ.
ರಾಜ ಸಿಂಹನ ಘರ್ಜನೆ ಒಂದು ಹಂತಕ್ಕೆ ಬರುವ ಮೊದಲೇ ವಿಷ್ಣು ಅವರನ್ನು ಅವರ ಗೆಳೆಯರ ಬಳಗ ಮತ್ತೆ ಅವರನ್ನು ವಿಮಾನ ನಿಲ್ದಾಣದಲ್ಲಿ ಬೀಳ್ಕೊಡಬೇಕಾಗುತ್ತದೆ. ಯಾಕೆಂದರೆ, ಆಗಸ್ಟ್ ತಿಂಗಳ ಕೊನೆ ವಾರ ಅವರು ವಿಶ್ವ ಕನ್ನಡ ಸಮ್ಮೇಳನಕ್ಕೆ ಅಮೆರಿಕಾಗೆ ಹಾರಲಿದ್ದಾರೆ.
ಹ್ಯಾಪಿ ಹಾಲಿಡೇಸ್ ವಿಷ್ಣು !
Post Your Views
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications