ರವಿಚಂದ್ರನ್ ಈಗ ಬಿಜಿಯೋ ಬಿಜಿ!
ಕ್ರೇಜಿಸ್ಟಾರ್ ರವಿಚಂದ್ರನ್ ಈಗ ಖುಷಿಯಲ್ಲಿದ್ದಾರೆ ಮಾತ್ರವಲ್ಲ ಬಿಜಿಯಾಗಿದ್ದಾರೆ ಕೂಡ. ‘ಅಹಂ ಪ್ರೇಮಾಸ್ಮಿ’ ಚಿತ್ರದ ಯಶಸ್ಸು(?) ರವಿ ಅವರನ್ನು ಮತ್ತಷ್ಟು ಕ್ರಿಯಾಶೀಲರನ್ನಾಗಿಸಿದೆ.
ತಮ್ಮ ಮಹತ್ವಾಕಾಂಕ್ಷೆಯ ಚಿತ್ರ ‘ಅಹಂ ಪ್ರೇಮಾಸ್ಮಿ’ ಗುಂಗಿನಿಂದ ಹೊರಬಂದಿರುವ ರವಿಚಂದ್ರನ್, ತಮ್ಮ ಇತರೆ ಕನಸುಗಳತ್ತ ಗಮನಹರಿಸಿದ್ದಾರೆ. ಇತ್ತೀಚೆಗಷ್ಟೇ ಹಾಡುಗಳ ಧ್ವನಿಮುದ್ರಣ ಮುಗಿಸಿದ ‘ಪಾಂಡು ರಂಗ ವಿಠಲ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ರವಿಚಂದ್ರನ್, ಪ್ರೇಮ ಅಭಿನಯದ ಈ ಚಿತ್ರ ಜುಲೈ ಕಡೆಯವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ತೆರೆಕಾಣುವ ಸಾಧ್ಯತೆಗಳಿವೆ.
ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡುತ್ತಿರುವ ‘ಆದಿಶೇಷ ’ ಚಿತ್ರದ ಬಗೆಗೆ ತಲೆಕೆಡಿಸಿಕೊಂಡಿರುವ ರವಿ, ಮತ್ತೊಂದು ಕಡೆ ನಿರ್ಮಾಪಕ ಸಂದೇಶ್ ನಾಗರಾಜ್ರ ಹೊಸ ಚಿತ್ರಕ್ಕಾಗಿ ಚಿತ್ರಕಥೆ ಬರೆಯುತ್ತಿದ್ದಾರೆ.
ಈ ಎಲ್ಲಾ ಚಿತ್ರಗಳ ಕಥೆ, ನಿರ್ದೇಶನದ ಹೊಣೆಯನ್ನು ರವಿಚಂದ್ರನ್ ಹೊತ್ತಿದ್ದಾರೆ. ‘ಅಹಂ ಪ್ರೇಮಾಸ್ಮಿ’ ಮತ್ತು ‘ಮಲ್ಲ’ ಚಿತ್ರಗಳಿಗೆ ಸಂಗೀತ ನೀಡಿ ಪಳಗಿರುವ ರವಿಚಂದ್ರನ್, ‘ಪಾಂಡುರಂಗ ವಿಠಲ’ ಮತ್ತು ‘ಆದಿಶೇಷ’ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.
ಈ ಮಧ್ಯೆನಿರ್ಮಾಪಕ ಕೆ.ಮಂಜು ಅವರಿಗಾಗಿ ‘ಬಸವ’ ಚಿತ್ರವನ್ನು ಸಿದ್ಧ ಪಡಿಸಲು ರವಿಚಂದ್ರನ್ ಸಿದ್ಧರಾಗುತ್ತಿದ್ದಾರೆ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications