ಮದುವೆ ಆಗ್ತಾರಂತೆ; ಅದೂ ಅನೌನ್ಸ್ ಮಾಡಿದ ನಂತರ!
ಮಕಾಡೆ ಮಲಗಿದ ದೇಸಾಯಿ ಚಿತ್ರ 'ಪರ್ವ"ದಲ್ಲಿ ಕುಣಿದು ಕುಪ್ಪಳಿಸಿ ಸೋತಿದ್ದ ರೋಜಾ ಈಗ ತಮ್ಮ ಒಂದೊಂದು ಕದಲಿಕೆಗೂ ಸುದ್ದಿಗೋಷ್ಠಿ ಕರೆಯುವ ಚಾಳಿಗೆ ಬಿದ್ದಿದ್ದಾರೆ.
ಅವರ ಈ ನಿರ್ಧಾರಕ್ಕೆ ಕಾರಣವೇನು?
ಇದನ್ನು ಹೇಳಲೆಂದೇ ಮೊನ್ನೆ ಒಂದು ಸುದ್ದಿಗೋಷ್ಠಿ ನಡೆಸಿದರು. ಫೈನಾನ್ಷಿಯರ್ ಎಸ್.ಮುಕನ್ಚಂದ್ ಬೋಥ್ರಾ ಎಂಬಾತನಿಗೆ ರೋಜಾ ಕೊಟ್ಟ ಚೆಕ್ಕಿನ ಕುರಿತು ತಗಾದೆ ಎದ್ದಿತ್ತು. ಬೋಥ್ರಾ ಕೋರ್ಟಿಗೆ ಹೋದರು. ವಿಚಾರಣೆ ಬಿಸಿಯೇರಿತು. ಕೊನೆಗೆ ಕೋರ್ಟಿನ ಹೊರಗಡೆಯೇ ಬೋಥ್ರಾಗೆ ಅಷ್ಟೋ ಇಷ್ಟೋ ಕೊಟ್ಟು, ಕೇಸು ವಾಪಸ್ಸು ಪಡೆವಂತೆ ಮಾಡಿದರು ರೋಜಾ.
ಪತ್ರಿಕೆ ಹಾಗೂ ನಿಯತಕಾಲಿಕಗಳನ್ನು ಕಣ್ಣಿಗಂಟಿಸಿಕೊಂಡು ಓದುವುದು ರೋಜಾ ಹವ್ಯಾಸ. ಹೀಗಾಗಿ ತಮ್ಮ ಕೇಸಿನ ಬಗ್ಗೆ ಬಂದ ಎಲ್ಲಾ ವರದಿಗಳ ಕಟಿಂಗ್ಸು ಅವರ ಬಳಿ ಇದೆ. ಇದನ್ನು ಹೇಳಿದ ನಂತರ ರೋಜಾ ರಂಗಾದರು. ಮಾತು ಬಿಸಿಯಾಯಿತು...
'ಈ ಮೀಡಿಯಾದವರಿಗೆ ಬೇರೆ ಕೆಲಸವೇ ಇಲ್ಲವಾ? ನಾನು ಬೋಥ್ರಾಗೆ ಹಣ ಕೊಟ್ಟು ಕೇಸು ಮುಚ್ಚಿ ಹಾಕಿಬಿಟ್ಟೆ ಅಂತ ಬರೀತಾರೆ. ನಾನು ಆತನಿಗೆ ಏನೂ ಕೊಡುವ ಹಾಗೇ ಇರಲಿಲ್ಲ. ಸುಮ್ಮನೆ ಕೋರ್ಟು ಸುತ್ತಿ ಸುತ್ತಿ ಮನಸ್ಸು ನೊಂದಿತ್ತು. ಕೋರ್ಟಿನ ಸಹವಾಸ ಸಾಕು ಅಂತ ದುಡ್ಡು ಕಳಕೊಂಡೆ. ನಾನು ಸೈನ್ ಮಾಡಿ ಕೊಟ್ಟಿರುವ ಚೆಕ್ಕುಗಳು ಯಾರ್ಯಾರ ಬಳಿ ಇವೆಯೋ, ಅವರೆಲ್ಲಾ ಇನ್ನು 15 ದಿನಗಳೊಳಗೆ ನನ್ನ ವಕೀಲರಾದ ಶಿವ ಮತು ಸೆಲ್ವರಾಜ್ ಹತ್ತಿರ ಬಂದು ಮಾತಾಡಿ, ದುಡ್ಡು ಪಡೆಯಲಿ. ಚೆಕ್ಕು ಕೊಟ್ಟ ತಪ್ಪಿಗೆ ಸುಖಾ ಸುಮ್ಮನೆ ಕೋರ್ಟಿಗೆಳೆಯುವ ದುಸ್ಸಾಹಸ ಮಾಡದಿರಲಿ.
ಮೊದಲೇ ನೊಂದಿರುತ್ತೇವೆ. ಮಾಧ್ಯಮಗಳು ಗಾಯದ ಮೇಲೆ ಉಪ್ಪು ಸುರಿಯೋ ಕೆಲಸವನ್ನು ಮಾಡುತ್ತವೆ. ಪತ್ರಿಕೆಯವರು ಯಾವ ಮಟ್ಟಕ್ಕೆ ಬರೀತಾರೆ ಅಂದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನಂತೆ. ನಾನೇನು ಕರೆದು ಇವರಿಗೆ ಹೇಳಿದೆನಾ? ಹೆಣ್ಣು ಮಕ್ಕಳನ್ನು ನೋಯಿಸುವವರಿಗೆ ದೇವರು ಒಳ್ಳೇದು ಮಾಡಲ್ಲ. ಇದು ಎಲ್ಲರಿಗೂ ನೆನಪಿರಲಿ".
ಖಾರದ ಮಾತು ಮುಗಿಸಿದ ನಂತರ ಕ್ಷಣ ಮೌನ. ಗಂಟಿಕ್ಕಿದ ಮುಖದಲ್ಲಿ ಸ್ವಲ್ಪ ಹೊತ್ತಿನ ನಂತರ ಮಂದಹಾಸ. 'ಅಂದಹಾಗೆ, ಇನ್ನು ಕೆಲವೇ ದಿನಗಳಲ್ಲಿ ನಾನು ಇನ್ನೊಂದು ಸುದ್ದಿಗೋಷ್ಠಿ ಕರೆಯುತ್ತೇನೆ. ಅದು ನನ್ನ ಸಂತೋಷದ ದಿನವಾಗಿರುತ್ತದೆ. ಅವತ್ತು ನನ್ನ ಮದುವೆಯನ್ನು ಪ್ರಕಟಿಸುತ್ತೇನೆ. ಅಲ್ಲಿವರೆಗೆ ಏನೇನೋ ಬರೀಬೇಡಿ" ಅಂತ ಹೇಳಿ ಸರಬರನೆ ನಡೆದ ರೋಜಾ ಮೊಗದಲ್ಲಿ ತುಂಟ ನಗೆಯಿತ್ತು. ಏಟು ತಿಂದಂತೆ ಬೇಸ್ತು ಬಿದ್ದ ಪತ್ರಕರ್ತರ ಗಲ್ಲದ ಮೇಲೆ ಕೈಯಿತ್ತು. ಅದು ಸರಿ, ರೋಜಾ ಮೆಚ್ಚಿರುವವನಾರು?


Click it and Unblock the Notifications