ಶಿವರಾಜ್ ಕುಮಾರ್ ‘ನಗೆ’ ನೆನೆಗುದಿಗೆ ಬಿತ್ತು
ಎನ್.ಕೆ. ಪ್ರಕಾಶ್ಬಾಬು ಕೈ ಎತ್ತಿದ್ದಾರೆ. ಅವರ ಹತ್ತಿರ ಕಾಸಿಲ್ಲವಂತೆ. ಹೀಗಾಗಿ ಶಿವರಾಜ್ ಕುಮಾರ್ 'ನಗೆ" ಅರ್ಥಾತ್ 'ಸ್ಮೈಲ್" ಚಿತ್ರೀಕರಣ ಸ್ಥಗಿತಗೊಂಡಿದೆ. ಶಿವರಾಜ್ಗೇನೋ ಬೇರೆ ಕೆಲಸಗಳಿವೆ. ಆದರೆ, ಇದರಿಂದ ಕಂಗಾಲಾಗಿ ಕೂತಿರುವವರು ಸೀತಾರಾಮ ಕಾರಂತ.
'ಚಂದ್ರಮುಖಿ ಪ್ರಾಣಸಖಿ"ಯಂಥಾ ಹಿಟ್ ಹಾಗೂ 'ಶ್ರೀರಸ್ತು ಶುಭಮಸ್ತು"ವಿನಂಥಾ ಫ್ಲಾಪ್ ಚಿತ್ರ ಕೊಟ್ಟಿರುವ ಸೀತಾರಾಮ ಕಾರಂತರ ಪ್ರತಿಭೆ ಬಗ್ಗೆ ಅನುಮಾನ ಬೇಡ. ತಮ್ಮ ನಾಯಕತ್ವದ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳ ಸಾಲು ಸೋಲಿನಿಂದ ಹೊರಬರುವ ಶಿವರಾಜ್ ಕುಮಾರ್ ಯತ್ನಕ್ಕೆ 'ಸ್ಮೈಲ್" ಆಶಾಕಿರಣವಾಗಿತ್ತು. ಆದರೆ ಯಾಕೋ ಶಿವರಾಜ್ ನಸೀಬೇ ಸರಿಯಿಲ್ಲ. ಒಂದೆಡೆ 'ಜಿಲ್ಲಾಧಿಕಾರಿ" ನೆನೆಗುದಿಗೆ ಬಿತ್ತು. ಈಗ 'ಸ್ಮೈಲ್"ಗೂ ಅದೇ ಸ್ಥಿತಿ. ಪ್ರಕಾಶ್ ಬಾಬೂನ ನೆಚ್ಚಿಕೊಂಡಿದ್ದ ಕಾರಂತರಂತೂ ಅಕ್ಷರಶಃ ಕಂಗಾಲಾಗಿದ್ದಾರೆ.
ಮುಂಬಯಿ ಬೆಡಗಿ ನೇಹಾ ಈ ಚಿತ್ರದ ನಾಯಕಿ. ಹೀಗಾಗಿ ಮುಂದೆ ಆಕೆಯ ಡೇಟ್ಸ್ನ ತೊಂದರೆಗಳು ಇದಿರಾಗುವ ಅಪಾಯವಿದೆ. ಇವೆಲ್ಲಾ ಚಿಂತೆಯಲ್ಲಿ ಕಾರಂತರು ಮುಳುಗಿದ್ದರೆ, ಅತ್ತ ತಮ್ಮ ಚೊಚ್ಚಿಲ ನಾಯಕತ್ವದ ಚಿತ್ರಕ್ಕಾಗಿ ಶಿವಮಣಿ ಮೈತುಂಬಾ ಸಾಲ ಮಾಡಿಕೊಂಡಿರುವ ಸುದ್ದಿ ಬಂದಿದೆ. ಶಿವಮಣಿಗೆ ಕೈ ಎತ್ತಿದ ನಿರ್ಮಾಪಕನ ಹೆಸರು ಸಂಪತ್ ಕುಮಾರ್. 'ಲವ್ ಯೂ" ಸಿನಿಮಾಗೆ ಕಾಸು ಹಾಕಿದ್ದೇ ತಡ ಆತನ ಸಂಪತ್ತು ಢಮಾರ್!


Click it and Unblock the Notifications