ಸಿಂಗ್ ಬಾಬು ಮೈ ಕೊಡವಿ ಎದ್ದಿದ್ದಾರೆ.. ತಟ್ಟಿ ಚಪ್ಪಾಳೆ!
ತರಲೆ ತಾಪತ್ರಯಗಳೇನೇ ಇರಲಿ. ಆದರೆ ಬಾಬು ಕೆಲಸದಲ್ಲಿ ಮಾತ್ರ ರಾಕ್ಷಸ. ಚಿತ್ರ ಗೆಲ್ಲಲಿ, ಸೋಲಲಿ ತಾನು ಮಾತ್ರ ಒಂದಲ್ಲ ಒಂದು ಚಿತ್ರದಲ್ಲಿ ತೊಡಗಿಸಿಕೊಂಡಿದ್ದೇ ಇರುತ್ತಾರೆ. 'ಕೋತಿಗಳು ಸಾರ್ ಕೋತಿಗಳು'ನಂತರ ಅವರ ಯಾವುದೇ ಚಿತ್ರ ಹಿಟ್ ಆಗಿಲ್ಲ. 'ಕತ್ತೆಗಳು ಸಾರ್ ಕತ್ತೆಗಳು', 'ಕಾಂಚನ ಗಂಗಾ', 'ಲವ್', 'ಮೋಹಿನಿ' ಎಲ್ಲಾ ಸಾಲಾಗಿ ಪಾಚಿಕೊಂಡ ಚಿತ್ರಗಳೇ. ಆದರೂ ಬಾಬು ಸುಮ್ಮನಿಲ್ಲ.
ಬೌನ್ಸಿಂಗ್ ಬ್ಯಾಕ್ ಅಂತಾರಲ್ಲ. ಆ ಕೆಲಸ ಮಾಡುತ್ತಿದ್ದಾರೆ. ಕೆಲವು ತಿಂಗಳ ಹಿಂದೆ 'ತಿಪ್ಪಾರಳ್ಳಿ ತರಲೆಗಳು'ಪ್ರಾರಂಭಿಸಿದ್ದು ಗೊತ್ತು. ಅದಿನ್ನೂ ಮುಗಿದಿಲ್ಲ. ಆಗಲೇ ಬಾಬು, ಉಪೇಂದ್ರ ಅಭಿನಯದಲ್ಲಿ 'ಬುದ್ದಿವಂತ'ಎಂಬ ಚಿತ್ರ ನಿರ್ಮಿಸುತ್ತಿದ್ದಾರೆ. ಅದನ್ನು ಅವರ ಶಿಷ್ಯ ರಾಮನಾಥ್ ಋಗ್ವೇದಿ ನಿರ್ದೇಶಿಸುತ್ತಿದ್ದಾರೆ. ಇವೆರಡರ ಜತೆ ಬಾಬು ತಮ್ಮ ಪುತ್ರನಿಗೊಂದು 'ಮಡಿಕೇರಿಲಿ ಮಂಜು'ಎಂಬ ಚಿತ್ರ ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಅದರ ಜತೆಗೆ 'ಕೃಷ್ಣೇಗೌಡನ ಆನೆ'ಗೂ ಅವರು ಜೀವ ಕೊಡಲಿದ್ದಾರೆ ಎಂಬ ಸುದ್ದಿ ಬಂದಿದೆ. ಈ ಚಿತ್ರ ಹಿಂದೆಯೇ ಪ್ರಾರಂಭವಾಗಬೇಕಿತ್ತು. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷದ ಆರಂಭದಲ್ಲಿ ಆ ಚಿತ್ರ ಪ್ರಾರಂಭವಾಗುವ ಸಾಧ್ಯತೆಯಿದೆ.
ಬಾಬು ನಾಲ್ಕುನಾಲ್ಕು ಚಿತ್ರಗಳನ್ನಿಟ್ಟುಕೊಂಡು ಈ ಬಾರಿ ಗೆದ್ದೇ ಗೆಲ್ಲುತ್ತೇನೆ ಎನ್ನುತ್ತಿದ್ದಾರೆ. ಅವರು ಗೆಲ್ಲಲಿ ಎನ್ನುವುದು ಹಾರೈಕೆ. ಗೆದ್ದೆ ಮೇಲೆ ಯಶಸ್ಸು ತಲೆಗೇರಿಸಿಕೊಳ್ಳಬಾರದು ಎನ್ನುವುದು ಬೇಡಿಕೆ. ಇನ್ನೆಲ್ಲಾ ಬಾಬುಗೆ ಬಿಟ್ಟಿದ್ದು


Click it and Unblock the Notifications