ಬೆಳ್ಳಿತೆರೆಯಲ್ಲಿ ಡಾ.ವಿಠಲ್ ರಾವ್ ರ ಹೊಸ ಅವತಾರ!
ಕಾಮಿಡಿ ನಟರು ಹೀರೋಗಳಾಗೋದು ಹೊಸ ವಿಷ್ಯಾ ಏನಲ್ಲ. ಹಾಸ್ಯ ನಟರು, ಹೀರೋಗಳಾಗಿ ಅಪಹಾಸ್ಯಕ್ಕೆ ಗುರಿಯಾದ ನಿದರ್ಶನಗಳು ಇಲ್ಲದಿಲ್ಲ. ಗೆದ್ದವರೂ ಸಹಾ ಇದ್ದಾರೆ. ಇದೀಗ ಡಾ.ವಿಠಲ್ ರಾವ್, ನಾಯಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಕಿರುತೆರೆಯ 'ಸಿಲ್ಲಿ ಲಲ್ಲಿ'ಧಾರಾವಾಹಿಯಲ್ಲಿ, ವೀಕ್ಷಕರು ಬಿದ್ದುಬಿದ್ದು ನಗುವಂತೆ ಟೈಲಾಗ್ ಹೊಡೆಯುತ್ತಿದ್ದ ವಿಠಲ್ ರಾವ್, ಬೆಳ್ಳಿತೆರೆಯಲ್ಲಿ ಏನ್ ಮಾಡ್ತಾರೋ ನೋಡಬೇಕಿದೆ. ಅಂದ ಹಾಗೇ ಇವನ ನಿಜನಾಮ ರವಿಶಂಕರ್. ಮಂಜುಳಾ ಗುರುರಾಜ್ ಅಳಿಯ ಎಂಬುದು ಪ್ರೇಕ್ಷಕರಿಗೆ ಅನವಶ್ಯಕ ಮಾಹಿತಿ.
'ಪಯಣ'ಅನ್ನೋ ಚಿತ್ರದಲ್ಲಿ ರವಿಶಂಕರ್ ನಾಯಕ. ಪಲ್ಲಕ್ಕಿ ಮತ್ತು ಬೆಳದಿಂಗಳಾಗಿ ಬಾ ಚಿತ್ರದ ಮುಖಾಂತರ ಗಮನ ಸೆಳೆದಿರುವ ರಮಣೀತು ಚೌಧುರಿ ನಾಯಕಿ. ಕಿರಣ್ ಗೋವಿ ನಿರ್ದೇಶನದ ಈ ಚಿತ್ರಕ್ಕೆ ದುಡ್ಡು ದುಡಿಯಲು ವೆಂಕಟೇಶ್ ಸಿದ್ದರಾಗಿದ್ದಾರೆ.
ರವಿಶಂಕರ್ ಬೇಸಿಕಲಿ ಒಬ್ಬ ಒಳ್ಳೆ ಗಾಯಕ. 25ಧಾರಾವಾಹಿಗಳಲ್ಲಿ ಈಗಾಗಲೇ ಅಭಿನಯಿಸಿದ್ದು, ಗಾಂಧಿನಗರದಲ್ಲಿ ಕಳೆದ 10ವರ್ಷಗಳಿಂದ ಸೈಕಲ್ ತುಳಿಯುತ್ತಿದ್ದಾರೆ. ರವಿಶಂಕರ್ ಗಾಯನ ಪ್ರತಿಭೆ, ಅಭಿನಯದ ಬಗ್ಗೆ ಹೆಚ್ಚು ಮಾತು ಅನವಶ್ಯಕ. ಎಲ್ಲವನ್ನೂ ವೀಕ್ಷಕರು ಮತ್ತು ಪ್ರೇಕ್ಷಕರು ಬಲ್ಲರು. 'ಪಯಣ'ಒಂದು ಅತ್ಯುಧ್ಪುತ ಲವ್ ಸ್ಟೋರಿಯಾಗಿದ್ದು, ಕ್ಯಾಬ್ ಡ್ರೈವರ್ ಪಾತ್ರದಲ್ಲಿ ರವಿಶಂಕರ್ ಅಭಿನಯಿಸಲಿದ್ದಾರೆ. ಲಘು ಹಾಸ್ಯದೊಂದಿಗೆ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಲಿ ಎಂದು ಚಿತ್ರತಂಡ ನಂಬಿದೆ. ಅರ್ಧ ಡಜನ್ ಒಳ್ಳೇ ಹಾಡುಗಳನ್ನು ನೀಡುವುದಾಗಿಯೇ ಚಿತ್ರ ತಂಡ ಹೇಳಿದೆ. ಪಯಣ ಸುಖಕರವಾಗಿರಲಿ ಎಂಬುದು ನಮ್ಮ ಸದ್ಯದ ಹಾರೈಕೆ.
(ದಟ್ಸ್ ಕನ್ನಡ ಸಿನಿವಾರ್ತೆ)


Click it and Unblock the Notifications