ಬೆಳ್ಳಿತೆರೆಗೆ ಅಬಕಾರಿ ಸಚಿವ ರೇಣುಕಾಚಾರ್ಯ ಪದಾರ್ಪಣೆ
ರಾಜಕೀಯವೇ ಒಂಥರಾ ರಂಗಮಂದಿರವಿದ್ದಂತೆ. ಇನ್ನು ರಾಜಕಾರಣಿಗಳು ಬಣ್ಣಿಹಚ್ಚಿದರೆ ಕೇಳಬೇಕೆ. ಲೀಲಾಜಾಲವಾಗಿ ಅಭಿನಯಿಸುವುದರಲ್ಲಿ ಎರಡು ಮಾತಿಲ್ಲ. ಇದನ್ನು ಮಾಸ್ ನಿರ್ದೇಶಕ ಓಂ ಪ್ರಕಾಶ್ ರಾವ್ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಅನ್ನಿಸುತ್ತದೆ. ಹಾಗಾಗಿ ಅವರು ಈ ಬಾರಿ ಅಬಕಾರಿ ಸಚಿವ ರೇಣುಕಾಚಾರ್ಯ ಅವರನ್ನು ಕನ್ನಡ ಬೆಳ್ಳಿಪರದೆಗೆ ಪರಿಚಯಿಸುತ್ತಿದ್ದಾರೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಭೂಲೋಕ ರಕ್ಷಕ ಎಂಬ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿಯೂ ಇದೆ. ಇನ್ನು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರಂತೂ ಶಿವಕಾಶಿ ಚಿತ್ರದಲ್ಲಿ ಅಭಿನಯಿಸುವುದಾಗಿ ಹೇಳಿದ್ದಾರೆ. ಈಗ ಅಬಕಾರಿ ಸಚಿವ ರೇಣುಕಾಚಾರ್ಯ ಅವರು ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಓಂ ಆಕ್ಷನ್, ಕಟ್ ಹೇಳುತ್ತಿರುವ 'ಭೀಮಾ ತೀರದಲ್ಲಿ' ಚಿತ್ರದಲ್ಲಿ ರೇಣುಕಾಚಾರ್ಯ ಅವರು ಮುಖ್ಯಪಾತ್ರವೊಂದನ್ನು ಪೋಷಿಸಲಿದ್ದಾರೆ.
ಈಗಾಗಲೆ ಯುಗಾದಿ ಹಬ್ಬದ ದಿನ ಚಿತ್ರದ ಮುಹೂರ್ತ ನೆರವೇರಿದ್ದು, ಈ ಚಿತ್ರ ರೇಣುಕಾಚಾರ್ಯ ಅವರ ಚೊಚ್ಚಲ ಚಿತ್ರವಾಗಲಿದೆ ಎಂದು ಓಂ ಪ್ರಕಾಶ್ ತಿಳಿಸಿದ್ದಾರೆ. ಚಿತ್ರದಲ್ಲಿ ಬಣ್ಣ ಹಚ್ಚಿಕೊಳ್ಳಲು ರೇಣುಕಾಚಾರ್ಯ ಒಪ್ಪಿರುವುದಾಗಿ ಓಂ ವಿವರ ನೀಡಿದ್ದಾರೆ. ದುನಿಯಾ ವಿಜಯ್ ಹಾಗೂ ಪ್ರಣೀತಾ ಚಿತ್ರದ ಪ್ರಮುಖ ಪಾತ್ರಧಾರಿಗಳು. ಅಂದಹಾಗೆ ಈ ಚಿತ್ರ ಮೇ ತಿಂಗಳಲ್ಲಿ ಸೆಟ್ಟೇರಲಿದೆ.


Click it and Unblock the Notifications











