ಗಾಂಧಿನಗರಕ್ಕೆ ಮತ್ತೆ ಸೆಕ್ಸಿ ತಾರೆ ನಮಿತಾ ಎಂಟ್ರಿ
ಆತ್ಮಹತ್ಯೆಗೆ ಯತ್ನಿಸಿ ಸಾವಿನ ಮನೆ ಕದ ತಟ್ಟಿ ಬಂದಿದ್ದ ನಿರ್ದೇಶಕ ಓಂ ಸಾಯಿ ಪ್ರಕಾಶ್ ಈಗ 'ಶ್ರೀ ನಾಗಶಕ್ತಿ' ಚಿತ್ರವನ್ನ್ನು ಕೈಗೆತ್ತಿಕೊಂಡಿದ್ದಾರೆ. ಚಂದ್ರಿಕಾ ನಿರ್ಮಿಸುತ್ತಿರುವ ಈ ಚಿತ್ರ ರವಿಕಿರಣ್ ಎಸ್ಟೇಟ್ ನಲ್ಲಿ ಇತ್ತೀಚೆಗೆ ಸೆಟ್ಟೇರಿತ್ತು. ಈ ಚಿತ್ರದ ಮುಖ್ಯಪಾತ್ರದಲ್ಲಿ ಶ್ರುತಿ ನಟಿಸುತ್ತಿದ್ದಾರೆ.
ಇದೇ ಹುರುಪಿನಲ್ಲಿ ಓಂ ಸಾಯಿ ಪ್ರಕಾಶ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು 'ಭಗವಾನ್ ಎಂಎಲ್ ಎ'. ಈ ಚಿತ್ರದ ಮೂಲಕ ಸೆಕ್ಸಿ ತಾರೆ ನಮಿತಾ ಮತ್ತೆ ಗಾಂಧಿನಗರಕ್ಕೆ ಅಡಿಯಿಡುತ್ತಿದ್ದಾರೆ. ತೆಲುಗಿನಲ್ಲಿ ಯಶಸ್ವಿ ಪ್ರದರ್ಶನ ಕಂಡ 'ಆಪರೇಷನ್ ದುರ್ಯೋಧನ' ಚಿತ್ರದ ರೀಮೇಕ್ ಇದಾಗಿದೆ.
'ಉಲ್ಲಾಸ ಉತ್ಸಾಹ' ಚಿತ್ರದ ನಿರ್ಮಾಪಕ ಬಿ ಪಿ ತ್ಯಾಗರಾಜು ಅವರು ಸಾಯಿ ಪ್ರಕಾಶ್ ಕೈಗೆ ಎರಡು ಚಿತ್ರಗಳನ್ನು ನಿರ್ದೇಶಿಸಿಕೊಡುವಂತೆ ಆಜ್ಞಾಪಿಸಿದ್ದಾರೆ. ಅವರ ಹಳೆ ಸಾಲ ಚುಕ್ತಾ ಆಗಬೇಕಾದರೆ ಸಾಯಿ ಪ್ರಾಕಾಶ್ ಈ ಚಿತ್ರಗಳನ್ನು ನಿರ್ದೇಶಿಸಲೇಬೇಕು.
ಏತನ್ಮಧ್ಯೆ ಕನ್ನಡ ಚಿತ್ರರಂಗದಲ್ಲಿ ಸಾಯಿ ಪ್ರಕಾಶ್ ಬಗ್ಗೆ ಅನುಕಂಪದ ಅಲೆ ಎದ್ದಿದೆ. ಪುನರ್ಜನ್ಮ ಪಡೆದು ಬಂದು ಆಕ್ಷನ್, ಕಟ್ ಹೇಳುತ್ತಿರುವ ಅವರ 'ಶ್ರೀ ನಾಗಶಕ್ತಿ' ಚಿತ್ರದ ಬಗ್ಗೆ ಇಡೀ ಚಿತ್ರರಂಗ ಬೆನ್ನುತಟ್ಟಿ ಹುರಿದುಂಬಿಸಿದೆ. ಸೋಲೆ ಗೆಲುವಿನ ಸೋಪಾನ ಎಂಬಂತೆ ಸಾಯಿ ಪ್ರಾಕಾಶ್ ಗೆಲುವಿನತ್ತ ದಾಪುಗಾಲು ಹಾಕಿದ್ದಾರೆ.


Click it and Unblock the Notifications











