ಬೆದರಿಕೆ ಸಾರ್ ಬೆದರಿಕೆ... ಮದನ್ ಸಿಡಿಸಿದ ಬಾಂಬ್!
ಇದನ್ನು ಪಬ್ಲಿಸಿಟಿ ಗಿಮಿಕ್ ಅನ್ನಬೇಕೋ ಅಥವಾ ಸತ್ಯ ಸುದ್ದಿ ಎಂದು ಪರಿಗಣಿಸಬೇಕೋ ಗೊತ್ತಾಗುತ್ತಿಲ್ಲ! ನಟ, ನಿರ್ಮಾಪಕ, ನಿರ್ದೇಶಕ ಮದನ್ ಪಟೇಲ್ ಇದೇ ಭಾನುವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮತ್ತೊಮ್ಮೆ ಮಾನವ ಬಾಂಬ್ ಸಿಡಿಸಿದ್ದಾರೆ!
ಅದೇನಪ್ಪ ಅಂದರೆ, ಅವರು ಅದೇ ಪಾರ್ಕ್ನಲ್ಲಿ ಮುಹೂರ್ತ ಮಾಡುತ್ತಿರುವ ಸ್ವಾಮಿ ನಿತ್ಯಾನಂದ "ಲೀಲೆ" ಸಂಗ್ರಹಿತ ಸತ್ಯಾನಂದ ಚಿತ್ರವನ್ನು ನಿಲ್ಲಿಸುವಂತೆ ಸ್ವತಃ ನಿತ್ಯಾನಂದ ಕಡೆಯವರಿಂದ ದೂರವಾಣಿ ಕರೆ ಬಂದಿದೆ! ಈ ಕರೆ ತಿಂಗಳ ಹಿಂದೆಯೇ ಮದನ್ ಎಂಡ್ ಟೀಮ್ ಸಿನಿಮಾ ಮಾಡಲು ಪ್ಲ್ಯಾನ್ ಮಾಡುವ ಹೊತ್ತಿಗಾಗಲೇ ಬಂದಿತ್ತಂತೆ. ಅದನ್ನು ಅವರು ಈ ಸುಮುಹೂರ್ತ ಸಂದರ್ಭದಲ್ಲಿ ಬ್ಲ್ಯಾಸ್ಟ್ ಮಾಡಿದ್ದಾರೆ!
ಅಂದಹಾಗೇ ಮದನ್ ಪಟೇಲ್ ವರ್ಷ-ಎರಡು ವರ್ಷಕ್ಕೊಂದು ಸಿನಿಮಾ ಮಾಡುತ್ತಾರೆ. ವರ್ಷದ ಹಿಂದೆ ಗಾರ್ಮೆಂಟ್ ಫ್ಯಾಕ್ಟರಿ ಹುಡುಗಿಯರು "ಅನುಭವಿಸುವ ಕಿರುಕುಳ, ತಳಮಳ, ಉಪಟಳ ಇತ್ಯಾದಿಗಳ ಬಗ್ಗೆ ಒಂದು ಡಾಕ್ಯೂಮೆಂಟರಿ ಥರದ "ಹೀಗೂ ಉಂಠೇ!!!" ಸಿನಿಮಾ ಮಾಡಿದ್ದರು. ಅದು ಯಶಸ್ವೀ ಒಂದು ಪ್ರದರ್ಶನ ಕಂಡಿತ್ತು!
ಈಗ ನಿತ್ಯಾನಂದರ ಸತ್ಯಾನಂದ ಕತೆ ಮಾಡಲು ಹೊರಟಿದ್ದಾರೆ. ಸಿನಿಮಾ ರೆಡಿಯಾಗುವ ಮುನ್ನವೇ ಬಾಂಬು ಸಿಡಿಸಿ ಸುದ್ದಿಯಾಗಿದ್ದಾರೆ. ಇದಕ್ಕೆ ನಿತ್ಯಾನಂದ ಎಂಡ್ ಪಾರ್ಟಿ ಏನೆನ್ನುತ್ತದೆ ಎನ್ನುವುದರ ಮೇಲೆ ಸತ್ಯಾನಂದನ ಸತ್ಯಾಸತ್ಯತೆ ಗೊತ್ತಾಗಲಿದೆ!


Click it and Unblock the Notifications











