ಸುನಾಮಿ ಮತ್ತು ಬಣ್ಣದ ಪ್ರಪಂಚ
- ದಟ್ಸ್ಕನ್ನಡ ಬ್ಯೂರೊ
ಅದರಲ್ಲೂ ನಮ್ಮ ಸ್ಯಾಂಡಲ್ವುಡ್ನಲ್ಲಿ , ಎಷ್ಟೋ ಮಂದಿ ಅವರ ಲೋಕದಿಂದ ಹೊರಬಂದಿಲ್ಲ. ಸುನಾಮಿಗೂ ನಮಗೂ ಸಂಬಂಧವೇ ಇಲ್ಲ ಎಂಬಂತೆ, ತಮ್ಮ ಚಿತ್ರಗಳೊಳಗೆ ಮುಳುಗಿದ್ದಾರೆ. ಕೆಲವರು ಸುನಾಮಿ ಹೆಸರಲ್ಲಿ ಚಿತ್ರತೆಗೆದರೆ ಹೇಗೆ ಎಂಬ ಲೆಕ್ಕಾಚಾರದಲ್ಲಿ ತಲ್ಲೀನರಾಗಿದ್ದಾರೆ. ಸಂತ್ರಸ್ತರ ನೋವು, ಆಕ್ರಂದನ ಕೇಳಲು ಪಾಪ ಪುರುಸೊತ್ತಿಲ್ಲ! ‘ಬ್ರಹ್ಮರಾಕ್ಷಸನ ಹೊಟ್ಟೆಗೆ ಆರು ಕಾಸಿನ ಮಜ್ಜಿಗೆ ಯಾತಕ್ಕೂ ಸಾಲದು’ ಎನ್ನುವ ಮಾತು, ಅಷ್ಟೋ ಇಷ್ಟೋ ಕೊಟ್ಟು, ತಮ್ಮ ಕೆಲಸ ಮುಗಿಯಿತೆಂದು ಭಾವಿಸುವ ಮಂದಿಗೆ ಅರ್ಥವಾಗುವುದಿಲ್ಲ!
ಇದೆಲ್ಲ ಅಪಸವ್ಯದ ನಡುವೆಯೂ ಕೆಲವರು ಸದ್ದಿಲ್ಲದೇ ಸ್ಪಂದಿಸುತ್ತಿದ್ದಾರೆ. ಸುನಾಮಿ ಸಂತ್ರಸ್ತರಿಗಾಗಿ ಕನ್ನಡ ಚಿತ್ರರಂಗ ಸ್ಪಂದಿಸುತ್ತಿರುವ ಪರಿ ಹೀಗಿದೆ:
ನಟ ರಾಜ್ಕುಮಾರ್ ಕುಟುಂಬ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂಪಾಯಿ ನೀಡುವ ಮೂಲಕ ದೇಣಿಗೆಯ ಬಾಗಿಲು ತೆರೆದಿದೆ. ‘ಸಂಕಟದ ಸಮಯದಲ್ಲಿ ಎಲ್ಲರೂ ಮಾನವೀಯತೆ ಪ್ರದರ್ಶಿಸಬೇಕು. ಹನಿಹನಿ ಕೂಡಿದರೆ ಹಳ್ಳ’ ಎಂದು ರಾಜಣ್ಣ ಕರೆ ನೀಡಿದ್ದಾರೆ.
ತಾತ್ಕಾಲಿಕವಾಗಿ ಟೆಂಟ್ಗಳ್ನು ಹಾಕಲು, ನಾನು ಮತ್ತು ನನ್ನ ಸ್ನೇಹಿತರು ಸಂತ್ರಸ್ತರಿಗಾಗಿ ಟ್ರಕ್ಗಳಲ್ಲಿ ಟಾರ್ಪಲ್ಗಳನ್ನು ಕಳುಹಿಸಿದ್ದೇವೆ. ಅಲ್ಲದೇ ಆಹಾರ, ಔಷಧಿ ಮತ್ತಿತರೆ ಅಗತ್ಯ ನೆರವನ್ನು ಸಂತ್ರಸ್ತರಿಗೆ ತಲುಪಿಸಿರುವುದಾಗಿ ಪುನೀತ್ ರಾಜ್ಕುಮಾರ್ ತಿಳಿಸಿದ್ದಾರೆ.
ನಟ ವಿಷ್ಣುವರ್ಧನ್ ಮತ್ತು ಸ್ನೇಹಲೋಕದ ಗೆಳೆಯರು, ಇಂಡಿಯನ್ಎಕ್ಸ್ಪ್ರೆಸ್ ಪರಿಹಾರ ನಿಧಿಗೆ ಒಂದು ಲಕ್ಷ ರುಪಾಯಿ ನೀಡಿದ್ದಾರೆ. ನಟ ರಮೇಶ್ 50ಸಾವಿರ ರೂ.ಗಳನ್ನು ಪರಿಹಾರ ನಿಧಿಗೆ ನೀಡಿದ್ದಾರೆ. ಕರ್ನಾಟಕ ಟೆಲಿವಿಷನ್ ಆಸೋಷಿಯೇಷನ್ ಪಾದಯಾತ್ರೆ ಮೂಲಕ 3.5 ಲಕ್ಷ ರೂ ನಗದು, 200 ಕ್ವಿಂಟಾಲ್ ಅಕ್ಕಿ ಮತ್ತಿತರ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿದೆ.
ಅರಸೀಕೆರೆಯಲ್ಲಿ ‘ಗೌರಮ್ಮ’ ಚಿತ್ರದ ಚಿತ್ರೀಕರಣದಲ್ಲಿ ನಟ ಉಪೇಂದ್ರ ಮತ್ತು ರಮ್ಯ ಪಾಲ್ಗೊಂಡಿದ್ದಾರೆ. ಚಿತ್ರೀಕರಣದ ಇಡೀ ಘಟಕ ಅರಸೀಕೆರೆಯಲ್ಲಿ ಮನೆಮನೆಗೆ ತೆರಳಿ ಸಂತ್ರಸ್ತರಿಗಾಗಿ ಅಕ್ಕಿ, ರಾಗಿ, ಸೋಪು, ಬೆಡ್ಶೀಟ್ ಸೇರಿದಂತೆ ಪರಿಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿದೆ.
ಲೈಟ್ಬಾಯ್ಗಳು ಸೇರಿದಂತೆ ಚಿತ್ರತಂಡ ಸುನಾಮಿ ಪೀಡಿತರಿಗಾಗಿ ಕೈಲಾದ ಮಟ್ಟಿಗೆ ಆರ್ಥಿಕವಾಗಿ ನೆರವು ನೀಡಿದೆ ಎನ್ನುತ್ತಾರೆ ಗೌರಮ್ಮ ಚಿತ್ರದ ನಿರ್ದೇಶಕ ನಾಗಣ್ಣ. ನಟಿ ರಕ್ಷಿತಾ ಸಂತ್ರಸ್ತರಿಗಾಗಿ ಉಡುಪುಗಳನ್ನು ನೀಡಿದ್ದಾರೆ. ನಟ ಮುರಳಿ ಮತ್ತು ಆತನ ತಮ್ಮ ಕೃಷ್ಣ , ವೆಲಾಂಕಣಿಗೆ ತೆರಳಿ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಿದ್ದಾರೆ.
ನಟ ಸುದೀಪ್ರಿಗೆ ಪರಿಹಾರ ಹಣ ಮತ್ತು ಇತರೆ ಪರಿಹಾರ ಸಾಮಗ್ರಿಗಳು ದುರ್ಬಳಕೆಯಾಗುವ ಆತಂಕವಿದೆ. ತುರ್ತು ಅಗತ್ಯಕ್ಕಿರಲಿ ಎಂದು ಹತ್ತು ಚೀಲ ಅಕ್ಕಿಯನ್ನು ಸುದೀಪ್ ಸಂತ್ರಸ್ತರಿಗಾಗಿ ನೀಡಿದ್ದಾರೆ. ಬಟ್ಟೆಗಳನ್ನು ಮುಂದಿನ ಕಂತಿನಲ್ಲಿ ಕಳುಹಿಸುವ ಐಡಿಯಾ ಅವರಿಗಿದೆ.
ಈಗಾಗಲೇ ಕೋಟ್ಯಾಂಟರ ರೂ ಹಣ ಮತ್ತು ಲೋಡ್ಗಟ್ಟಲೆ ಪರಿಹಾರ ಸಾಮಗ್ರಿಗಳು ಸಂಗ್ರಹವಾಗಿವೆ. ಆದರೆ ಅವುಗಳು ಅರ್ಹರ ತಲುಪುವ ಬಗ್ಗೆ ಅನುಮಾನಗಳಿವೆ. ಸಿನಿಮಾ ಶೂಟಿಂಗ್ನಿಂದ ಬಿಡುವು ಮಾಡಿಕೊಂಡು, ಸಂತ್ರಸ್ತ ಪ್ರದೇಶಗಳಿಗೆ ತೆರಳಿ, ನೆರವಿನ ಅಗತ್ಯವಿರುವ ಸಂತ್ರಸ್ತರಿಗೆ ಆರ್ಥಿಕ ಸಹಾಯ ಮಾಡುವುದಾಗಿ ಸುದೀಪ್ ತಿಳಿಸಿದ್ದಾರೆ.
ಇನ್ನು ಇತರೆ ಭಾಷೆಗಳ ಕಲಾವಿದರತ್ತ ಹೊರಳೋಣ. ಮಲಯಾಳಂ ಚಿತ್ರನಟ ವಿಜಯಕಾಂತ್ ತಂಡ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ನಟಿ ಜ್ಯೋತಿಕಾ ಸಹಾ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ಚೆನ್ನೈನ ಟಿ.ನಗರದಲ್ಲಿ ನಿದೇಶಕ ಭಾರತಿರಾಜಾ, ಶರಣ್, ಎಸ್.ಜೆ.ಸೂರ್ಯನ್ ಮತ್ತಿತರರು ಪಾದಯಾತ್ರೆ ಮೂಲಕ ಪರಿಹಾರ ಸಾಮಗ್ರಿ ಸಂಗ್ರಹಕ್ಕೆ ಮುಂದಾಗಿದ್ದಾರೆ.
ತಮಿಳು ನಟ ಕಮಲಹಾಸನ್ ಮುಂಬಯಿಯಲ್ಲಿದ್ದು, ಮುಂಬೈ ಎಕ್ಸ್ಪ್ರೆಸ್ ಚಿತ್ರೀಕರಣದಲ್ಲಿ ಬಿರಿkುಯಾಗಿದ್ದಾರೆ. ಅವರು ಮುಂಬಯಿಯಲ್ಲಿಯೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 21ಲಕ್ಷ ರೂಗಳ ದೇಣಿಗೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಚಂದ್ರಮುಖಿ ಚಿತ್ರದ ಚಿತ್ರೀಕರಣದಲ್ಲಿರುವ ರಜನಿಕಾಂತ್, ಇತರೆ ನಟರಾದ ವಿಜಯ್, ಅಜಿತ್ರೊಂದಿಗೆ ಸಂತ್ರಸ್ತರಿಗೆ ನೆರವು ನೀಡಿದ್ದಾರೆ. ಮೊತ್ತ ಎಷ್ಟು ಎಂಬುದು ತಿಳಿದು ಬಂದಿಲ್ಲ.
ಕಾರ್ಗಿಲ್ ಕದನದಲ್ಲಿ ನೊಂದ ಯೋಧರ ಕುಟುಂಬಗಳಿಗಾಗಿ ಡಾ.ರಾಜ್ಕುಮಾರ್ ನೇತೃತ್ವದಲ್ಲಿ ಸಂಗೀತ ಸಂಜೆಯನ್ನು ಕನ್ನಡ ಚಿತ್ರರಂಗ ಹಿಂದೆ ಸಂಘಟಿಸಿತ್ತು. ಅಂತಹದೊಂದು ಪ್ರಯತ್ನ ಮತ್ತೊಮ್ಮೆ ನಡೆದರೆ ಒಳ್ಳೆಯದು.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications