ಸ್ವಯಂಕೃತ ಅಪರಾಧ ಅನ್ನುವುದನ್ನು ಬೇರೆಯಾಗಿ ಹೇಳಬೇಕಿಲ್ಲ.
ಪ್ರೇಮಲೋಕದ ಪಾರಿಜಾತವೇ, ಯಾಕೆ ನೀನು ಎದೆಯ ತುಂಬಿದೆ...?
ಜಾಣ ಚಿತ್ರದಲ್ಲಿ ರವಿಚಂದ್ರನ್ ಕೈಲಿ ಈ ರೀತಿ ಹೊಗಳಿ ಹಾಡಿಸಿಕೊಂಡ ಚೆಲುವೆ ಕಸ್ತೂರಿ. ಈಗ ಈಕೆಯ ಬದುಕೆಲ್ಲಾ ಬೆತ್ತಲೆ ಅನ್ನುವುದು ತಮಿಳು ಸಿನಿಮಾ ಅಭಿಮಾನಿಗಳ ತುತ್ತೂರಿ.
ರವಿಚಂದ್ರನ್ ಚಿತ್ರದಲ್ಲಿ ನಟಿಸಿದ ಹೊರನಾಡಿನ ನಾಯಕಿಯರೆಲ್ಲಾ ಒಂದಿಲ್ಲೊಂದು ರೀತಿ ಪ್ರವರ್ಧಮಾನಕ್ಕೆ ಬಂದವರೇ. ಜ್ಯೂಹಿ ಬೆಳೆದ ಪರಿ, ಖುಷ್ಬೂ ದೇವಸ್ಥಾನ ಕಟ್ಟುವಷ್ಟು ಅಭಿಮಾನಿಗಳ ಕಂಡುಕೊಂಡ ಸಿರಿ ಎಲ್ಲವೂ ರವಿ ಅವರನ್ನು ತೆರೆಗೆ ತಂದ ನಂತರವೇ ಆದದ್ದಲ್ಲವೇ? ಕಸ್ತೂರಿ ಕೂಡ ಬೆಳೆದರು. ಆದರೆ ಬೆಳೆದಿರುವ ದಿಕ್ಕು ಬೇರೆಯಷ್ಟೆ. 'ಮಾಚಕನಿ" ಎಂಬ ತಮಿಳು ಚಿತ್ರದ ಈಕೆಯ ಪೋಸ್ಟರ್ಗಳನ್ನು ಕಂಡ ಸಿನಿಮಾ ನಿರ್ಮಾಪಕರು ಈಜುಡುಗೆ, ತುಂಡುಡುಗೆ ಸಮೇತ ಕಸ್ತೂರಿ ಮನೆಯ ಕದ ತಟ್ಟುತ್ತಿದ್ದಾರೆ. ಕಸ್ತೂರಿಗೆ ಇದನ್ನು ಕಂಡು ಕಿರಿಕಿರಿ.
ತುತ್ತಾ- ಮುತ್ತಾ ಚಿತ್ರದಲ್ಲಿ ಕಸ್ತೂರಿಯನ್ನು ಕಣ್ಣು ಮಿಟುಕಿಸದೆ ಜನ ನೋಡಿದ್ದು ಎರಡು ಹಾಡುಗಳಲ್ಲಿ ಮಾತ್ರ. ಈ ಎರಡೂ ಹಾಡುಗಳಲ್ಲಿ ಕಂಡದ್ದು ಆಕೆಯ ಪಕ್ಕಾ ಗಾತ್ರ!
'ಇಂಡಿಯನ್" ಚಿತ್ರದಲ್ಲಿ ಲಂಗಾ- ದಾವಣಿ ತೊಟ್ಟು ಅಪ್ಪ- ಅಣ್ಣ (ಇಬ್ಬರೂ ಕಮಲ ಹಾಸನ್) ನ ಜೊತೆ ಹೆಜ್ಜೆ ಹಾಕಿ, ಕನಸ ಕಟ್ಟುವ ಮುಗ್ಧ ಹುಡುಗಿಯಾಗಿ ಮಿಂಚಿದ್ದ ಕಸ್ತೂರಿಗೆ ಆಮೇಲೆ ಯಾರೂ ಲಂಗಾ- ದಾವಣಿ ತೊಡಿಸಲಿಲ್ಲ. ಸ್ವಿಮ್ ಸೂಟ್ ಹಾಕಿ ಸಮುದ್ರದ ದಂಡೆಯಲ್ಲಿ ಮಲಗಿಸಿದರು. ಇತ್ತೀಚಿನ ಚಿತ್ರಗಳಲ್ಲಿ ಕಸ್ತೂರಿ ಕಾಲು ಮುಚ್ಚುವ ಬಟ್ಟೆ ತೊಟ್ಟಿದ್ದೇ ಅಪರೂಪ.
ಇಷ್ಟು ಸಾಲದೆಂಬಂತೆ ಅಶೋಕ್ ಕುಮಾರ್ ಎಂಬಾತ ನಿರ್ದೇಶಿಸುತ್ತಿರುವ ಕಜುರಾಹೋ ತಮಿಳು ಚಿತ್ರದ ಮುಹೂರ್ತಕ್ಕೆ ಕಸ್ತೂರಿ ಹೋಗಿಬಂದದ್ದೇ ತಡ, ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗಿಬಿಟ್ಟಿದೆ. ತಮಿಳು ಸಿನಿಮಾ ನಿರ್ಮಾಪಕರೆಲ್ಲಾ ಈಕೆಯ ಕಾಲ್ಶೀಟ್ ಕೇಳಲು ನಾ ಮುಂದು ತಾ ಮುಂದು. ಆದರೆ ಎಲ್ಲರ ಡಿಮ್ಯಾಂಡಿಗೆ ಈಕೆ ಸ್ಪಂದಿಸಿದ್ದೇ ಆದರೆ ಬದುಕೆಲ್ಲಾ ಬೆತ್ತಲೆ. ಕಸ್ತೂರಿ ಈ ರೀತಿ ಕೋರಿಕೆಯಿಟ್ಟು ಎಲ್ಲರನ್ನೂ ಬೈದು ಕಳಿಸುತ್ತಿದ್ದಾರೆ. ಮುಂದೆ?
ಟಿವಿ ಧಾರಾವಾಹಿಗಳಲ್ಲಾದರೂ ಒಂದು ಕೈನೋಡೋಣ ಅಂತ ಹೋದರೆ, ಅಲ್ಲೂ ಕಸ್ತೂರಿ ಜೊತೆ ನಟಿಸಲು ಯಾವ ನಟನೂ ತಯಾರಾಗಲಿಲ್ಲ. ಕೊನೆಗೆ ಯಾವುದೋ ಒಂದು ಚಾಟ್ ಷೋನಲ್ಲಿ ಕಾಣಿಸಿಕೊಳ್ಳುವ ಭಾಗ್ಯ ಮಾತ್ರ ಸಿಕ್ಕಿತು.
ಸಿನಿಮಾ ಪಂಡಿತರ ಪ್ರಕಾರ ಕಸ್ತೂರಿಗೆ ಇರುವುದು ಎರಡೇ ಚಾಯ್ಸ್- ಒಂದು ಸಿನಿಮಾಗೆ ಸಲಾಮು ಹೊಡೆಯಬೇಕು, ಇಲ್ಲವೇ ಬಟ್ಟೆ ಬಿಚ್ಚಿ, ಬಣ್ಣ ಹಚ್ಚಿಕೊಳ್ಳಬೇಕು. ಕಸ್ತೂರಿ ನಿರ್ಣಯ ಕೈಗೊಳ್ಳಲು ಯೋಚನೆಯಲ್ಲಿ ಮುಳುಗಿದ್ದಾರೆ. ರವಿಚಂದ್ರನ್ ಕನ್ನಡ ಚಿತ್ರಕ್ಕೆ ಈಕೆಯನ್ನು ಕರೆ ತಂದಾಗ ಜ್ಯೂಹಿಯ ಕಣ್ಣು- ಮೂಗಿನ ಚೆಂದದ ಹುಡುಗಿ ಎಂದು ಹೊಗಳುತ್ತಿದ್ದವರೆಲ್ಲಾ, ಕಸ್ತೂರಿ ಸ್ಥಿತಿ ಹೀಗಾಯಿತಾ ಎಂದು ಹುಬ್ಬೇರಿಸುತ್ತಿದ್ದಾರೆ.


Click it and Unblock the Notifications