ಇದೇನ ಸಂಸ್ಕೃತಿ, ಇದೇನ ಸಭ್ಯತೆ- ಒಂದು ಸಂಕಿರಣ
ಒಂದೊಮ್ಮೆ ಇಡೀ ಭಾರತೀಯ ಚಿತ್ರರಂಗ ಅಸೂಯೆಯ ಕಂಗಳಿಂದ ನೋಡುತ್ತಿದ್ದ ಕನ್ನಡ ಚಿತ್ರರಂಗ ದುಸ್ಥಿತಿಯ ಅಂಚಿಗೆ ತಲುಪಿರುವುದೇಕೆ ? ಕನ್ನಡ ಚಿತ್ರೋದ್ಯಮದಲ್ಲಿ ಸೃಜನಶೀಲತೆಯ ಕೊರತೆ ಉಂಟಾಗಿರುವುದಾದರೂ ಏಕೆ ?
ಕಲಾತ್ಮಕ ಹಾಗೂ ವಾಣಿಜ್ಯ ಚಿತ್ರಗಳ ಕುರಿತಾದ ತಪ್ಪು ಗ್ರಹಿಕೆಯೇ ಕನ್ನಡ ಚಿತ್ರರಂಗದಲ್ಲಿ ಸೃಜನಶೀಲತೆಯ ಕೊರತೆ ಉಂಟಾಗಲು ಕಾರಣ ಎನ್ನುವುದು ನಿರ್ಮಾಪಕ ಎಂ.ಭಕ್ತವತ್ಸಲ ಅವರ ನಿಲುವು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ದೇವನೂರು ಮಹಾದೇವ ಅವರ 'ಒಡಲಾಳ" ನೀಳ್ಗತೆ ಸಿನಿಮಾ ಆಗುತ್ತಿರುವ ಹಿನ್ನೆಲೆಯಲ್ಲಿ ಕೆರೆಮಲೆ ಸಿನಿಮಾ ಸಂಸ್ಥೆ ನಡೆಸಿದ (ಜೂ. 4) ವಿಚಾರ ಸಂಕಿರಣವನ್ನು ಉದ್ಘಾಟಿಸಿ ಭಕ್ತವತ್ಸಲ ಮಾತನಾಡುತ್ತಿದ್ದರು.
ಪಕ್ಕದಲ್ಲಿನ ತಮಿಳುನಾಡನ್ನು ನೋಡಿ ; ಅಲ್ಲಿ ಎಷ್ಟೊಂದು ಕ್ರಿಯಾಶೀಲತೆಯ ಚಿತ್ರಗಳು ತಯಾರಾಗುತ್ತಿವೆ. ಆದರೆ ನಮ್ಮಲ್ಲಿ ಸೃಜನಶೀಲತೆಗೆ ಬರ ಬಂದಿದೆ. ವಾಣಿಜ್ಯ ಹಾಗೂ ಕಲಾತ್ಮಕ ಚಿತ್ರಗಳ ಕುರಿತು ಪ್ರತ್ಯೇಕ ಧೋರಣೆ ಬೆಳೆಸಿಕೊಂಡಿರುವುದೇ ಕ್ರಿಯಾಶೀಲತೆಯ ಕೊರೆಗೆ ಕಾರಣ ಎಂದು ಭಕ್ತವತ್ಸಲ ಅಭಿಪ್ರಾಯಪಟ್ಟರು.
ಅರವತ್ತು ಎಪ್ಪತ್ತರ ದಶಕದ ಕನ್ನಡ ಚಿತ್ರಗಳನ್ನು ನೆನಪಿಸಿಕೊಂಡು ನಿಟ್ಟುಸಿರಿಟ್ಟ ಅವರು, ಆ ದಿನಗಳಲ್ಲಿನ ಸಾಹಿತ್ಯ ಹಾಗೂ ಸಿನಿಮಾದ ನಂಟನ್ನು ಸ್ಮರಿಸಿಕೊಂಡರು. ಸದಭಿರುಚಿಯ ಚಿತ್ರಗಳನ್ನು ಜನತೆ ಕೂಡ ಸಂತೋಷದಿಂದ ಸ್ವೀಕರಿಸಿದರು ಎಂದು ಭಕ್ತವತ್ಸಲ ಹೇಳಿದರು.
ಸಂಕಿರಣದಲ್ಲಿ ಮಾತನಾಡಿದ ಸಿನಿಮಾ ನಟ ಹಾಗೂ ಲೇಖಕ ಜಿ.ಕೆ.ಗೋವಿಂದರಾವ್ ಅವರಿಗೆ ಇತ್ತೀಚಿನ ಸಿನಿಮಾಗಳ ಬಗ್ಗೆ ಮೂಗಿನ ಮೇಲೆಯೇ ಸಿಟ್ಟು . ಇತ್ತೀಚಿನ ಚಲನಚಿತ್ರಗಳ ಬೆಳವಣಿಗೆಯನ್ನು ಕಟುವಾಗಿ ಟೀಕಿಸಿದ ಗೋವಿಂದರಾವ್- ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಸಿನಿಮಾಗಳ ಕುರಿತು ವಿಷಾದಿಸಿದರು.
ಸಾಹಿತಿ ದೇವನೂರು ಮಹಾದೇವ, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆಸಿಎನ್ ಚಂದ್ರಶೇಖರ್ ಮತ್ತಿತರರು ಸಂಕಿರಣದಲ್ಲಿ ಭಾಗವಹಿಸಿದ್ದರು.


Click it and Unblock the Notifications