‘ಸೈನೈಡ್’ -: ಇದು ರಾಜೀವ್ ಗಾಂಧಿ ಹಂತಕರ ಒಳನೋಟ!
ಹೌದು, ಬಹು ನಿರೀಕ್ಷಿತ ‘ಸೈನೈಡ್’ ಚಿತ್ರ ಶುಕ್ರವಾರ(ಜು.7) ರಾಜ್ಯದೆಲ್ಲೆಡೆ ತೆರೆಕಾಣುತ್ತಿದೆ. ಕತೆ, ಚಿತ್ರಕತೆ, ಸಂಭಾಷಣೆ ನಿರ್ದೇಶನದ ಹೊಣೆ ಹೊತ್ತ ಎ.ಎಂ.ಆರ್.ರಮೇಶ್ ಚಿತ್ರಕ್ಕಾಗಿ ಸಾಕಷ್ಟು ಹೋಮ್ವರ್ಕ್ ಮಾಡಿದ್ದಾರೆ. ಹೀಗಾಗಿ ಚಿತ್ರ, ನಮ್ಮನ್ನು ಸದ್ದಿಲ್ಲದೇ ಆವರಿಸಿಕೊಳ್ಳುತ್ತದೆ ಎಂಬುದು ಪ್ರೀಮಿಯರ್ ಶೋ ನೋಡಿದವರ ಅನಿಸಿಕೆ.
ತಮಿಳುನಾಡಿನ ಪೆರಂಬದೂರಿನಲ್ಲಿ ರಾಜೀವ್ ಹತ್ಯೆ ನಡೆದದ್ದು ಒಂದು ಘಟ್ಟವಾದರೇ, ರಾಜೀವ್ ಹಂತಕರಾದ ಶಿವರಸನ್ ಮತ್ತು ಅವನ ತಂಡ ಬೆಂಗಳೂರಿನಲ್ಲಿ ಪೊಲೀಸರಿಗೆ ಬಲಿಯಾದದ್ದು ಇನ್ನೊಂದು ಘಟ್ಟ. ಕೋಣನಕುಂಟೆಯಲ್ಲಿ ನಡೆದ ಈ ಘಟನೆ, ಅದರ ಹಿನ್ನೋಟ ಮತ್ತು ಒಳನೋಟಗಳನ್ನು ನಿರ್ದೇಶಕರು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.
ಪಾತ್ರವೇ ತಾವಾದಂತೆ ಕಲಾವಿದರು ಜೀವ ತುಂಬಿದ್ದಾರೆ. ತಂತ್ರಜ್ಞರ ಕುಸುರಿಕಲೆ ಚಿತ್ರದ ಗುಣಮಟ್ಟವನ್ನು ಹೆಚ್ಚಿಸಿದೆ ಎಂಬ ಮಾತುಗಳು ಚಿತ್ರದ ಬಗ್ಗೆ ಕೇಳಿ ಬರುತ್ತಿವೆ.
ರವಿ ಕಾಳೆ(ಶಿವರಸನ್), ಶುಭಾ(ಮಾಳವಿಕಾ), ರಂಗಾಯಣ ರಘು(ರಂಗನಾಥ), ತಾರಾ(ಮೃದುಳಾ), ಸುರೇಶ್ ಹೆಬ್ಲೀಕರ್(ಪೊಲೀಸ್ ಕಮಿಷನರ್), ಅಶೋಕ್ರಾವ್, ಅವಿನಾಶ್ ಮತ್ತಿತರರು ಚಿತ್ರದ ತಾರಗಣದಲ್ಲಿದ್ದಾರೆ. ಸಂದೀಪ್ ಚೌಟ ಸಂಗೀತ ಚಿತ್ರಕ್ಕಿದೆ. ‘ಸೈನೈಡ್’ ಅಕ್ಷರ ಕ್ರಿಯೇಷನ್ನ ಮೊದಲ ಪ್ರಯತ್ನ. ತನ್ನ ಚೊಚ್ಚಲ ಪ್ರಯತ್ನವನ್ನು ಅಕ್ಷರ ಕ್ರಿಯೇಷನ್, ಕರ್ನಾಟಕ ಪೊಲೀಸರಿಗೆ ಅರ್ಪಿಸಿದೆ.
ನಗರದ ತ್ರಿಭುವನ್, ಪಿವಿಅರ್, ಚಂದ್ರೋದಯ, ಸಿದ್ದೇಶ್ವರ, ಕೃಷ್ಣ, ನವರಂಗ್, ಭಾರತಿ ಚಿತ್ರಮಂದಿರಗಳು ಸೇರಿದಂತೆ ರಾಜ್ಯದ ವಿವಿಧೆಡೆ ‘ ಸೈನೈಡ್’ ಪ್ರದರ್ಶನ ಕಾಣಲಿದೆ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications