ದರ್ಶನ್ ಅವರ ನವಗ್ರಹದ ಚಿತ್ರೀಕರಣ ಪೂರ್ಣ
ಹೆಸರಿನಿಂದಲೇ ಕುತೂಹಲ ಹುಟ್ಟಿಸಿರುವ ಚಿತ್ರ ನವಗ್ರಹ. ಪ್ರಥಮ ನಿರ್ದೇಶನದಲ್ಲೇ ಪ್ರಚಂಡ ಯಶಸ್ಸುಗಳಿಸಿದ ದಿನಕರ್ತೂಗುದೀಪ್ ನಿರ್ದೇಶನದ ದ್ವಿತೀಯ ಚಿತ್ರವಾಗಿರುವ ನವಗ್ರಹಕ್ಕೆ ನಿಗದಿತ ಯೋಜನೆಯಂತೆ ಚಿತ್ರೀಕರಣ ಪೂರ್ಣವಾಗಿದೆ. 54ದಿನಗಳ ಚಿತ್ರೀಕರಣದಲ್ಲಿ ಐದು ಹಾಡುಗಳು ಹಾಗೂ ಮಾತಿನ ಭಾಗ ಮೈಸೂರು, ಸಕಲೇಶಪುರ ಮತ್ತು ಬೆಂಗಳೂರಿನಲ್ಲಿ ಚಿತ್ರೀಕೃತವಾಗಿದೆ. ಚಿತ್ರದಲ್ಲಿ ಬರುವ ಭರ್ಜರಿ ಚೇಸ್ ದೃಶ್ಯ ನೋಡುಗರ ಮನದಲ್ಲಿ ನೆಲೆಯೂರಲಿದೆ. ಚಿತ್ರೀಕರಣ ಸಮಯದಲ್ಲೇ ಚಿತ್ರಕ್ಕೆ ಪ್ರಶಂಸೆಯ ಮಾತು ಕೇಳಿ ಬರುತ್ತಿದೆ.
ತೂಗುದೀಪ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಮೀನಾತೂಗುದೀಪ ಶ್ರೀನಿವಾಸ್ ಅವರು ಜೊತೆಜೊತೆಯಲಿ ಚಿತ್ರದ ನಂತರ ನಿರ್ಮಿಸುತ್ತಿರುವ, ವಿಜಯ್ ಸಹನಿರ್ಮಾಪಕರಾಗಿರುವ ಹಾಗೂ ಹಲವು ವಿಶೇಷಗಳಿರುವ ಈ ಚಿತ್ರದಲ್ಲಿ ಏಳು ಜನ ಕನ್ನಡದ ಖಳನಟರ ಪುತ್ರರ ಅಭಿನಯವಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದ ಆರಂಭವಾಗುವ ನಾಯಕರ ಪಡೆಯಲ್ಲಿ ವಿನೋದ್ಪ್ರಭಾಕರ್, ನಾಗೇಂದ್ರ ಅರಸ್, ಸೃಜನ್ಲೋಕೇಶ್, ಗಿರಿದಿನೇಶ್, ಧರ್ಮಕೀರ್ತಿರಾಜ್, ತರುಣ್ಸುಧೀರ್ ಇದ್ದಾರೆ. ಸಜನಿ ಚಿತ್ರದ ಶರ್ಮಿಳಾ ಮಾಂಡ್ರೆ, ನೆನಪಿರಲಿ ಖ್ಯಾತಿಯ ವರ್ಷ ನಾಯಕಿಯರಾಗಿರುವ ಈ ಚಿತ್ರದ ಉಳಿದ ತಾರಾಬಳಗದಲ್ಲಿ ವಿಕ್ರಂ, ಕೃಷ್ಣೇಗೌಡ, ಕುರಿಗಳು ಪ್ರತಾಪ್, ಧರ್ಮ ಮುಂತಾದವರಿದ್ದಾರೆ.
ಚಿತ್ರೀಕರಣೇತರ ಚಟುವಟಿಕೆಗಳು ಆರಂಭವಾಗಿರುವ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಎ.ವಿ.ಕೃಷ್ಣಕುಮಾರ್ ಛಾಯಾಗ್ರಹಣ, ವಿ.ಹರಿಕೃಷ್ಣ ಸಂಗೀತ, ರವಿವರ್ಮ ಸಾಹಸ, ಶಶಿಕುಮಾರ್ ಸಂಕಲನ, ಮಲ್ಲಿಕಾರ್ಜುನ್(ಗದಗ) ನಿರ್ಮಾಣನಿರ್ವಹಣೆ, ನಾಗೇಂದ್ರ ಪ್ರಸಾದ್ ಗೀತರಚನೆ, ಸುಂದರರಾಜ್, ಶ್ರೀನಿವಾಸ್, ಚಿಂತನ್ ಸಹನಿರ್ದೇಶನ ಹಾಗೂ ಚಿಂತನ್ ಸಂಭಾಷಣೆ ನವಗ್ರಹಕ್ಕಿದೆ.
(ದಟ್ಸ್ ಕನ್ನಡ ಸಿನಿವಾರ್ತೆ)
ಆ ಕಾಲದ ಖಳನಟರ ಪುತ್ರರತ್ನರು ತೆರೆ ಮೇಲೆ


Click it and Unblock the Notifications