ಚಿತ್ರ ನಿರ್ಮಾಪಕ ಆರ್ ಎಸ್ ಗೌಡ ವಿರುದ್ಧ ಹಲ್ಲೆ ಪ್ರಕರಣ
'ಚೆನ್ನಮ್ಮ ಐಪಿಎಸ್' ಹಾಗೂ 'ಝಾನ್ಸಿ ಐಪಿಎಸ್' ಚಿತ್ರಗಳ ನಿರ್ಮಾಪಕ ಆರ್ ಎಸ್ ಗೌಡ ವಿರುದ್ಧ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಗೌಡ ತಮ್ಮ ಮೇಲೆ ಹಲ್ಲೆ ಮಾಡಿ ಮನಬಂದಂತೆ ಥಳಿಸಿದ್ದಾರೆ ಎಂದು ನಿರ್ದೇಶಕ ಬಿ ಆರ್ ಕೇಶವ ಆರೋಪಿಸಿದ್ದಾರೆ. ಘಟನೆಯ ವಿವರಗಳು ಹೀಗಿವೆ.
ಬಿ ಆರ್ ಕೇಶವ ಅವರು 'ಅರುಂಧತಿ' ಎಂಬ ಚಿತ್ರ ನಿರ್ಮಿಸಿದ್ದರು. ಆ ಚಿತ್ರದ ಪ್ರಸಾರ ಹಕ್ಕನ್ನು ರು.17 ಲಕ್ಷಕ್ಕೆ ಆರ್ ಎಸ್ ಗೌಡ ಖರೀದಿಸಿದ್ದರಂತೆ. ಸೆನ್ಸಾರ್ ಸರ್ಟಿಫಿಕೇಟ್ ಪಡೆದಿದ್ದರೂ ಚಿತ್ರವನ್ನು ಬಿಡುಗಡೆ ಮಾಡದ ಕೇಶವ ವಿಳಂಬ ಮಾಡುತ್ತಿದ್ದರಂತೆ. ಈ ಸಂಬಂಧ ತಮ್ಮ ಹಣ ವಾಪಸ್ ನೀಡುವಂತೆ ಆರ್ ಎಸ್ ಗೌಡ ಒತ್ತಾಯಿಸಿದ್ದರು.
ಸೋಮವಾರ (ಫೆ.6) ಕಂಠೀರವ ಸ್ಟುಡಿಯೋದಲ್ಲಿ ಇಬ್ಬರೂ ಮುಖಾಮುಖಿಯಾಗಿದ್ದಾರೆ. ಕೇಶವ ಅವರನ್ನು ಹಣ ಹಿಂತಿರುಗಿಸುವಂತೆ ಆರ್ ಎಸ್ ಗೌಡ ತಾಕೀತು ಮಾಡಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆದರೆ ಆರ್ ಎಸ್ ಗೌಡ ಅವರು ತಾವು ಕೇಶವ ಮೇಲೆ ಹಲ್ಲೆ ಮಾಡಿಲ್ಲ ಎಂದಿದ್ದು ತಮ್ಮ ಹಣ ವಾಪಸ್ ನೀಡಲಿ ಅಥವಾ ಚಿತ್ರವನ್ನಾದರೂ ಬಿಡುಗಡೆ ಮಾಡಲಿ ಎಂದಿದ್ದಾರೆ. ಅಂದಹಾಗೆ ಬಿ ಆರ್ ಕೇಶವ ಅವರು ಜೇಡರ ಬಲೆ, ಮೈ ಗ್ರೀಟಿಂಗ್ಸ್ ಎಂಬ ಚಿತ್ರಗಳನ್ನು ನಿರ್ಮಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications











