ಸದ್ದಿಲ್ಲದಂತೆ ಯೋಗರಾಜ್ ಭಟ್ಟರ 'ಪರಮಾತ್ಮ' ಸೆಟ್ಟೇರಿದೆ
ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಏನೇ ಮಾಡಿದರು ಸದ್ದಿಲ್ಲದಂತೆ ಮಾಡುವುದು ಅವರು ಮುಂಚಿನಿಂದಲೂ ಆಚರಿಸಿಕೊಂಡು ಬಂದಿರುವ ಪದ್ಧತಿ. ಈ ಬಾರಿಯೂ ಹಾಗೇಯೆ ಆಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಪರಮಾತ್ಮ' ಚಿತ್ರ ಸದ್ದಿಲ್ಲದಂತೆ ಸೆಟ್ಟೇರಿದೆ. ಸಕಲೇಶಪುರದ ಶ್ರೀವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು[ಗ್ಯಾಲರಿ ನೋಡಿ].
ಇದೇ ಮೊದಲ ಬಾರಿಗೆ ಪುನೀತ್ಗೆ ಆಕ್ಷನ್, ಕಟ್ ಹೇಳುತ್ತಿದ್ದಾರೆ ಯಶಸ್ವಿ ನಿರ್ದೇಶಕ ಯೋಗರಾಜ್ ಭಟ್. ಈ ಚಿತ್ರದಲ್ಲಿ ಒಟ್ಟು ಮೂವರು ನಾಯಕಿಯರು. ಐಂದ್ರಿತಾ ರೇ ಮತ್ತು ರಮ್ಯಾ ಬಾರ್ನಾ ಹಾಗೂ ದೀಪಾ ಸನ್ನಿದ್ಧಿ. ಸಕಲೇಶಪುರದಲ್ಲಿ ಎರಡು ದಿನಗಳ ಚಿತ್ರೀಕರಣದ ಬಳಿಕ 'ಪರಮಾತ್ಮ' ಚಿತ್ರತಂಡ ಭಟ್ಟರ ಫೇವರೇಟ್ ಸ್ಪಾಟ್ಗಳಾದ ಉಡುಪಿ, ಮಣಿಪಾಲಕ್ಕೆ ಪ್ರಯಾಣ ಬೆಳಸಲಿದೆ. ಬಳಿಕ ಮಲೆನಾಡು, ಕರಾವಳಿ ಪ್ರದೇಶಗಳಲ್ಲೂ 'ಪರಮಾತ್ಮ'ನ ಲೀಲೆ ಮುಂದುವರಿಯಲಿದೆ.
ಸಕಲೇಶಪುರದಲ್ಲಿ ನಡೆದ ಚಿತ್ರೀಕರಣದಲ್ಲಿ ಪುನೀತ್ ಹಾಗೂ ಚಿತ್ರದ ನಾಯಕಿ ದೀಪಾ ಸನ್ನಿದ್ಧಿ ಪಾಲ್ಗೊಂಡಿದ್ದರು. ಅವರಿಬ್ಬರ ನಡುವಿನ ಆರಂಭಿಕ ಸನ್ನಿವೇಶವನ್ನು ಸಂತೋಷ್ ರೈ ಪಾತಾಜೆ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರು. ವಿ ಹರಿಕೃಷ್ಣ ಅವರ ಸಂಗೀತವಿರುವ ಚಿತ್ರದ ತಾರಾಬಳಗದಲ್ಲಿ ರಂಗಾಯಣ ರಘು, ಅನಂತನಾಗ್ ಇದ್ದಾರೆ.
ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಸಾಹಿತ್ಯ ಚಿತ್ರಕ್ಕಿದೆ. ಚಲನಚಿತ್ರ ವಿತರಕ ಜಯಣ್ಣ ಹಾಗೂ ಯೋಗರಾಜ್ ಭಟ್ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಪುನೀತ್ ಚಿತ್ರ ಎಂದರೆ ಸಾಮಾನ್ಯವಾಗಿ ಪ್ರೇಕ್ಷಕರು ಅದ್ದೂರಿ ಮುಹೂರ್ತ ನಿರೀಕ್ಷಿಸುತ್ತಾರೆ. ಆದರೆ ಭಟ್ಟರು ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂಬಂತೆ ಚಿತ್ರವನ್ನು ತೆರೆಗೆ ತರುತ್ತಿರುವುದು ವಿಶೇಷ.


Click it and Unblock the Notifications











