ಉಪೇಂದ್ರ ಮತ್ತೊಂದು ಚಿತ್ರಕ್ಕೆ ಶೀಘ್ರದಲ್ಲೆ ಬಿಡುಗಡೆ ಭಾಗ್ಯ
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕಾ ತಾರಾ ಜೋಡಿ ಅಭಿನಯದ 'ಶ್ರೀಮತಿ' ಚಿತ್ರ ಶೀಘ್ರದಲ್ಲೆ ತೆರೆ ಕಾಣಲಿದೆ. ಶಂಕರೇಗೌಡ ನಿರ್ಮಾಣದ ಈ ಚಿತ್ರಕ್ಕೆ ಸಂಪತ್ ಆಕ್ಷನ್, ಕಟ್ ಹೇಳಿದ್ದಾರೆ. ಸಾಕಷ್ಟು ಹಿಂದೆಯೇ 'ಶ್ರೀಮತಿ' ಚಿತ್ರೀಕರಣ ಮುಗಿದಿತ್ತು. ಆದರೆ ಶಂಕರೇಗೌಡ ಬೇರೆ ಬೇರೆ ಚಿತ್ರಗಳಲ್ಲಿ ತೊಡಗಿಕೊಂಡಿದ್ದ ಕಾರಣ 'ಶ್ರೀಮತಿ' ಬಿಡುಗಡೆಯನ್ನು ಮುಂದೂಡಿದ್ದರು.
ಸುದೀಪ್ ಮುಖ್ಯಭೂಮಿಕೆಯಲ್ಲಿರು 'ಕೆಂಪೇಗೌಡ' ಚಿತ್ರ ಶಂಕರೇಗೌಡ ಅವರಿಗೆ ಸಾಕಷ್ಟು ಲಾಭವನ್ನು ತಂದುಕೊಟ್ಟಿದೆ. ಈಗವರು 'ಶ್ರೀಮತಿ' ಚಿತ್ರವನ್ನು ಬಿಡುಗಡೆ ಮಾಡುವ ಸಿದ್ಧತೆಯಲ್ಲಿದ್ದಾರೆ. ಉಪೇಂದ್ರ ಅವರ 'ಸೂಪರ್' ಚಿತ್ರದ ಬಳಿಕ ಬಿಡುಗಡೆಯಾಗುತ್ತಿರುವ ಚಿತ್ರ 'ಶ್ರೀಮತಿ'.
ಉಪೇಂದ್ರ ಮತ್ತು ಪ್ರಿಯಾಂಕಾ ಜೋಡಿ ಈ ಹಿಂದೆ 'ಎಚ್ ಟುಒ' ಚಿತ್ರದಲ್ಲಿ ಅಭಿನಯಿಸಿದ್ದರು. ಇವರಿಬ್ಬರ ಸಂಗಮದಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ ಶ್ರೀಮತಿ. ಅಂದಹಾಗೆ ಇದು ಹಿಂದಿಯ ಹಿಟ್ ಚಿತ್ರ 'ಐತ್ ಬಾರ್' ರೀಮೇಕ್. ಚಿತ್ರದಲ್ಲಿ ಉಪ್ಪಿ ಯಶಸ್ವಿ ಉದ್ಯಮಿಯಾಗಿ ಹಾಗೂ ಪ್ರಿಯಾಂಕಾ ವಕೀಲೆಯಾಗಿ ಕಾಣಿಸಲಿದ್ದಾರೆ.
ಈ ಚಿತ್ರದಲ್ಲಿ ಬಾಲಿವುಡ್ ತಾರೆ ಸೆಲೀನಾ ಜೇಟ್ಲೆ ಪ್ರಮುಖ ಪಾತ್ರವೊಂದನ್ನು ಪೋಷಿಸಿದ್ದಾರೆ. ಚಿತ್ರಕ್ಕೆ ಒಂದೇ ಒಂದು ಹಾಡು ಬಾಕಿ ಇತ್ತು. ಈಗ ಆ ಹಾಡನ್ನು ಕೈಬಿಡಲಾಗಿದ್ದು, ಆದಷ್ಟು ಬೇಗನೆ ತೆರೆಗೆ ತರುವ ಸಿದ್ಧತೆಯಲ್ಲಿದ್ದಾರೆ ಶಂಕರೇಗೌಡ. ಕೋಟ ಶ್ರೀನಿವಾಸ ರಾವ್, ಸಯ್ಯಾಜಿ ಶಿಂಧೆ, ಪ್ರೇಮ್ ಚೋಪ್ರ ತಾರಾಬಳಗದಲ್ಲಿದ್ದಾರೆ.


Click it and Unblock the Notifications











