Don't Miss!
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- News Bengaluru Rain: ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಜಿನುಗು ಮಳೆ.. ಮನೆಯಿಂದ ಹೊರಬಂದು ಕುಣಿದು ಕುಪ್ಪಳಿಸಿದ ಮಕ್ಕಳು
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀ ಕನ್ನಡ ವಾರ್ತಾ ವಾಚಕಿಯಾಗಿ ನಟಿ ತಾರಾ!
ಕಿರುತೆರೆಗೆ ಪದಾರ್ಪಣೆ ಮಾಡಿದ ಎರಡೇ ವರ್ಷದಲ್ಲಿ ಕನ್ನಡಿಗರ ಮನಗೆದ್ದು ಕನ್ನಡಿಗರ ಮನೆಮಾತಿನ ವಾಹಿನಿ ಎನಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೆ ಕನ್ನಡಿಗರ ಕಣ್ಮಣಿ ಜೀ ಕನ್ನಡ, ಸ್ಥಾಪನೆಯ ಎರಡೇ ವರ್ಷದಲ್ಲಿ ಉತ್ತಮ ಹಾಗೂ ವೈವಿಧ್ಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ಕನ್ನಡಿಗರ ಮನಗೆದ್ದಿದೆ.
ಇದೇ ಮೇ 11ಕ್ಕೆ ಜೀ ಕನ್ನಡ ಎರಡನೇ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ. ಎರಡನೇ ವರ್ಷದ ಸಂಭ್ರಮದಲ್ಲಿ ಜೀಕನ್ನಡ ಪ್ರತಿದಿನ ಸಂಜೆ 7 ಗಂಟೆಗೆ 30 ನಿಮಿಷಗಳ ಸುದ್ದಿ ಪ್ರಸಾರವನ್ನು ಪ್ರಾರಂಭಿಸುತ್ತಿದೆ. ವಿಶೇಷವೆಂದರೆ ಸುದ್ದಿ@7 ವಾರ್ತಾ ವಾಚಕಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ತಾರಾ ಕಾಣಿಸಿಕೊಳ್ಳುತ್ತಿದ್ದಾರೆ. ಮೇ 5ರಿಂದ ನೇರಪ್ರಸಾರದ ಸುದ್ದಿ ಪ್ರಾರಂಭವಾಗಿದ್ದು ಹಿರಿತೆರೆಯ ತಾರೆಗಳನ್ನು ಸುದ್ದಿ ವಾಚನೆಗೆ ಬಳಸಿಕೊಳ್ಳುವ ಮೂಲಕ ಕಿರುತೆರೆಯಲ್ಲಿ ಪ್ರಪ್ರಥಮವಾಗಿ ಜೀ ಕನ್ನಡ ವಿನೂತನ ಪ್ರಯೋಗಕ್ಕೆ ನಾಂದಿ ಹಾಡಿದೆ.
ಈ ಎರಡು ವರ್ಷಗಳಲ್ಲಿ ಹಲವಾರು ನೂತನ ಪ್ರಯೋಗಗಳನ್ನು ಜೀ ಕನ್ನಡ ಮಾಡಿದೆ. ಇತ್ತೀಚೆಗೆ ಈ ವಾಹಿನಿಯ ಇನ್ನೊಂದು ಸಾಧನೆಯಾಗಿ ದುಬೈನಲ್ಲಿ ನಡೆಸಿದ ಕಾರ್ಯಕ್ರಮವೊಂದು ಸಾಕ್ಷಿಯಾಗಿದೆ. ಅನಿವಾಸಿ ಕನ್ನಡಿಗರಿಗಾಗಿ ರಸಸಂಜೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದೆ. ಜೀ ಕನ್ನಡ, ಕನ್ನಡ ಚಿತ್ರರಂಗದ ನಟರಾದ ದರ್ಶನ್, ವಿಜಯ ರಾಘವೇಂದ್ರ, ದಿಗಂತ್ ಹಾಗೂ ನಟಿಯರಾದ ಅನುಪ್ರಭಾಕರ್, ನೀತೂ ಮುಂತಾದವರೊಡನೆ ದುಬೈನಲ್ಲಿ ರಸಸಂಜೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಏರ್ಪಡಿಸಿತ್ತು. ಮೇ 11ರಂದು ಬೆಳಿಗ್ಗೆ 11ಕ್ಕೆ ಜೀ ಕನ್ನಡದಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.
ಸ್ಪರ್ಧಾ ಕಾರ್ಯಕ್ರಮ, ಸಂಗೀತ ಕಾರ್ಯಕ್ರಮಗಳು, ಸಿನೆಮಾ, ಎಲ್ಲದರಲ್ಲೂ ತನ್ನತನವನ್ನು ಜೀ ಕನ್ನಡ ಮೆರೆದಿದೆ. ಕಳೆದ ವರ್ಷ ಜೀ ಕನ್ನಡದ ಕಾರ್ಯಕ್ರಮಗಳಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್ ಅತ್ಯಂತ ಯಶಸ್ವಿ ಕಾರ್ಯಕ್ರಮ ಎನಿಸಿಕೊಂಡಿತ್ತು. ಅಲ್ಲದೇ ಕುಣಿಯೋಣು ಬಾರಾ, ಬಾಳೇ ಬಂಗಾರ, ಯಾರಿಗುಂಟು ಯಾರಿಗಿಲ್ಲ, ಕಾಮಿಡಿ ಕಿಲಾಡಿಗಳು, ಧಾರಾವಾಹಿಗಳಾದ ಏಕೆ ಹೀಗೆ ನಮ್ಮ ನಡುವೆ, ಅನುಪಮ, ಅಕ್ಕ ಯಶಸ್ವಿಯಾಗಿವೆ.
ಈ ವರ್ಷದ ಆರಂಭದಲ್ಲಿ ಪ್ರಾರಂಭಿಸಿದ 'ಕಾಮಿಡಿ ಕಿಲಾಡಿಗಳು' ಕರ್ನಾಟಕದ ಕಾಮಿಡಿ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗೆ ಪ್ರಾರಂಭಿಸಿದ ಕರ್ನಾಟಕ ಚಲನಚಿತ್ರ ಗೀತೆ ಗಾಯನದಲ್ಲಿ ದಿಗ್ಗಜರು ಎನಿಸಿಕೊಂಡವರ ನೆನೆಕೆಯ 'ಗುಣಗಾನ' ಕಾರ್ಯಕ್ರಮ ಕೂಡ ಕಿರುತೆರೆಯಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ.
ಉತ್ತಮ ಯುವ ತಂತ್ರಜ್ಞರು ಹಾಗೂ ಸೃಜನಶೀಲ ವ್ಯಕ್ತಿಗಳನ್ನು ಹೊಂದಿರುವ ಜೀ ಕನ್ನಡ ಕೇವಲ ಎರಡೇ ವರ್ಷಗಳಲ್ಲಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಕನ್ನಡಿಗರ ಮನೆ ಮನದಲ್ಲಿ ಅಚ್ಚೊತ್ತಿದ್ದು ಇನ್ನೂ ಹಲವು ಪ್ರಥಮಗಳನ್ನು ಕರ್ನಾಟಕದ ಕಿರುತೆರೆಗೆ ನೀಡಲಿದೆ. ಉತ್ತಮ ಮನರಂಜನಾ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಕನ್ನಡಿಗರನ್ನು ಕನ್ನಡ ವಾಹಿನಿ ವೀಕ್ಷಣೆಯತ್ತ ಸೆಳೆಯಲು ಜೀ ಕನ್ನಡ ಪ್ರಯತ್ನಿಸುತ್ತಿದೆ ಎಂದು ಜೀ ಕನ್ನಡದ ವ್ಯವಹಾರ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ತಿಳಿಸಿದರು.
(ದಟ್ಸ್ಕನ್ನಡ ಸಿನಿವಾರ್ತೆ)