ಚಿಗುರಿದ ಕನಸು ; ಇದು ಹತ್ತು ವರ್ಷಗಳ ಕನಸು !
*ಪಾವನಿ
ಕನಸು ಚಿಗುರಿದೆ !
‘ಇದು ಹತ್ತು ವರ್ಷಗಳ ಕನಸು. ಈಗ ಕಾಲ ಕೂಡಿ ಬಂದಿದೆ’ ಎಂದರು ಪಾರ್ವತಮ್ಮ . ಶಿವಣ್ಣ ಕನಸಿನ ಗುಂಗಿನಲ್ಲಿದ್ದರು.
ಸದಾಶಿವ ನಗರದ ವರನಟ ರಾಜ್ಕುಮಾರ್ ಬಂಗಲೆಯಲ್ಲಿ ಫೆ.6 ರ ಗುರುವಾರ ಸಂಭ್ರಮದ ಊಟೆ. ಆಗ ಸೆಟ್ಟೇರುತ್ತದೆ, ಈಗ ಸೆಟ್ಟೇರುತ್ತಿದೆ, ಚಿತ್ರಕಥೆ ಸಿದ್ಧವಾಗುತ್ತಿದೆ ಎನ್ನುವ ಕನಸುಗಳನ್ನು ಕೆಲವು ವರ್ಷಗಳಿಂದ ಚಿತ್ರ ರಸಿಕರ ಎದೆಯಲ್ಲಿ ಬಿತ್ತುತ್ತಿದ್ದ ‘ಚಿಗುರಿದ ಕನಸು’ ಸಿನಿಮಾ ಮುಹೂರ್ತದ ಸಮಾರಂಭವದು.
ಸದಾಶಿವ ನಗರದ ಬಂಗಲೆಯಲ್ಲಿ ಸೆಟ್ಟೇರಿದ ‘ಅಪ್ಪು’ ಚಿತ್ರ ಜಯಭೇರಿ ಬಾರಿಸಿದ್ದರಿಂದಲೋ ಏನೋ- ರಾಜ್ ಕ್ಯಾಂಪ್ನ ಹೊಸ ಚಿತ್ರಗಳೂ ಅದೇ ಬಂಗಲೆಯಲ್ಲಿ ಸೆಟ್ಟೇರುತ್ತಿವೆ. ಈಗ ಚಿತ್ರೀಕರಣ ನಡೆಯುತ್ತಿರುವ ಪುನೀತ್ ಅಭಿನಯದ ‘ಅಭಿ’ ಚಿತ್ರ ಸೆಟ್ಟೀರಿದ್ದು ಕೂಡ ಇದೇ ಬಂಗಲೆಯಲ್ಲಿ . ಈಗ ‘ಚಿಗುರಿದ ಕನಸು’ ಸರದಿ.
ಬಹು ನಿರೀಕ್ಷೆಯ ಚಿಗುರಿದ ಕನಸು ಚಿತ್ರ ಸೆಟ್ಟೇರಿದ ಸಂತಸ ನಾಯಕ ಶಿವಣ್ಣ , ನಿರ್ದೇಶಕ ನಾಗಾಭರಣ, ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಅವರ ಮೊಗದಲ್ಲಿ ಮಡುಗಟ್ಟಿತ್ತು . ‘ಶಿವಣ್ಣನ ನಾಯಕತ್ವದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿವರಾಮ ಕಾರಂತರ ಕಾದಂಬರಿಯನ್ನಾಧರಿಸಿದ ಚಿತ್ರವನ್ನು ನಿರ್ಮಿಸುವುದು ಹತ್ತು ವರ್ಷದ ಕನಸು. ಅದೀಗ ನೆನಪಾಗುತ್ತಿದೆ’ ಎಂದು ಪಾರ್ವತಮ್ಮ ಸಂತಸ ವ್ಯಕ್ತಪಡಿಸಿದರು. ರಾಜ್ ಸೋದರ ವರದರಾಜ್ ಸೇರಿದಂತೆ ರಾಜ್ ಮಕ್ಕಳು ಮೊಮ್ಮಕ್ಕಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಶಿವಣ್ಣ ಹಾಗೂ ನಾಗಾಭರಣ ಮಾತಾಡುವ ಮೂಡ್ನಲ್ಲಿರಲಿಲ್ಲ . ಅವರ ಕನಸು ಮನಸಲ್ಲೂ ಚಿಗುರಿದ ಕನಸು !
ಚಿಗುರಿದ ಕನಸು ಬಳಗವನ್ನೊಮ್ಮೆ ನೋಡಿ :
ನಿರ್ಮಾಪಕಿ- ಪಾರ್ವತಮ್ಮ ರಾಜ್ಕುಮಾರ್
ನಿರ್ದೇಶನ- ಟಿ.ಎಸ್.ನಾಗಾಭರಣ
ಕಥೆ- ಶಿವರಾಮ ಕಾರಂತ
ಚಿತ್ರಕಥೆ, ಸಂಭಾಷಣೆ- ಜಯಂತ ಕಾಯ್ಕಿಣಿ
ಸಂಗೀತ- ವಿ.ಮನೋಹರ್
ಛಾಯಾಗ್ರಹಣ- ಬಿ.ಸಿ.ಗೌರಿಶಂಕರ್.
ಇಂಥದೊಂದು ಬಳಗದ ಸೃಜನಶೀಲತೆಯ ಮೂಸೆಯಲ್ಲಿ ಮೂಡುತ್ತಿರುವ ಚಿತ್ರದ ಬಗೆಗೆ ಈಗಿನಿಂದಲೇ ಕನಸುಗಳನ್ನು ಕಾಣಬಹುದು !
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications