ಯೋಗರಾಜ ಭಟ್ರ ‘ಗಾಳಿಪಟ’ ಟೀಮ್ನಲ್ಲಿ ಪುನೀತ್!
ಮುಂಗಾರು ಮಳೆ" ಸುರಿಸಿದ ನಿರ್ದೇಶಕ ಯೋಗರಾಜ ಭಟ್, ಈಗ 'ಗಾಳಿಪಟ " ಹಾರಿಸಲು ಮುಂದಾಗಿದ್ದಾರೆ! ಅವರ ಹೊಸ ಚಿತ್ರದ ನಾಯಕರು ಒಬ್ಬರಲ್ಲ, ಇಬ್ಬರಲ್ಲ ಮೂವರು! ಅವರಲ್ಲಿ ಪುನೀತ್ ಸಹಾ ಒಬ್ಬರು!
ಮುಂಗಾರು ಮಳೆ" ನಂತರ ಯೋಗರಾಜ ಭಟ್ ಮೇಲೆ ಎಷ್ಟು ನಿರೀಕ್ಷೆ ಮತ್ತು ಒತ್ತಡಗಳಿವೆ ಅಂದರೆ ವಿವರಿಸುವುದು ಕಷ್ಟ. ಈ ಭಾರಕ್ಕೆ ಅವರು ಕುಸಿಯದಿರಲಿ ಎಂಬುದು ಹಿತೈಷಿಗಳ ಹಾರೈಕೆ. ಅವರೀಗ ಹೊಸ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ಹೆಸರು 'ಗಾಳಿ ಪಟ". ಜುಲೈನಲ್ಲಿ ಚಿತ್ರೀಕರಣ ಶುರು.
ಪುನೀತ್ ಜೊತೆ ದಿಗಂತ್, ರಾಜೇಶ್ ಕೃಷ್ಣ ' ಗಾಳಿಪಟ"ದ ನಾಯಕರು. 'ಮುಂಗಾರು ಮಳೆ", 'ಮೀರಾ ಮಾಧವ ರಾಘವ" ಚಿತ್ರದಲ್ಲಿ ನಟಿಸಿರುವ ದಿಗಂತ್, ನಾಯಕರಾಗಲು ಬಂದು, ಗಾಯಕರಾದ ರಾಜೇಶ್ ಕೃಷ್ಣನ್ಗೆ ಈ ಚಿತ್ರ ಭವಿಷ್ಯದ ಪ್ರಶ್ನೆ!
ಆಗಾಗ ಸ್ಯಾಂಡಲ್ವುಡ್ಗೆ ಕಾಲಿಡುವ ಡೈಸಿ ಬೋಪಣ್ಣ, ಕನ್ನಡಿಗರು ನನ್ನನ್ನು ಮರೆತರೆಂದು ಕೊರಗುವ ಛಾಯಾ ಸಿಂಗ್, 'ಜೋಕ್ ಫಾಲ್ಸ್" ನಾಯಕಿ ನೀತಾ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಮಾತುಕತೆಯೂ ಮುಗಿದಿದೆ. ತಾರಾದಂಡನ್ನು ಯೋಗರಾಜ ಭಟ್ ಹೇಗೆ ನಿಬಾಯಿಸುತ್ತಾರೆ ಅನ್ನುವುದರ ಮೇಲೆ, ಚಿತ್ರದ ಭವಿಷ್ಯವನ್ನು ಯೋಚಿಸಬಹುದು.
'ಇನ್ನಷ್ಟು ಒಳ್ಳೆ ಚಿತ್ರ ಕೊಡಬಲ್ಲೆ.. ಮುಂಗಾರು ಮಳೆಯಂತಹ ಮತ್ತೊಂದು ಯಶಸ್ವಿ ಚಿತ್ರ ಕೊಡ್ತೀನೋ ಇಲ್ವೋ ಗೊತ್ತಿಲ್ಲ" ಎಂದಿದ್ದ ಯೋಗರಾಜ್ ಭಟ್, ಗೆಲುವಿನ ಯಾತ್ರೆ ಮುಂದುವರೆಸಲು ಸಾಕಷ್ಟು ಹೋಮ್ವರ್ಕ್ ಮಾಡುತ್ತಿದ್ದಾರೆ. ತಲೆ ಕೆರೆದುಕೊಂಡು ಕತೆ ಹೆಣೆಯುತ್ತಿದ್ದಾರೆ. ಅವರ ಪ್ರಯತ್ನಗಳು ಫಲಿಸಲಿ, 'ಗಾಳಿಪಟ" ಮೇಲಕ್ಕೆ ಹಾರಲಿ..
ಪುನೀತ್ ಮತ್ತು ಯೋಗರಾಜ ಭಟ್ ನಂಟು :
ಈ ಹಿಂದೆಯೇ ಪುನೀತ್ ಚಿತ್ರವನ್ನು ಯೋಗರಾಜ ಭಟ್ ನಿರ್ದೇಶಿಸಬೇಕಿತ್ತು. ಪುನೀತ್ಗಾಗಿ ಮುಂಗಾರು ಮಳೆ ಮಾಡಲು ಭಟ್ ಮುಂದಾಗಿದ್ದರು. ಪಾರ್ವತಮ್ಮ ಕತೆ ಒಪ್ಪಲಿಲ್ಲ.. ಕತೆಗಿಂತಲೂ ಯೋಗರಾಜ ಭಟ್ರ ನಂಬಲಿಲ್ಲ. ಯಾಕೆಂದರೆ ಅವರು ಆಗ ಅದೃಷ್ಟಹೀನ ನಿರ್ದೇಶಕ.
ಅಂದು ಪುನೀತ್ ಜೊತೆ ನಿಲ್ಲಲು ಭಟ್ ಆಸೆ ಪಟ್ಟಿದ್ದರು. ಈಗ ಅದೃಷ್ಟ ಬಂದಿದೆ.. ಭಟ್ ಜೊತೆ ನಿಲ್ಲಲು ಪುನೀತ್ ಆಸೆ ಪಟ್ಟಿದ್ದಾರೆ!
ಇದನ್ನು ಓದಿ:
ಕನ್ನಡಿಗರಲ್ಲಿ ಸಿನಿಮಾ ಕ್ರೇಜೇ ಇಲ್ಲ -ಯೋಗರಾಜ ಭಟ್


Click it and Unblock the Notifications