ಕೆ.ಜಿ.ರಸ್ತೇಲಿ ಸೋಮವಾರ ರಾಜ್, ವಿಷ್ಣು, ಅಂಬಿ, ಉಪ್ಪಿ , ಸುದೀಪ್
ಹೃದಯಬೇನೆಯಿಂದ ಈಗಷ್ಟೇ ಚೇತರಿಸಿಕೊಂಡು ಸದಾಶಿವನಗರದ ಬಂಗಲೆಯಲ್ಲಿ ಮೊಮ್ಮಕ್ಕಳೊಂದಿಗೆ ಆಟದಲ್ಲಿ ಮುಳುಗಿರುವ ವರನಟ ಡಾ.ರಾಜ್ಕುಮಾರ್ ಮತ್ತೆ ಹೋರಾಟ ಎಂದು ಬೀದಿಗಿಳಿಯಲಿದ್ದಾರೆಯೆ ?
ಹೌದು !
ಹಾಗೆನ್ನುತ್ತಿದೆ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ . ಚಿತ್ರೋದ್ಯಮದ ನಾನಾ ಸಮಸ್ಯೆಗಳತ್ತ ಸರ್ಕಾರದ ಗಮನವನ್ನು ಸೆಳೆಯಲು ನಿರ್ಮಾಪಕರ ಸಂಘ ಆಗಸ್ಟ್ 9ರ ಸೋಮವಾರ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು , ಈ ಕಾರ್ಯಕ್ರಮದಲ್ಲಿ ರಾಜ್ ಸೇರಿದಂತೆ ಕನ್ನಡ ಚಿತ್ರೋದ್ಯಮದ ಸಮಸ್ತ ಪ್ರಮುಖರೂ ಭಾಗವಹಿಸುವುದಾಗಿ ಸಂಘ ಹೇಳಿಕೊಂಡಿದೆ.
'ಕನ್ನಡ ಚಿತ್ರರಂಗದ ಉಳಿವಿಗಾಗಿ ಭಾರೀ ಪ್ರತಿಭಟನೆ" ಎಂದು ಪ್ರತಿಭಟನಾ ಕಾರ್ಯಕ್ರಮವನ್ನು ನಿರ್ಮಾಪಕರ ಸಂಘ ಬಣ್ಣಿಸಿದೆ. ಈ ಪ್ರತಿಭಟನೆಯಲ್ಲಿ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಕಾರ್ಮಿಕರು, ಕಿರುತೆರೆ ಕಲಾವಿದರು ಮಾತ್ರವಲ್ಲದೆ- ಸಾಂಸ್ಕೃತಿಕ ಲೋಕದ ಪ್ರಮುಖರು ಹಾಗೂ ಕನ್ನಡಪರ ಸಂಘಟನೆಗಳ ನಾಯಕರು ಭಾಗವಹಿಸುವರು ಎಂದಿರುವ ಸಂಘ- ಕನ್ನಡ ಅಭಿಮಾನಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕರೆನೀಡಿದೆ.
ನಿರ್ಮಾಪಕರ ಸಂಘದ ಮಾತನ್ನು ನಂಬುವುದಾದರೆ- ಆ.9ರ ಸೋಮವಾರ ಬೆಳಗ್ಗೆ 10 ಗಂಟೆಗೆ ಕೆಂಪೇಗೌಡ ರಸ್ತೆಯ ಚೌಕದಲ್ಲಿ ವರನಟ ರಾಜ್, ವಿಷ್ಣು , ಅಂಬರೀಷ್, ಶಿವಣ್ಣ , ಉಪೇಂದ್ರ, ಪುನೀತ್, ರವಿಚಂದ್ರನ್, ಜಗ್ಗೇಶ್, ಸುದೀಪ್ ಮುಂತಾದ ತಾರಾಗಣ ಸೇರುವುದು ಖಚಿತ. ಹಾಗಾಗಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿ ದೇವರುಗಳೂ ಸೇರಲಿದ್ದಾರೆ.
ಸರ್ಕಾರ ಕಣ್ತೆರೆದೀತೆ ?
ಚಿತ್ರರಂಗದ ಚಟುವಟಿಕೆ ಸ್ಥಗಿತ : ಆ.9ರಂದು ಪ್ರತಿಭಟನೆ ಮಾತ್ರವಲ್ಲ , ಕನ್ನಡ ಚಿತ್ರೋದ್ಯಮದ ಸಮಸ್ತ ಚಟುವಟಿಕೆಗಳನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸುವುದಾಗಿಯೂ ನಿರ್ಮಾಪಕರ ಸಂಘ ಹೇಳಿದೆ.
ಚಿತ್ರೋದ್ಯಮದ ಸಮಸ್ಯೆಗಳ ಪರಿಹಾರಕ್ಕಾಗಿ ಸಮಿತಿಯಾಂದನ್ನು ರಚಿಸುವುದಾಗಿ ಸರ್ಕಾರ ಹೇಳಿರುವ ಬೆನ್ನಿನಲ್ಲೇ ಈ ಪ್ರತಿಭಟನೆ ಕಾರ್ಯಕ್ರಮ ಏರ್ಪಾಟಾಗಿದೆ.
ಸಬ್ಸಿಡಿ, ರಿಮೇಕ್ ನೀತಿ ನಿಲುವು, ಪರಭಾಷಾ ಚಿತ್ರಗಳಿಗೆ ಮನರಂಜನಾ ತೆರಿಗೆ ವಿನಾಯಿತಿ ಸೇರಿದಂತೆ ಸರ್ಕಾರದ ಹಲವು ನೀತಿಗಳ ಕುರಿತು ನಿರ್ಮಾಪಕರ ಸಂಘ ಆಕ್ಷೇಪ ಎತ್ತಿದೆ.
ಉಳಿದ ಚಿತ್ರಗಳು ಸೋಮವಾರದ ನಂತರ


Click it and Unblock the Notifications