ಗುಡ್ ಬೈ ಹೇಳಿದ ಅಂಬರೀಷಣ್ಣನ ಒಡಲಾಳ!
ರಾಜಕೀಯ ರಂಗದಲ್ಲಿ ನಟ ಅಂಬರೀಷ್ ಅವರ ಮುಂದಿನ ನಡೆ ಏನು? ಈ ಪ್ರಶ್ನೆಗೆ ಅಸ್ಪಷ್ಟ ಉತ್ತರವನ್ನು ಅವರು ಮಂಡ್ಯದಲ್ಲಿ ನೀಡಿದ್ದಾರೆ.
ಮಂಡ್ಯದಲ್ಲಿ ನಡೆದ ವಿವಿಧ ಸರ್ಕಾರಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಅವರು ಮಾತನಾಡಿದರು. ಈ ಸಭೆಯೇ ತಮ್ಮ ಪಾಲಿನ ಕೊನೆ ಸಭೆಯೆಂಬಂತೆ ವರ್ತಿಸಿದರು. ಎಲ್ಲರಿಗೂ ಗುಡ್ ಬೈ.. ಮುಂದೆ ಮಂಡ್ಯ ಕ್ಷೇತ್ರದ ಸಂಸದರಾಗುವವರು ಚೆನ್ನಾಗಿ ಕೆಲಸ ಮಾಡಲಿ..ಎಂದು ಅಂಬರೀಷ್ ಹೇಳಿದರು.
ಅಂಬರೀಷ್ ಅವರ ಹೇಳಿಕೆ, ಮತ್ತೆ ತಾವೆಂದೂ ಸಂಸದ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬಂತಿತ್ತು. ಅವರು ರಾಜ್ಯ ರಾಜಕಾರಣ ಪ್ರವೇಶಿಸುತ್ತಾರಾ? ಈ ಬಗ್ಗೆ ಅವರು ಸದ್ಯಕ್ಕೆ ಬಾಯಿಬಿಟ್ಟಿಲ್ಲ.
ಮಂಡ್ಯದಲ್ಲಿ ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅಂಬರೀಷ್, ರಾಜ್ಯ ಸಂಸದರ ಬೇಜವಾಬ್ದಾರಿಯನ್ನು ಟೀಕಿಸಿದರು. ಕೇಂದ್ರದ ನೆರವು ಪಡೆಯುವಲ್ಲಿ ರಾಜ್ಯದ ಸಂಸದರಿಗೆ ಆಸಕ್ತಿ ಇಲ್ಲ. ಇತರೆ ರಾಜ್ಯಗಳ ಸಂಸದರನ್ನು ನೋಡಿ, ನಮ್ಮವರು ಪಾಠ ಕಲಿಯಬೇಕಾಗಿದೆ. ಸಂಸದರ ಹಣ, ಕರ್ನಾಟಕದಲ್ಲಿ ಸದುಪಯೋಗವಾಗಿಲ್ಲ ಎಂದು ಬೇಸರದಿಂದ ಹೇಳಿದರು. ಬಡಜನರ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು.
ಸಂಸದ ಸ್ಥಾನಕ್ಕೆ ತಾವು ನೀಡಿರುವ ರಾಜೀನಾಮೆ, ಉಪ ರಾಷ್ಟ್ರಪತಿ ಚುನಾವಣೆ ನಂತರ ಅಂಗೀಕಾರವಾಗಬಹುದು ಎಂದು ಅಂಬರೀಷ್ ಹೇಳಿದರು.


Click it and Unblock the Notifications