ಬೆಂಗಳೂರು ಬಾಲೆ ಶಿರಿನ್ ಅಲವತ್ತುಕೊಳ್ಳುತ್ತಿದ್ದಾಳೆ
ಬೆಂಗಳೂರು ಬಾಲ್ಡ್ವಿನ್ ಬಾಲೆ ಶಿರಿನ್ ಗಾಂಧಿನಗರದಿಂದ ದೂರ ಬಹು ದೂರ ಹೋಗಿ ಥೇಟ್ ಮೊನಿಷಾ ಕೊಯಿರಾಲ ಥರಾ ಫಿರ್ಯಾದು ಒದರಿಕೊಂಡು ಓಡಾಡುತ್ತಿರುವುದರಿಂದ ಆಕೆಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು.
'ಏಕ್ ಛೋಟಿ ಸಿ ಪ್ರೇಂ ಕಹಾನಿ" ಹಿಂದಿ ಚಿತ್ರದಲ್ಲಿ ತನ್ನ ಪಾತ್ರದಲ್ಲಿ ಬೇರಾರನ್ನೋ ಬೇರ್ ಮಾಡಿ ತೋರಿಸಿ, ಜನ ಅದು ತಾನೇ ಎಂದು ತಿಳಿವಂತೆ ಮಾಡಿದ್ದಕ್ಕೆ ಮೋನಿಷಾ ಕೋರ್ಟಿನ ಕಟೆಕಟೆ ಹತ್ತಿದ್ದು, ಆನಂತರ ಶಿವಸೇನೆ ಮುಖ್ಯಸ್ಥ ಬಾಳ್ಠಾಕ್ರೆ ಮನೆ ಬಾಗಿಲು ತಟ್ಟಿ ದ್ದು , ಯಾವುದೂ ಫಲ ಕೊಡದೆ ಎಲ್ಲರೂ ಬಾಯಿ ಚಪ್ಪರಿಸಿಕೊಂಡು ಸಿನಿಮಾ ನೋಡಿ ಎದ್ದು ಬಂದಿದ್ದು ಈಗ ಹಳತು. ಶಿರಿನ್ ಮಾಡುತ್ತಿರುವ ಆರೋಪ ಕೂಡ ಥೇಟ್ ಮೊನಿಷಾ ತರಹದ್ದೇ.
ಶಿರಿನ್ ದೂರಾದರೂ ಏನು?
'ತುಲ್ಲೊವಾತೊ ಇಲ್ಲಮೈ" ಎಂಬುದು ಈಕೆ ನಟಿಸಿದ ಮೊದಲ ತಮಿಳು ಚಿತ್ರ. ಒಂದು ಸೀನಲ್ಲಿ ಪೂರಾ ಬತ್ತಲು ಬೆನ್ನು ತೋರುವಂತೆ ನಿರ್ದೇಶಕ ಕಸ್ತೂರಿ ರಾಜ ಕೇಳಿದಾಗ, ಅದಕ್ಕೆ ಶಿರಿನ್ ಒಲ್ಲೆ ಅಂದಳು. ಹೋಗಲಿ ಬಿಡಮ್ಮಾ ಎಂದು ಕಸ್ತೂರಿ ಸುಮ್ಮನಾದರು. ಖುಷಿಯಾದ ಶಿರಿನ್ ಶೂಟಿಂಗ್ ಮುಗಿಸಿದಳು. ಸಿನಿಮಾ ನೋಡಿದಾಗ, ಶಿರಿನ್ ಬೆಚ್ಚಿ ಬೀಳೋದೊಂದೇ ಬಾಕಿ. ಅವಳು ಒಲ್ಲೆ ಎಂದ ಬೆತ್ತಲೆ ಬೆನ್ನಿನ ಸೀನು ಅದು ಹೇಗೋ ಸೇರಿಕೊಂಡುಬಿಟ್ಟಿದೆ ! ತನ್ನ ತರಹದ್ದೇ ಇನ್ನೊಬ್ಬ ಹೆಣ್ಣು ಕಸ್ತೂರಿ ರಾಜಾಗೆ ಬೆನ್ನು ತೋರಿಸಿದ್ದಾಳೆ. ತನ್ನ ಅನುಮತಿ ಪಡೆಯದೆ ಹೀಗೆ ಮಾಡಿರುವುದು ಅಕ್ಷಮ್ಯ ಎಂಬುದು ಶಿರಿನ್ ದೂರು.
ಇಷ್ಟಕ್ಕೂ ಶಿರಿನ್ ಯಾಕೆ ಕಂಪ್ಲೇಂಟ್ ಕೊಡಲಿಲ್ಲ ?
ಅವರ ಮಾತಲ್ಲೇ ಕೇಳಿ...
ಕೊಟ್ಟಿದ್ದರೆ ನನಗೆ ನ್ಯಾಯ ಸಿಗುತ್ತಿತ್ತಾ? ನನಗೆ ವಿಷಯ ಗೊತ್ತಾಗಿದ್ದೇ ಸಿನಿಮಾ ಬಿಡುಗಡೆಯಾದ ಮೇಲೆ. ಅಷ್ಟೊತ್ತಿಗೆ ಸಾಕಷ್ಟು ಜನ ಸಿನಿಮಾ ನೋಡಿಯಾಗಿತ್ತು. ಇನ್ನು ಕೋರ್ಟಿಗೆ ಹೋಗಿ, ಸಿನಿಮಾಗೆ ಸ್ಟೇ ತಂದು ನ್ಯಾಯ ಗಿಟ್ಟಿಸಿಕೊಳ್ಳುವಷ್ಟರಲ್ಲಿ ಹೈರಾಣಾಗಿರುತ್ತೇನೆ. ನಾನಿನ್ನೂ ಹೊಸಬಳು. ಹೀಗೆಲ್ಲಾ ದೂರು ದುಃಖ ತೋಡಿಕೊಂಡು ಕೋರ್ಟಿಗೆ ಹೋದರೆ ಕೆರಿಯರ್ರಿಗೇ ಪೆಟ್ಟು.
ಫ್ಲಾಷ್ಬ್ಯಾಕ್ : ಚೊಚ್ಚಲ ಚಿತ್ರ ಕನ್ನಡದ 'ಧ್ರುವ"ದಲ್ಲಿ ಸದಾ ಸೆರಗು ಹಾರಿಸಿಕೊಂಡು, ಹೊಕ್ಕಳು ತೋರಿಕೊಂಡು ಓಡಾಡಿದ್ದೊಂದೇ ಶಿರಿನ್ ಪ್ಲಸ್ ಪಾಯಿಂಟು ಅಂತ ಸ್ಯಾಂಡಲ್ವುಡ್ ಲೇವಡಿಯಾಡಿತ್ತು.
ನಿರ್ಮಾಪಕರಿಗೆ ವಿಶೇಷ ಸೂಚನೆ : ಇನ್ನು ಮುಂದೆ ಶಿರಿನ್ ತೀರಾ ಎಕ್ಸ್ಪೋಸ್ ಮಾಡೋಕೆ ಸಿದ್ಧರಿಲ್ಲ. ಅವರನ್ನು ಪಾತ್ರಕ್ಕೆ ಆರಿಸುವ ಮುನ್ನ ಇದರ ಪರಿಜ್ಞಾನ ಇರಲಿ. 'ಧ್ರುವ"ದಂಥಾ ಪಾತ್ರಗಳಿಗೆ ಇನ್ನು ಮುಂದೆ ಶಿರಿನ್ ಹಿಂದೂಮುಂದೂ ನೋಡಲಿದ್ದಾರೆ. ಸದ್ಯಕ್ಕೆ ಟಾಲಿವುಡ್ನಲ್ಲಿ ಬ್ಯುಸಿಯಾಗಿರುವ ಈಕೆ ಅಲ್ಲಿಂದ ಸೀದಾ ಬಾಲಿವುಡ್ ಕದ ತಟ್ಟಲು ರೆಡಿಯಾಗಿದ್ದಾರೆ. ಕಸ್ತೂರಿ ರಾಜ ವಿರುದ್ಧ ಸಿಕ್ಕ ಸಿಕ್ಕವರ ಕೈಲೆಲ್ಲಾ ಆರೋಪ ಮಾಡುತ್ತಿರುವುದರಿಂದ ಶಿರಿನ್ ಸಂಭಾವನೆ ಕೂಡ ಏರಿದೆ !Post Your Views


Click it and Unblock the Notifications