ನಟ ಅನಂತನಾಗ್ ಜೊತೆ ಸಂವಾದಕ್ಕೆ ಬರ್ತೀರಾ?

ಕಲಾತ್ಮಕ ಹಾಗೂ ವಾಣಿಜ್ಯ ಚಿತ್ರಗಳೆರಡರಲ್ಲೂ ಹೆಸರು ಮಾಡಿದ ಕಲಾವಿದರಲ್ಲಿ ಅನಂತನಾಗ್ ಅವರದು ಅಚ್ಚಳಿಯದ ಹೆಸರು. ಉತ್ತರ ಕನ್ನಡ ಜಿಲ್ಲೆಯ ನಾಗರಕಟ್ಟೆಯಲ್ಲಿ ಜನಿಸಿದ ಅನಂತನಾಗ್, ಪಿ.ವಿ.ನರಸಿಂಹರಾಜ ಅರಸ್ ನಿರ್ದೇಶನದ ಸಂಕಲ್ಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಜಿ ವಿ ಅಯ್ಯರ್ ನಿರ್ದೇಶನದ ಹಂಸಗೀತೆ ಚಿತ್ರದಲ್ಲಿ ಶ್ರೇಷ್ಠ ಅಭಿನಯದ ಮೂಲಕ ಅನಂತನಾಗ್ ಗಮನಸೆಳೆದರು. ಬಯಲುದಾರಿ, ಬೆಂಕಿಯಬಲೆ, ಚಂದನದ ಗೊಂಬೆ ಮೊದಲಾದ ಚಿತ್ರಗಳ ಮೂಲಕ ಪ್ರಮುಖವಾಗಿ ಮಹಿಳಾ ಪ್ರೇಕ್ಷಕರ ಮನಗೆದ್ದರು.
ಮುಂಬೈನಲ್ಲಿ ಬ್ಯಾಂಕ್ ನೌಕರಿಯಲ್ಲಿ ಇರುವಾಗಲೇ ಮರಾಠಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ನಾಗರಕಟ್ಟೆ ಎಂಬ ಅಡ್ಡಹೆಸರನ್ನು ನಾಗ್ ಎಂದು ಬದಲಿಸಿಕೊಂಡರು. ಮುಂಗಾರು ಮಳೆ, ಪಂಚರಂಗಿ ಸೇರಿದಂತೆ ಹಲವು ಚಿತ್ರಗಳಲ್ಲಿ ಹೊಸ ಕಲಾವಿದರೊಂದಿಗೂ ಸ್ಪರ್ಧೆ ನೀಡುತ್ತಿದ್ದಾರೆ. ಹಿಂದಿಯ ಅಂಕುರ, ನಿಶಾಂತ್ ಸೇರಿದಂತೆ ಆಂಗ್ಲ ಭಾಷೆಯಲ್ಲಿ ಸ್ಟಂಬಲ್ ಎಂಬ ಚಿತ್ರದಲ್ಲೂ ಅನಂತ್ ಅಭಿನಯಿಸಿದ್ದಾರೆ.
ನಾಟಕ, ಸಿನಿಮಾ ಕ್ಷೇತ್ರಗಳಲ್ಲಷ್ಟೇ ಅಲ್ಲದೆ, ರಾಜಕಾರಣದಲ್ಲೂ ಅನಂತನಾಗ್ ಗುರುತಿಸಿಕೊಂಡಿದ್ದಾರೆ. ದಿ.ಜೆ ಎಚ್ ಪಟೇಲ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಇಂಥ ಬಹುಮುಖ ಪ್ರತಿಭೆ ಅನಂತನಾಗ್ ಜೊತೆ ಸಂವಾದಕ್ಕೆ ತಪ್ಪದೆ ಬರ್ತೀರಾ ತಾನೆ. ಸ್ಥಳ: ಪ್ರಿಯದರ್ಶಿನಿ ಸಭಾಂಗಣ, ಬಾದಾಮಿ ಹೌಸ್, ಬಿಬಿಎಂಪಿ ಕಚೇರಿ ಎದುರು, ಜೆಸಿ ರಸ್ತೆ, ಬೆಂಗಳೂರು. ಸಮಯ: ಸಂಜೆ 4.30ಕ್ಕೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











