ಇಲ್ಲಿದೆ ನಮ್ಮನೆ ಬಾಲಿವುಡ್ ಸುಮ್ಮನೆ ಎಂದ ಸುದೀಪ್
ಕನ್ನಡದ ನಟ ಕಿಚ್ಚ ಸುದೀಪ್ ಬಾಲಿವುಡ್ ಕಡೆಗೆ ಯಾಕೆ ಮತ್ತೆ ಹೋಗಲಿಲ್ಲ ಎಂಬ ಪ್ರಶ್ನೆ ಸಾಕಷ್ಟು ಜನರಿಗೆ ಕಾಡಿರಲಿಕ್ಕೆ ಸಾಕು. ಏಕೆಂದರೆ 'ಪೂಂಕ್' ಮತ್ತು 'ರಣ್' ಬಾಲಿವುಡ್ ಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಸುದೀಪ್ ಬಾಲಿವುಡ್ ನಲ್ಲೇ ಸೆಟ್ಲ ಆಗಬಹುದೆಂದು ಬಹುತೇಕರು ಅಂದುಕೊಂಡಿದ್ದು ಸುಳ್ಳಲ್ಲ.
ಈ ಬಗ್ಗೆ ಕೇಳಿದಾಗ, ಸುದೀಪ್ ಉತ್ತರ "ನನಗೆ ಬಾಲಿವುಡ್ ನಲ್ಲಿ ಮತ್ತೆ ಅವಕಾಶಗಳು ಬಂದಿದ್ದು ನಿಜ. ಆದರೆ ಸ್ಯಾಂಡಲ್ ವುಡ್ ಬಿಟ್ಟು ಹೋಗುವುದಕ್ಕೆ ಮನಸ್ಸಾಗಲಿಲ್ಲ. ಬಾಲಿವುಡ್ ಗೆ ಒಮ್ಮೆ ಹೋಗಿ ಬಂದರೆ ಬರೋಬ್ಬರಿ ಅರ್ಧ ವರ್ಷಕ್ಕಿಂತ ಹೆಚ್ಚು ಕಾಲ ಮುಗಿದು ಹೋಗುತ್ತೆ. ಆಗ ಇಲ್ಲಿಂದ ದೂರವಾದ ಭಾವ ಕಾಡುತ್ತೆ. ಹಾಗಾಗಿ ಇಲ್ಲೇ ಇದ್ದೇನೆ".
ಸದ್ಯಕ್ಕೆ ತೆಲುಗಿನ 'ಈಗ' ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸುದೀಪ್, ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಾರೆ. ವರದನಾಯಕ, ಕಿಕ್, ಹರ್ಷ ನಿರ್ದೇಶನ ಚಿತ್ರ, ಹಾಗೂ 'ವಿಷ್ಣುವರ್ಧನ್' ಚಿತ್ರದ ನಿರ್ದೇಶಕ ಕುಮಾರ್ ಜೊತೆ ಸುದೀಪ್ ಮುಂದಿನ ಚಿತ್ರಗಳಿವೆ. "ಇಲ್ಲಿದೆ ನಮ್ಮನೆ, ಅಲ್ಲಿ ಹೋದೆ ಸುಮ್ಮನೆ" ಸುದೀಪ್ ಪಾಲಸಿ. (ಒನ್ ಇಂಡಿಯಾ ಕನ್ನಡ)


Click it and Unblock the Notifications











