ಕನ್ನಡಕ್ಕೆ ಖಳನಟನಾಗಿ ಸಲ್ಮಾನ್ ಖಾನ್ ತಮ್ಮ ಅರ್ಬಾಜ್
ಕನ್ನಡದಲ್ಲಿ ಭಾರಿ ಬಜೆಟ್ ಚಿತ್ರಗಳನ್ನು ನಿರ್ಮಿಸುವುದು ಬಲು ಅಪರೂಪ. ಅಂತಹದ ಒಂದು ಅಪರೂಪದ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ ದಿನೇಶ್ ಗಾಂಧಿ. ಚಿತ್ರದ ಹೆಸರು ಛತ್ರಪತಿ. ಎಸ್.ಎಸ್.ಕಂಬೈನ್ಸ್ ಲಾಂಛನದಲ್ಲಿ ದಿನೇಶ್ಗಾಂಧಿ ನಿರ್ಮಿಸುತ್ತಿರುವ ನಾಲ್ಕನೇ ಚಿತ್ರವಿದು.
ಈ ಚಿತ್ರಕ್ಕೆ ಖಳನಾಯಕನಾಗಿ ಸಲ್ಮಾನ್ ಖಾನ್ ತಮ್ಮ ಅರ್ಬಾಜ್ ಖಾನ್ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಖ್ಯಾತ ನಟಿ ಭಾನುಪ್ರಿಯ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಸಿದ್ದಾಂತ್(ಎ.ಕೆ.56) ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರ ಅಪಾರ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ನಾಯಕಿಯ ಆಯ್ಕೆ ನಡೆಯುತ್ತಿದೆ.
ಸದ್ಯಕ್ಕೆ 'ಛತ್ರಪತಿ'ಗೆ ಕೇರಳದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಕಣ್ಣೂರಿನ ಕಡಲತೀರದಲ್ಲಿ ಐನೂರು ಮನೆಗಳ ಅದ್ದೂರಿ ಸೆಟ್ ನಿರ್ಮಿಸಲಾಗಿದೆ. ಈ ಸೆಟ್ ನಿರ್ಮಾಣಕ್ಕೆ ಸುಮಾರು ಎರಡು ಕೋಟಿ ಖರ್ಚಾಗಿರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಚಿತ್ರದ ಮೂರು ಸಾಹಸ ಸನ್ನಿವೇಶಗಳು 3ಡಿ ಎಫೆಕ್ಟ್ನಲ್ಲಿ ಮೂಡಿ ಬರಲಿದೆ.
ಚಿತ್ರದ ನಿರ್ದೇಶಕರೂ ಆಗಿರುವ ದಿನೇಶ್ಗಾಂಧಿ ಎ.ಆರ್.ಬಾಬು ಅವರೊಟ್ಟಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಎಂ.ಎಂ.ಕೀರವಾಣಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ದಾಸರಿಸೀನು ಛಾಯಾಗ್ರಹಣವಿದೆ. ಎಸ್.ಮನೋಹರ್ ಸಂಕಲನ, ಇಸ್ಮಾಯಿಲ್ ಕಲಾ ನಿರ್ದೇಶನ ಹಾಗೂ ಪ್ರದೀಪ್ ಅಂಥೋನಿ ನೃತ್ಯ ನಿರ್ದೇಶನ 'ಛತ್ರಪತಿ' ಚಿತ್ರಕ್ಕಿದೆ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











