'ಗೌತಮ್' ಆಗಿ ಬರಲಿದ್ದಾರೆ ಲವ್ಲಿ ಸ್ಟಾರ್ ಪ್ರೇಮ್
ಲವ್ಲಿ ಸ್ಟಾರ್ ಪ್ರೇಮ್(ನೆನಪಿರಲಿ), ಸಾರಾ(ಹೊಸ ಪರಿಚಯ), ಗುರುಕಿರಣ್, ರಾಜೀವ್ ಕೆ ಪ್ರಸಾದ್, ಸುರೇಶ್ ಕೃಷ್ಣ, ಅನಂತ್ ನಾಗ್, ವಿನಯಪ್ರಕಾಶ್, ಸುಧಾರಾಣಿ, ರಮೇಶ್ ಭಟ್ ಸೇರಿದಂತೆ ಹಳೆ ಹಾಗೂ ಹೊಸ ಮುಖಗಳ ತಂಡದೊಂದಿಗೆ 'ಗೌತಮ್' ಎಂಬ ಹೊಸ ಚಿತ್ರ ಸೆ.10ರಂದು ಸೆಟ್ಟೇರಲಿದೆ. ದಿ ಸಿನರ್ಜಿ ಇಮೇಜಸ್ ಪ್ರೈ. ಲಿಮಿಟೆಡ್ ನ ಒಡತಿ ಮಾಲಿನಿ ಸುಬ್ರಹ್ಮಣ್ಯಂ ಇದೇ ಮೊದಲಬಾರಿಗೆ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಪರಿಚಯವಾಗುತ್ತಿದ್ದಾರೆ.
ಕನ್ನಡ ಚಿತ್ರರಂಗದ ಯಶಸ್ವಿ ನಿರ್ಮಾಪಕ ಸೂರಪ್ಪ ಬಾಬು ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ಕೊಡಲಿದ್ದಾರೆ. ಆರ್ ಎನ್ ಆರ್ (ಆರ್ ನಾಗೇಂದ್ರ ರಾವ್)ಕುಟುಂಬದ ಮೂರನೆ ತಲೆಮಾರಿನ ಕುಡಿ ರಾಜೀವ್ ಕೆ ಪ್ರಸಾದ್ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಲಿದ್ದಾರೆ.
ಶನಿವಾರ(ಸೆ.6) ಸಾಲಿಟೇರ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಸರಳ ಸುಂದರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ನಿರ್ದೇಶಕ ರಾಜೀವ್ ಪ್ರಸಾದ್, ಈ ಚಿತ್ರವನ್ನು ಯಾವುದೇ ಇರುಸು ಮುರುಸಿಗೆ ಒಳಗಾಗದೆ ಕುಟುಂಬ ಸಮೇತರಾಗಿ ಬಂದು ನೋಡಬಹುದು ಎಂದು ತಮ್ಮ ಚಿತ್ರದ ಬಗ್ಗೆ ಭರವಸೆಯ ಮಾತುಗಳನ್ನಾಡಿದರು. ಈಗಾಗಲೇ ಅವರು ಸುರೇಶ್ ಕೃಷ್ಣನ್ ಜೊತೆ 10ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ತಮಿಳಿನಲ್ಲಿ 10 ಮೆಗಾ ಧಾರಾವಾಹಿಗಳನ್ನು ನಿರ್ದೇಶಿಸಿದ ಅನುಭವವಿದೆ.
6 ರಿಂದ 60 ವರ್ಷದವರು ಈ ಚಿತ್ರವನ್ನು ಈ ಚಿತ್ರ ಖುಷಿ ಪಡಿಸಲಿದೆ. ಪ್ರೇಕ್ಷಕರು ತಾವೂ 'ಗೌತಮ್' ನಂತಹ ಮಗನಾಗಬೇಕು ಎಂದು ಹಂಬಲಿಸುತ್ತಾರೆ ಎಂದರು. ಸುರೇಶ್ ಕೃಷ್ಣನ್ ಅವರ ಚಿತ್ರಕಥೆಗೆ ಒಂದಷ್ಟು ನನ್ನದೇ ಆದ ವಿಚಾರಗಳನ್ನು ಸೇರಿಸಿ ಕನ್ನಡ ಜಾಯಮಾನಕ್ಕೆ ಒಗ್ಗುವಂತೆ ಚಿತ್ರಕಥೆಯಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿರುವುದಾಗಿ ಪ್ರಸಾದ್ ತಿಳಿಸಿದರು.
'ಗೌತಮ್' ಚಿತ್ರ ತಾಂತ್ರಿಕತೆಯಲ್ಲಿ ಉತ್ತಮ ಗುಣಮಟ್ಟ ಹೊಂದಿರುತ್ತದೆ. ಈ ಚಿತ್ರ ನಿಜಕ್ಕೂ ಕನ್ನಡ ಚಿತ್ರ ರಸಿಕರ ಮನಗೆಲ್ಲುತ್ತದೆ ಎಂಬ ವಿಶ್ವಾಸ ತಮಗಿರುವುದಾಗಿ ನಿರ್ಮಾಪಕಿ ಮಾಲಿನಿ ಸುಬ್ರಹ್ಮಣ್ಯಂ ತಿಳಿಸಿದರು. ಲವ್ಲಿ ಸ್ಟಾರ್ ಪ್ರೇಮ್ ಮಾತನಾಡುತ್ತಾ, ಗೌತಮ್ ಚಿತ್ರಕ್ಕೆ ಸೂರಪ್ಪ ಬಾಬು ನನ್ನ ಹೆಸರನ್ನು ಸೂಚಿಸಿದ್ದಕ್ಕೆ ಅವರಿಗೆ ತುಂಬಾ ಆಭಾರಿಯಾಗಿದ್ದೇನೆ. ಕುಟುಂಬದ ಗೌರವವನ್ನು ಎತ್ತಿಹಿಡಿಯುವ ತುಡಿತ ಗೌತಮ್ ದಾಗಿರುತ್ತದೆ. ಅವನೇ ಚಿತ್ರದ ಆಕರ್ಷಣೆಯ ಕೇಂದ್ರಬಿಂದು ಎಂದರು. ಈ ಚಿತ್ರಕ್ಕೆ ಸುಧಾಕರ್ ಛಾಯಾಗ್ರಹಣ, ಗುರುಕಿರಣ್ ಸಂಗೀತ ಸಂಯೋಜನೆಯ ಆರು ಹಾಡುಗಳು ಇವೆ. ಚಿತ್ರದ ಬಹುತೇಕ ಚಿತ್ರೀಕರಣ ಒಂದೇ ಮನೆಯಲ್ಲಿ ನಡೆಯಲಿರುವುದು ವಿಶೇಷ.
(ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications