ಜೀ ಕನ್ನಡದ ಟಾಪ್ -12 ಕಾಮಿಡಿ ಕಿಲಾಡಿಗಳು
ಜೀಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಆರಂಭಿಕ ಸುತ್ತುಗಳಲ್ಲಿ ರಾಜ್ಯಾದ್ಯಂತದಿಂದ ಬಂದ 48 ಹಾಸ್ಯ ಕಲಾವಿದರು ಹಾಸ್ಯದ ಹೊನಲು ಹರಿಸಿದ್ದರು. ಈಗ ಸ್ಪರ್ಧಿಗಳ ಸಂಖ್ಯೆ 12ಕ್ಕೆ ಇಳಿದಿದೆ.
ಮೈಸೂರಿನ ಕವಿತಾ. ಆರ್, ಕುಂದಾಪುರದ ರಮಾನಂದ ಕಾಮತ್, ರೋಣದ ಬಸವರಾಜ್ ಪಾಗದ್, ತುಮಕೂರಿನ ಈಶ್ವರಯ್ಯ, ಹೊಸಪೇಟೆಯ ಬೆಣ್ಣೆ ಬಸವರಾಜ್, ಗದಗದ ಶರೀಫ್ ಹೊಸಮನಿ, ಧಾರವಾಡದ ಸುನೀಲ್ ಪತ್ರಿ, ಬೆಂಗಳೂರಿನ ಸುಪ್ರಭಾ, ಕೊಪ್ಪಳದ ವೈಶಂಪಾಯನ, ದಾವಣಗೆರೆಯ ಗುರುಪ್ರಸಾದ್ ಕುಲಕರ್ಣಿ,ಬೆಂಗಳೂರಿನ ಭಾಸ್ಕರ್ ಹೆಬ್ಬಾರ್, ಕೋಲಾರದ ರಾಜಗೋಪಾಲ್ ಕಣದಲ್ಲಿರುವ ಅಂತಿಮ 12 ಮಂದಿಗಳಾಗಿದ್ದಾರೆ.
ಈ ಹನ್ನೆರಡು ಜನ ಹಾಸ್ಯ ಕಲಾವಿದರಲ್ಲಿ ಅಂತಿಮವಾಗಿ ಮೂವರನ್ನು ಆರಿಸಲಾಗುತ್ತದೆ. ಪ್ರಥಮ ಸ್ಥಾನ ಪಡೆದ ಅಭ್ಯರ್ಥಿಗೆ 2.5 ಲಕ್ಷ ರು, ಮೊದಲ ರನ್ನರ್ ಅಪ್ ಗೆ 1.5 ಲಕ್ಷ, ಹಾಗೂ 2 ನೇ ರನ್ನರ್ ಅಪ್ ಗೆ 1 ಲಕ್ಷ ರು ಗಳ ಭರ್ಜರಿ ಬಹುಮಾನ ನೀಡಲಾಗುತ್ತದೆ.
"ಕಾಮಿಡಿ ಕಿಲಾಡಿಗಳು" ಕರ್ನಾಟಕದ ವೀಕ್ಷಕರಿಗೆ ಸಖತ್ ಮನರಂಜನೆ ಒದಗಿಸುತ್ತಿರುವುದಲ್ಲದೇ ವಿನೂತನ ಕಾರ್ಯಕ್ರಮಕ್ಕೆ ವೇದಿಕೆ ಕಲ್ಪಿಸಿದೆ. ಕನ್ನಡದ ವಾಹಿನಿಗಳು, ಧಾರವಾಹಿ, ಸುದ್ದಿ, ಸಿನಿಮಾ ಮತ್ತು ಸರಿಗಮಪ ರೀತಿಯ ಸಂಗೀತಮಯ ಕಾರ್ಯಕ್ರಮಗಳಿಗೆ ಮಾತ್ರವೇ ಸೀಮಿತ ಎಂಬ ಮಾತನ್ನು ಜೀ ಕನ್ನಡ ವಾಹಿನಿ ಅಲ್ಲಗಳೆದಿದೆ ಎನ್ನುತ್ತಾರೆ ಜೀ ಕನ್ನಡ ವಾಹಿನಿಯ ವ್ಯವಹಾರ ಮುಖ್ಯಸ್ಥ ಅನುಪ್ ಚಂದ್ರಶೇಖರನ್.
ಕಿರುತೆರೆಯ ನಟಿ ನಮಿತಾರಾವ್ ಮತ್ತು ರೇಡಿಯೋ ಜಾಕಿ ದೀಪು(ಪ್ರದೀಪ್) "ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ಹಾಸ್ಯ ಬರಹಗಾರ ಎಂ.ಎಸ್. ನರಸಿಂಹಮೂರ್ತಿ ಮತ್ತು ಹಾಸ್ಯ ಕಲಾವಿದ ನಾಗರಾಜ ಕೋಟೆ ನಿರ್ಣಾಯಕರಾಗಿ ಭಾಗವಹಿಸುತ್ತಿದ್ದಾರೆ. ಸ್ಪರ್ಧಿಗಳು ಹಿನ್ನೆಲೆ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ವೇದಿಕೆಗೆ ಪ್ರವೇಶಿಸುವ ರೀತಿ ಕನ್ನಡ ಕಿರುತೆರೆ ಮಟ್ಟಿಗೆ ಹೊಸತನದಿಂದ ಕೂಡಿದೆ. ಜತೆಗೆ ಎಂದಿನ ಹಾಸ್ಯದ ಹೊನಲು ಹರಿಸುತ್ತಾರೆ ಎಂಬುದು ಜೀ ಕನ್ನಡ ವಾಹಿನಿಯ ಅಂಬೋಣ.
(ದಟ್ಸ್ ಕಿರುತೆರೆ ವಾರ್ತೆ)


Click it and Unblock the Notifications