ಚಾಕಲೇಟ್ ಹೀರೋ ಧ್ಯಾನ್ಗೆ ಈಗ ಹುಡುಗಿ ಕಾಟ!
ಸಮೀರ್ ದತ್ತಾನಿ ಉರುಫ್ ಧ್ಯಾನ್ ಅಭಿನಯಿಸಿರುವ 4 ಕನ್ನಡ ಚಿತ್ರಗಳಲ್ಲಿ, ಎರಡು ಗೆದ್ದಿವೆ... ಎರಡು ಬಿದ್ದಿವೆ! ಇತ್ತೀಚಿನ ಚಿತ್ರ ‘ಸಜನಿ’ಗೆ ಎ.ಆರ್.ರೆಹಮಾನ್ ಸಂಗೀತವಿದ್ದರೂ, ಲಂಡನ್ನ ಲೋಕೆಷನ್ ಇದ್ದರೂ ನೆಲಕಚ್ಚಿದೆ. ಆದರೆ ಧ್ಯಾನ್ ಸಮಸ್ಯೆ ಅದಲ್ಲ?
ಈ ಮಧ್ಯೆ ಧ್ಯಾನ್ ಉಗುರುಕಚ್ಚುತ್ತಾ ಅತ್ತಿಂದ ಇತ್ತ ಓಡಾಡುತ್ತಿದ್ದು, ಆಗಾಗ ಮೊಬೈಲ್ ನೋಡಿ, ಮುಖ ಸಿಂಡರಿಸುತ್ತಿದ್ದಾನೆ. ‘ಯಾಕೋ ತಮ್ಮ ಏನಾಯ್ತು?’ ಅಂದರೆ, ‘ಬೆಂಗ್ಳೂರು ಬಾಲೆಯರ ಕಾಟ ತಡೆಯೋಕ್ಕಾಗಲ್ಲ’ ಎನ್ನುತ್ತಿದ್ದಾನೆ!
ಯಾಕೆ ಏನಾಯ್ತು ಅಂದರೆ, ‘ಯಾರೋ ಗೊತ್ತಿಲ್ಲ ನನ್ನ ಅಭಿಮಾನಿ ಅಂತೆ, ನನ್ನ ಚಲನವಲನದ ಮೇಲೆ ಕಣ್ಣಿಟ್ಟಿದ್ದಾಳೆ. ನಾನು ಮುಂದೆ ಏನು ಮಾಡುತ್ತೀನಿ ಅನ್ನೋದು ಆಕೆಗೆ ಮೊದಲೇ ಗೊತ್ತಾಗಿರುತ್ತೆ. ಕೆಲವು ಸಲ ನನಗಿಂತ ಮುಂಚೆ, ಆಕೆಗೆ ನನ್ನ ಮುಂದಿನ ಹೆಜ್ಜೆ ಬಗ್ಗೆ ತಿಳಿಯುತ್ತೆ. ಅದು ಸಾಲದು ಅಂತಾ, ಕೊಳಕು ಮೆಸೇಜ್ಗಳನ್ನು ಬೇರೆ ಕಳಿಸೋಕೆ ಶುರು ಮಾಡಿದ್ದಾಳೆ. ಪ್ರತಿಸಾರಿ ಬೇರೆ ಬೇರೆ ನಂಬರ್ನಿಂದ ಕರೆ ಮಾಡಿ ಕಿರಿಕಿರಿ ಮಾಡುತ್ತಿದ್ದಾಳೆ’ ಎಂದು ಧ್ಯಾನ್ ಗೋಳಾಡುತ್ತಿದ್ದಾನೆ.
‘ನನ್ನಿಂದೆ ಸಾಕಷ್ಟು ಹುಡುಗಿಯರು ಬಿದ್ದಿದ್ದಾರೆ... ಪ್ರೀತಿ, ಪ್ರೇಮ, ಮದುವೆ ಎಂದೆಲ್ಲಾ ಮಾತನಾಡುತ್ತಾರೆ. ಆದರೆ ಹೀಗೆ ಮೊಬೈಲ್ನಲ್ಲಿ ಕಾಡಿಸೋ ಬಾಲೆ ಯಾರು ಗೊತ್ತಾಗುತ್ತಿಲ್ಲ’ ಎಂದಿದ್ದಾನೆ; ಧ್ಯಾನ್.
ಧ್ಯಾನ್ನನ್ನು ಕಾಡಿಸುತ್ತಿರುವ ಬಾಲೆ ಯಾರು? ನಿಮಗೇನಾದ್ರೂ ಗೊತ್ತೆ?


Click it and Unblock the Notifications