ಪ್ರಶಸ್ತಿಗಾಗಿ ಬರಗೂರರ ‘ಶಾಂತಿ’ ಮಂತ್ರ
ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಆಯ್ಕೆ ಹತ್ತಿರವಾಗುತ್ತಿದ್ದಂತೆ ನಿರ್ಮಾಪಕರೂ ನಿರ್ದೇಶಕರೂ ಚುರುಕಾಗುತ್ತಿದ್ದಾರೆ. ಮೊನ್ನೆ ಮೊನ್ನೆ ಕವಿತಾ ಲಂಕೇಶ್ರ ಮಹೋನ್ನತ ಚಿತ್ರ 'ಬಿಂಬ" ಬಿಡುಗಡೆಯಾಯ್ತು. ಕರೆಕ್ಟಾಗಿ ಏಳು ದಿನ ಓಡಿತು. ಆ ದಾಖಲೆಯನ್ನು ಮುರಿಯುವುದಕ್ಕೆ ಕ್ಯೂನಲ್ಲಿರುವವರ ಪೈಕಿ 'ಪ್ರವಾಹ"ದ ರಾಮದಾಸ ನಾಯ್ಡು ಮತ್ತು 'ಶಾಂತಿ"ಯ ಬರಗೂರು ಮುಂದಿದ್ದಾರೆ.
ಆದರೆ ಇಬ್ಬರೂ ಸಿನೆಮಾ ಬಿಡುಗಡೆ ಮಾಡುವಂಥ ಅವಿವೇಕದ ಕೆಲಸ ಮಾಡಲಿಕ್ಕಿಲ್ಲ. ರಾಮದಾಸ ನಾಯ್ಡು ಅವರಿಗೆ ತಮ್ಮ ಚಿತ್ರ ಈ 'ಪ್ರವಾಹ"ದಲ್ಲಿ ತೇಲುವುದಿಲ್ಲ ಅನ್ನೋದು ಗೊತ್ತಿದೆ. ಅವರ ಕಣ್ಣೇನಿದ್ದರೂ ಪ್ರಶಸ್ತಿಯ ಮೇಲೆ. ವಾರ್ತಾ ಇಲಾಖೆಯಲ್ಲಿ ನಾಲ್ಕು ವರುಷಗಳಿಂದ ಗೂಟಬಡಿದುಕೊಂಡು ಕೂತಿರುವ ಪ್ರಶಸ್ತಿ ಬ್ರೋಕರ್ ಸೋಮಶೇಖರ್ ಈ ಬಾರಿಯೂ ರಾಮದಾಸ ಕಡೆ ವಾಲಿರುವ ಖಚಿತ ಸುದ್ದಿ ಬಂದಿದೆ. ಈ ಮಧ್ಯೆ ಕಾಂಗ್ರೆಸ್ ಸರ್ಕಾರ ಪ್ರತಿಷ್ಠಾಪನೆಯಲ್ಲಿ ಎಸ್ಸೆಂಕೆ ಅಧಿಕಾರಕ್ಕೆ ಬಂದರೆ ಪ್ರಶಸ್ತಿ ತನ್ನದೇ ಅಂದುಕೊಂಡಿದ್ದ ಬರಗೂರು ಕೊಂಚ ವಿಚಲಿತರಾಗಿದ್ದಾರಂತೆ. ಅದಕ್ಕೇ ಅವರು ಈ ವಾರ ಪತ್ರಕರ್ತರಿಗೆ ಸಿನೆಮಾ ತೋರಿಸಲು ನಿರ್ಧರಿಸಿದ್ದಾರೆ. ಸಿನೆಮಾ ನೋಡಿದ ಪತ್ರಕರ್ತರು ಎರಡು ಸಾಲು ಒಳ್ಳೆಯ ಮಾತು ಗೀಚಿದರೂ ಬರಗೂರರ ಜನ ನೋಡದ 'ಶಾಂತಿ" ಗೆ ವಿಶೇಷ ಸಾಮಾಜಿಕ ಪರಿಣಾಮ ಬೀರುವ ಪ್ರಶಸ್ತಿ ಖಾತ್ರಿ.
ಅಂದಹಾಗೆ ಜನವೇ ನೋಡದ 'ಶಾಂತಿ" ಹೇಗೆ ಸಾಮಾಜಿಕ ಪರಿಣಾಮ ಬೀರುತ್ತದೆ ಹೇಳಿ?
ಉಪೇಂದ್ರರ ಸಿನೆಮಾ ನೋಡಿ ಜನ ಶಾಂತಿ, ನೆಮ್ಮದಿ ಕಳಕೊಳ್ಳುತ್ತಾರೆ. ಆದರೆ ಬರಗೂರರ ಸಿನೆಮಾನ ಜನ ನೋಡದೇ ಶಾಂತಿಯಿಂದಿರುತ್ತಾರೆ. ಅಲ್ಲಿಗೆ ಅವರ ಉದ್ದೇಶ ಸಫಲವಾಯ್ತಲ್ಲ?
(ಸ್ನೇಹ ಸೇತು: ಹಾಯ್ ಬೆಂಗಳೂರ್!)


Click it and Unblock the Notifications