ಸಿನಿಮಾ ನಿರ್ದೇಶಿಸುತ್ತಿರುವ ಏಕೈಕ ನಿರ್ದೇಶಕಿಯ ವಿಷಾದ ಗಾಥೆ!
'ಅಲೆಮಾರಿ" ಎನ್ನುವ ಚಿತ್ರ ಮಾಡಿದ್ದೇನೆ ಎನ್ನುವುದನ್ನೇ ನಾನು ಮರೆತಿದ್ದೇನೆ... !"
- ಹಾಗೆನ್ನುವಾಗ ಕವಿತಾ ಲಂಕೇಶ್ ಮೊಗದಲ್ಲಿ ನೋವಿನ ಛಾಯೆ, ಹತಾಶೆ, ಸಿಟ್ಟು ಸ್ಪಷ್ಟವಾಗಿ ಇಣುಕುತ್ತಿತ್ತು . ಮೊದಲ ಚಿತ್ರ 'ದೇವೀರಿ" ಮೂಲಕ ಅಂತರರಾಷ್ಟ್ರೀಯ ಗಮನ ಸೆಳೆದ ಕವಿತಾ ಪಾಲಿಗೆ ಎರಡನೇ ಚಿತ್ರವೇ ಕಹಿ ನೆನಪಾಗಿ ಪರಿಣಮಿಸಿದೆ. ಆರೋಪಿ ಸ್ಥಾನದಲ್ಲಿ ನಿಂತಿರುವುದು ಫಿಲಂ ಡಿವಿಜನ್.
ಅನೇಕ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪಾಲ್ಗೊಳ್ಳಲು 'ಅಲೆಮಾರಿ"ಗೆ ಕರೆ ಬಂತು. ಆದರೆ ಫಿಲಂ ಡಿವಿಜನ್ ಯಾವ ಆಹ್ವಾನಕ್ಕೂ ಉತ್ಸಾಹ ತೋರಲಿಲ್ಲ. ಚಿತ್ರ ಯಾವಾಗ ತೆರೆ ಕಾಣುತ್ತದೆ ಎಂದು ಸಂಪರ್ಕಿಸಿದರೆ ಉತ್ತರವೇ ಇಲ್ಲ . ಚಿತ್ರ ನಿರ್ಮಾಣದ ನಂತರ ನಿರ್ದೇಶಕರಿಗೂ ಚಿತ್ರಕ್ಕೂ ಸಂಬಂಧವೇ ಇಲ್ಲವೇನೊ ಎಂಬಂತೆ ಫಿಲಂ ಡಿವಿಜನ್ ವರ್ತಿಸುತ್ತಿದೆ ಎಂದು ಕವಿತಾ ಹೇಳಿದರು.
ಎಲ್ಲರಿಗೂ ಅಲೆಮಾರಿ ಎನ್ನುವ ಚಿತ್ರ ತಯಾರಾಗಿದೆ ಎನ್ನುವುದು ಮಾತ್ರ ಗೊತ್ತು . ಚಿತ್ರ ಯಾಕೆ ತೆರೆ ಕಾಣಲಿಲ್ಲ ಎನ್ನುವುದು ಯಾರಿಗೂ ಗೊತ್ತಿಲ್ಲ . ನಾನಂತೂ ಅಲೆಮಾರಿ ಚಿತ್ರ ಮಾಡಿದ್ದನ್ನೇ ಮರೆಯಲು ಪ್ರಯತ್ನಿಸುತ್ತಿದ್ದೇನೆ. ಬಿಜಾಪುರದ ಲಂಬಾಣಿ ತಾಂಡಗಳಲ್ಲಿ , 40 ಡಿಗ್ರಿ ಸೆಲ್ಷೆಯಸ್ ಸುಡು ಬಿಸಿಲಲ್ಲಿ ಚಿತ್ರೀಕರಣ ನಡೆಸಿದ ಯಾತನೆ ನಮಗಷ್ಟೇ ಗೊತ್ತು . ಫಿಲಂ ಡಿವಿಜನ್ ಮಂಜೂರು ಮಾಡಿದ 20 ಲಕ್ಷ ರುಪಾಯಿ ಬಜೆಟ್ಟಿನಲ್ಲೇ ಪ್ರಕಾಶ್ ರೈ, ಅನು ಪ್ರಭಾಕರ್, ಭಾವನಾ ಮುಂತಾದ ಕಲಾವಿದರನ್ನಿಟ್ಟುಕೊಂಡು ಚಿತ್ರ ಮಾಡಿದೆ. ಈಗ ಅದರ ಕಹಿ ಅನುಭವಿಸುತ್ತಿದ್ದೇನೆ ಎಂದು ಕವಿತಾ ಹತಾಶೆಯಿಂದ ಹೇಳಿದರು. ಅವರು ಮಾತನಾಡುತ್ತಿದ್ದುದು 'ಬಿಂಬ" ಚಿತ್ರದ ಪ್ರಕಟಣೆಯ ಸಂದರ್ಭದಲ್ಲಿ.
ಸರ್ಕಾರಿ ಸಂಸ್ಥೆಗಳಿಗೆ ಚಿತ್ರ ಮಾಡಿಕೊಡುವ ಬಗ್ಗೆ ನನಗೆ ರೋಸಿ ಹೋಗಿದೆ. ಲಗಾನ್- ದೇವದಾಸ್ ಅಂಥ ಚಿತ್ರಗ ಬಗ್ಗೆ ಮಾತ್ರ ನಮ್ಮ ವಾರ್ತಾ ಮತ್ತು ಪ್ರಸಾರ ಇಲಾಖೆ ಮಾತನಾಡುತ್ತದೆ. ಇನ್ನು ಮುಂದೆ ಚಿತ್ರ ನಿರ್ಮಾಣವನ್ನು ಪ್ರತಿ ಹಂತದಲ್ಲೂ ಪೋಷಿಸುವ ಹಾಗೂ ಚಿತ್ರ ತೆರೆ ಕಾಣಲು ಸಹಕರಿಸುವ ನಿರ್ಮಾಪಕರಿಗೆ ಮಾತ್ರ ಚಿತ್ರ ನಿರ್ದೇಶಿಸಲು ನಿರ್ಧರಿಸಿದ್ದೇನೆ. ಆ ಕಾರಣದಿಂದಾಗಿಯೇ 'ಬಿಂಬ" ಒಪ್ಪಿಕೊಂಡಿದ್ದೇನೆ ಎಂದರು.'ಬಿಂಬ" ಮಕ್ಕಳ ಕಥೆ ಹೊಂದಿದೆಯಾದರೂ ಅದು ಮಕ್ಕಳ ಚಿತ್ರವಲ್ಲ . ಅದೊಂದು ಉತ್ತಮ ಚಿತ್ರ ಮಾತ್ರ ಎಂದು ಕವಿತಾ ಸ್ಪಷ್ಟಪಡಿಸಿದರು.ವಾರ್ತಾ ಸಂಚಯ


Click it and Unblock the Notifications