ಸಿನಿಮಾ ಪ್ರದರ್ಶನಕ್ಕೆ ಮತ್ತೆ ತೆರೆ ; ಸಕಲ ಭಾಷಾ ಚಿತ್ರಗಳಿಗೆ ಸೆರೆ !
ರಾಜ್ಯದಲ್ಲಿ ಪ್ರದರ್ಶನವಾಗುತ್ತಿರುವ ಎಲ್ಲಾ ಭಾಷೆಗಳ ಸಿನಿಮಾ ಪ್ರದರ್ಶನವನ್ನು ಶುಕ್ರವಾರದಿಂದ (ಆ.8) ನಿಲ್ಲಿಸಲು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ತೀರ್ಮಾನಿಸಿದೆ.
ಹೊಸ ಕನ್ನಡ ಚಿತ್ರಗಳನ್ನು ಪ್ರದರ್ಶಿಸಲು ನಿರಾಕರಿಸಿರುವ ಚಿತ್ರಮಂದಿರಗಳ ಆಡಳಿತ ವರ್ಗ- ಇತರ ಭಾಷೆಗಳ ಚಿತ್ರಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಹೊಸ ತಮಿಳು ಹಾಗೂ ಹಿಂದಿ ಚಿತ್ರಗಳನ್ನು ಬಿಡುಗಡೆ ಮಾಡಲು ಹುನ್ನಾರ ನಡೆಯುತ್ತಿದೆ. ಈ ಕನ್ನಡ ವಿರೋಧಿ ನೀತಿಯನ್ನು ಪ್ರತಿಭಟಿಸಿ ಶುಕ್ರವಾರದಿಂದ ಎಲ್ಲ ಚಿತ್ರಗಳ ಪ್ರದರ್ಶನವನ್ನು ನಿಲ್ಲಿಸಲಾಗುವುದು ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತಕುಮಾರ್ ತಿಳಿಸಿದ್ದಾರೆ.
ಚಿತ್ರ ಪ್ರದರ್ಶನ ರದ್ದು ಬೆಂಗಳೂರಿಗೆ ಮಾತ್ರ ಸೀಮಿತವಾಗಿರದೆ, ಇಡೀ ರಾಜ್ಯಕ್ಕೆ ಅನ್ವಯಿಸುತ್ತದೆ. ತಂತಮ್ಮ ಚಿತ್ರಗಳ ಪ್ರಿಂಟ್ಗಳನ್ನು ವಾಪಸ್ಸು ಪಡೆಯುವಂತೆ ನಿರ್ಮಾಪಕರು ಹಾಗೂ ವಿತರಕರಿಗೆ ನಿರ್ಮಾಪಕರ ಸಂಘ ಸೂಚಿಸಿದೆ ಎಂದು ಬಸಂತ್ ಹೇಳಿದ್ದಾರೆ.
ಸಂಘರ್ಷ ತಾರಕಕ್ಕೆ : ಸೇವಾಶುಲ್ಕ ರದ್ದುಪಡಿಸಿರುವ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಿ ಯಾವುದೇ ಭಾಷೆಯ ಹೊಸ ಚಿತ್ರಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಪ್ರದರ್ಶಕರ ಸಂಘ ಈ ಮುನ್ನ ತೀರ್ಮಾನ ಕೈಗೊಂಡಿತ್ತು . ಆದರೆ, ಆ.8 ರ ಶುಕ್ರವಾರ- ವರಮಹಾಲಕ್ಷ್ಮಿ ಹಬ್ಬದಂದು ತಮಿಳು ಹಾಗೂ ಹಿಂದಿ ಚಿತ್ರಗಳ ಬಿಡುಗಡೆಗೆ ಪ್ರದರ್ಶಕರು ಸಿದ್ಧತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಸಭೆ ಸೇರಿದ ನಿರ್ಮಾಪಕರ ಸಂಘ, ಶುಕ್ರವಾರದಿಂದ ಚಲನಚಿತ್ರ ಪ್ರದರ್ಶನವನ್ನು ರದ್ದುಪಡಿಸಲು ತೀರ್ಮಾನಿಸಿದೆ.
ಪ್ರದರ್ಶಕರು ಹಾಗೂ ನಿರ್ಮಾಪಕರ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು , ಈ ಸಂದರ್ಭದಲ್ಲಿ ಸರ್ಕಾರ ಯಾರ ಪರ ವಹಿಸುತ್ತದೆನ್ನುವುದು ಕುತೂಹಲಕರ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications