Don't Miss!
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ
ವಾಣಿ ರಾಮದಾಸ್, ಸಿಂಗಪುರ
1913, ಮೇ 13 ಭಾರತೀಯ ಚಿತ್ರರಂಗವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ಅಂದು ಮುಂಬೈನ ಜನಸಾಗರದ ದೃಷ್ಟಿ ಒಂದೆಡೆ ಕೇಂದ್ರೀಕೃತವಾಗಿತ್ತು. ಹಣವಿದ್ದವರು ಮುಂಬೈನ ಕಾರೋನೇಷನ್ ಚಿತ್ರಮಂದಿರದಲ್ಲಿದ್ದರು. ಹಣವಿಲ್ಲದವರು ಥಿಯೇಟರ್ ಹೊರಗೆ ಕುತೂಹಲದಿಂದ ಜಮಾಯಿಸಿದ್ದರು.
ಥಿಯೇಟರ್ ಒಳಗೆ ಕುಳಿತ ಜನರ ಕಣ್ಣು ರಂಗದತ್ತ. ಕುತೂಹಲ, ತವಕ, ವಿಸ್ಮಯಲೋಕ ಕಾಣುವ ತವಕ ಅಲ್ಲಿತ್ತು. ಮೊದಲಿಗೆ ಪಾಶ್ಚಾತ್ಯ ತರುಣಿಯರಿಂದ ನೃತ್ಯ ಮುಗಿದಂತೆ ತೆರೆಯ ಮೇಲೆ ಸಾಕ್ಷಾತ್ ಕಂಡರು ಹರಿಶಂದ್ರ, ಚಂದ್ರಮತಿ! ಅಲ್ಲಿ ಮಾತು ಮೌನವಾಗಿತ್ತು, ನಟನೆ ಮಾತನಾಡಿತ್ತು. ತೆರೆಯ ಮೇಲೆ ಹರಿಶ್ಚಂದ್ರ-ಚಂದ್ರಮತಿಯರ ಕಷ್ಟಗಳನ್ನು ಕಂಡು ಪ್ರೇಕ್ಷಕರು ಅತ್ತರು, ಏನು ಕಷ್ಟ ಪಡುತ್ತೀಯೋ ಎಂದು ಹಲುಬಿದರು, ಕಾಲವ ಮರೆತು ಹರಿಶ್ಚಂದ್ರನ ಕಷ್ಟ-ಸುಖದಲ್ಲಿ ಒಂದಾದರು!
ಚಲನ ಚಿತ್ರರಂಗದ ಮಾಯಾಲೋಕವನ್ನು ಈ ಹರಿಶ್ಚಂದ್ರ ಚಿತ್ರದ ಮುಖಾಂತರ, ಭಾರತೀಯ ಜನತೆಗೆ ಇತ್ತವರು ದಾದಾಸಾಹೇಬ್ ಫಾಲ್ಕೆ. ಚಲನಚಿತ್ರರಂಗದ ಆವಿಷ್ಕಾರಕ್ಕಾಗಿ ತಮ್ಮ ಜೀವನವನ್ನೇ ತೇಯ್ದ ಮಹಾತ್ಯಾಗಿ ದಾದಾ ಸಾಹೇಬ್ ಫಾಲ್ಕೆ.
ಇಪ್ಪತ್ತನೆ ಶತಮಾನದ ಭಾರತೀಯ ಚಿತ್ರರಂಗದ ಪಿತಾಮಹರಾದ ದಾದಾ ಸಾಹೇಬ್ ಫಾಲ್ಕೆ ಅವರ ಹೆಸರಲ್ಲಿರುವ ಪ್ರಶಸ್ತಿ ಪಡೆಯುವುದು, ಚಲನಚಿತ್ರ ರಂಗದ ಉತ್ತಮ ಕಲಾವಿದನೊಬ್ಬನ ಜೀವನದ ಗುರಿ. ಆ ಪ್ರಶಸ್ತಿ ಪಡೆದ ಕಲಾವಿದ ಎಲ್ಲಾ ಘಟ್ಟಗಳನ್ನೂ ದಾಟಿ ಎವರೆಸ್ಟ್ ಶಿಖರದ ತುಟ್ಟ ತುದಿ ಮುಟ್ಟಿದಂತೆ. ಇಂತಹ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಮೊದಲಿಗರು ದೇವಿಕಾರಾಣಿ ರೋರಿಚ್(1969). 1995ರಲ್ಲಿ ನಮ್ಮ ವರನಟ ಡಾ.ರಾಜ್ಕುಮಾರ್ ಫಾಲ್ಕೆ ಪ್ರಶಸ್ತಿ ಪಡೆದರು.
***
ರೀಲ್ ಲೋಕವನ್ನು ಭಾರತದಲ್ಲಿ ಸೃಷ್ಟಿಸಿದ ವ್ಯಕ್ತಿ, . ನಿಜ ನಾಮಧೇಯ ಧುಂಡಿರಾಜ್ ಗೋವಿಂದ ಫಾಲ್ಕೆ.
ಧುಂಡಿರಾಜ್ ಜನಿಸಿದ್ದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಗೋದಾವರಿ ನದಿಯ ಉಗಮಸ್ಥಾನವಾದ ತ್ರ್ಯಂಬಕೇಶ್ವರದ ವೈದಿಕ ಮನೆತನದಲ್ಲಿ. ಜನನ 1870, ಏಪ್ರಿಲ್ 30. ತಂದೆ ದಾಜಿಶಾಸ್ತ್ರಿ ಫಾಲ್ಕೆ ಸಂಸ್ಕೃತ ಶಿಕ್ಷಕರಾಗಿದ್ದರು.
ಚಿಕ್ಕಂದಿನಿಂದಲೂ ಧುಂಡಿರಾಜ ತಂದೆಯವರು ಹೇಳಿಕೊಡುತ್ತಿದ್ದ ಪಾಠಗಳಲ್ಲಿ ಕಾವ್ಯ, ಪುರಾಣ, ಕಥೆ, ಅತಿಮಾನುಷ ವಿಚಾರಗಳಲ್ಲಿ ಬಹಳ ಆಸಕ್ತಿ ತೋರುತ್ತಿದ್ದರು. ತ್ರ್ಯಂಬಕೇಶ್ವರ ದೇಗುಲದಲ್ಲಿ ನಡೆಯುತ್ತಿದ್ದ ನೃತ್ಯ, ನಾಟಕಗಳು, ರಂಗಸಜ್ಜಿಕೆಗಳು, ವೇಷಭೂಷಣಗಳು ಬಾಲಕನನ್ನು ದಂಗು ಬಡಿಸಿತ್ತು. ನಟನೆ, ಹಾವ-ಭಾವಗಳ ಕಂಡಾಗ ಅವರ ಮೈ ರೋಮಾಂಚನಗೊಳ್ಳುತ್ತಿತ್ತು.
ತಂದೆಯವರು ಹೇಳಿಕೊಡುತ್ತಿದ್ದ ವೈದಿಕ, ಸಂಸ್ಕೃತ ಪಾಠಗಳಲ್ಲಿ ಮುಂದಿದ್ದರೂ ನಾಟಕ, ನೃತ್ಯ, ಚಿತ್ರಕಲೆ ಇವುಗಳಲ್ಲಿ ಧುಂಡಿರಾಜನ ಆಸಕ್ತಿ ಗಮನಿಸಿದ ಅವರ ತಂದೆಯವರು ಸ್ವಲ್ಪ ಚಿಂತಿತರಾದರು. ಲಲಿತ ಕಲೆಯ ಈ ಆಸಕ್ತಿಗೆ ತ್ಯ್ರಂಬಕೇಶ್ವರ ತಕ್ಕುದಾದ ಜಾಗವಿಲ್ಲವೆಂದು ಅರಿತರೂ ದೂರವೆನಿಸಿದ್ದ ಮುಂಬಯಿಗೆ ಒಬ್ಬನೇ ಮಗನನ್ನು ಕಳಿಸಲು ಮನಸ್ಸು ಬರಲಿಲ್ಲ.
ದೇವರ ಆಟ ಬಲ್ಲವರಾರು? ಹದಿನೈದು ವರುಷಗಳು ಕಳೆಯಿತು. 1885ರಲ್ಲಿ ದಾಜಿಶಾಸ್ತ್ರಿ ಅವರಿಗೆ, ಮುಂಬಯಿಯ ವಿಲ್ಸನ್ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ನೌಕರಿ ದೊರಕಿತು. ಅವರ ಕುಟುಂಬ ಮುಂಬಯಿಗೆ ವಲಸೆ ಬಂದಿತು. ಧುಂಡಿರಾಜ್ ಅವರಿಗೆ ಮುಂಬಯಿಯ ಪ್ರಸಿದ್ಧ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್ನಲ್ಲಿ ಚಿತ್ರಕಲಾ ತರಗತಿಗೆ ಪ್ರವೇಶ ದೊರಕಿತು. ಇದು ಅವರ ಚಿತ್ರಾಸಕ್ತಿಗೆ ಭದ್ರ ಬುನಾದಿ ಹಾಕಿತು. ಅಲ್ಲಿನ ಕಾಲಾವಧಿ ಮುಗಿದ ನಂತರ ಮುಂದಿನ ಕಲಿಕೆಗಾಗಿ ಬರೋಡದ ಕಲಾಭವನ ಸೇರಿದರು. ಅಲ್ಲಿ ಧುಂಡಿರಾಜರ ಪ್ರಾವಿಣ್ಯ, ಪಾಂಡಿತ್ಯವನ್ನು ಗುರುತಿಸಿದ ಪ್ರೊ.ಗುಜ್ಜರ್ ಎಂಬುವರು ಈ ಯುವಕನ ಪಾಂಡಿತ್ಯಕ್ಕೆ ಚಿತ್ರಕಲೆ ಸಾಲದೆಂದು, ಛಾಯಾಚಿತ್ರ ವಿಭಾಗದ ಮೇಲ್ವಿಚಾರಕನಾಗಿ ನೇಮಿಸಿದರು. ಇದು ಧುಂಡಿರಾಜರಿಗೆ ದೊರೆತ ಸುವರ್ಣಾವಕಾಶ.