ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ

ಈ ವೇಳೆಗೆ ಸ್ವಾತಂತ್ರ್ಯ ಸಂಗ್ರಾಮದ ಸ್ವದೇಶಿ ಚಳವಳಿ ಬಿರುಗಾಳಿ ಹಬ್ಬಿತ್ತು. ಪ್ರಾಚ್ಯವಸ್ತು ಇಲಾಖೆ ಬ್ರಿಟಿಷ್ ಮೂಲದ ವೃತ್ತಿಗೆ ರಾಜೀನಾಮೆ ಕೊಟ್ಟು ಗೆಳೆಯರೊಡಗೂಡಿ ಕೆತ್ತನೆ ಹಾಗೂ ಮುದ್ರಣದ ವ್ಯಾಪಾರವನ್ನು ಪ್ರಾರಂಭಿಸಿದರು. ಇಡೀ ಮುಂಬಯಿಯಲ್ಲಿ ಕಲಾರಂಗದಲ್ಲಿಯೇ ಮೇಧಾವಿಯೆಂದು ಹೆಸರು ಪಡೆದರು. ಇದೇ ಸಮಯದಲ್ಲಿ ಹೊಸಯಂತ್ರವೊಂದನ್ನು ತರಲು, ಹೊಸ ಯಂತ್ರಗಳ ಮಾಹಿತಿ ಪಡೆಯಲು 1909ರಲ್ಲಿ ಜರ್ಮನಿಗೆ ತೆರಳಿದರು.
1911ರಲ್ಲಿ ಉದ್ಯಮಿಗಳೊಡನೆ ಮನಸ್ತಾಪವಾಗಿ ಬರಿಗೈಯಲ್ಲಿ ಹೊರಬಂದರು.
ಅಂದಿನ ಕಷ್ಟದ ದಿನಗಳಲ್ಲಿ ಜೊತೆಗಿದ್ದವರು ಪತ್ನಿ ಸರಸ್ವತೀಬಾಯಿ ಮಾತ್ರ. ತಮ್ಮ ಪತಿಯ ಜ್ಞಾನ, ವಿದ್ಯೆ, ಆಸೆ, ಕನಸು ಎಲ್ಲವನ್ನೂ ತಿಳಿದಿದ್ದ ಆಕೆ ಧುಂಡಿರಾಜರಿಗೆ ಧೈರ್ಯ ತುಂಬಿ, ಸಂಸಾರವನ್ನು ಹೇಗೋ ನಿಬಾಯಿಸಿಕೊಂಡು ಹೋಗುತ್ತಿದ್ದಳು.
ಒಂದು ದಿನ ಬೇಸರ ಕಳೆಯಲೆಂದು ಲೈಫ್ ಆಫ್ ಕ್ರೈಸ್ಟ್ ಎಂಬ ಇಂಗ್ಲೀಷ್ ಚಿತ್ರ ವೀಕ್ಷಿಸಿದ ಧುಂಡಿರಾಜ, ಚಿತ್ರಮಂದಿರದ ಬಳಿ ಎಸೆದಿದ್ದ ರೀಲಿನ ಸಣ್ಣ ಸಣ್ಣ ತುಣುಕುಗಳನ್ನು ಸಂಗ್ರಹಿಸಿ ಅದನ್ನು ಮಸೂರದ ಸಹಾಯದಿಂದ ನೋಡಿದರು. ಕಂಪನಿಯೊಂದರಿಂದ ಆಟಿಕೆಯ ಸಿನಿಮಾ ಪ್ರದರ್ಶಿಸುವ ಯಂತ್ರವೊಂದನ್ನು, ಸಣ್ಣ ಪ್ರಮಾಣದ ರೀಲನ್ನು ತಂದು ಮನೆ ಗೋಡೆ ಮೇಲೆ ಚಿತ್ರ ಪ್ರದರ್ಶಿಸಿದರು. ಇದು ಅವರ ಮೊದಲ ಚಿತ್ರವಾಗಿತ್ತು. ಕುಟುಂಬದ ಸದಸ್ಯರು ಮೊದಲ ಪ್ರೇಕ್ಷಕರಾಗಿದ್ದರು.
ವಿಧಿಯ ಆಟ ನೋಡಿ. ನಲವತ್ತು ವಸಂತಗಳನ್ನು ಕಳೆದಿದ್ದ ಧುಂಡಿರಾಜರಿಗೆ, ಇದ್ದಕ್ಕಿದ್ದಂತೆ ಕಣ್ಣು ಸರಿಯಾಗಿ ಕಾಣದಾಯಿತು. ಅವರ ಆಸೆಗಳು ನುಚ್ಚುನೂರಾಗಿತ್ತು. ಅವರ ಪಾಲಿಗೆ ಪ್ರಪಂಚವೇ ತಲೆಕೆಳಗಾಗಿತ್ತು. ವೈದ್ಯ ಮಿತ್ರ ಡಾ.ಪ್ರಭಾಕರ್ ಅವರ ನಿರಂತರ ಚಿಕಿತ್ಸೆ ಹಾಗೂ ಆರೈಕೆಯಿಂದ ಕಣ್ಣುಗಳು ಮತ್ತೆ ಕಾಣುವಂತಾಯಿತು. ಧುಂಡಿರಾಜರ ಆಸೆ ಮತ್ತೆ ತಲೆ ಎತ್ತಿತು. ಧುಂಡಿರಾಜರ ಅಪ್ಪಟ ಭಾರತೀಯ ಚಿತ್ರ ಮಾಡಬೇಕೆಂಬ ಹಂಬಲ ಅತಿಯಾಯ್ತು. ತಮ್ಮಲ್ಲಿದ್ದ ಸಮಸ್ತವನ್ನೂ ಅಡವಿಟ್ಟು, ಚಿತ್ರ ನಿರ್ಮಾಣಕ್ಕೆ ಬೇಕಾಗುವ ಯಂತ್ರೋಪಕರಣಗಳನ್ನು ಖರೀದಿಸಲು ಲಂಡನ್ನಿಗೆ ತೆರಳಿದರು.
42ವರುಷ ವಯಸ್ಸಿನ ಭಾರತೀಯನಿಗೆ ಸಹಾಯ ಮಾಡಲು ಯಾರೂ ಮುಂದೆ ಬರಲಿಲ್ಲ. ಅಲ್ಲಿನ ಬಯಾಸ್ಕೋಪ್ ಎಂಬ ಚಲನಚಿತ್ರ ವಾರಪತ್ರಿಕೆಯ ಸಂಪಾದಕರಾಗಿದ್ದ ಕಾರ್ಬೋನ್ ಮೊದಲು ಹಿಂಜರಿದರೂ, ಧುಂಡಿರಾಜರ ಅಚಲ ನಿರ್ಧಾರ ಕಂಡು ಚಿತ್ರ ನಿರ್ಮಾಪಕ ಸಿಸಿಲ್ ಅವರನ್ನು ಧುಂಡಿರಾಜರಿಗೆ ಪರಿಚಯಿಸಿದರು. ಇವರ ಗರಡಿಯಲ್ಲಿ ಚಲನಚಿತ್ರ ನಿರ್ಮಾಣದ ಎಲ್ಲಾ ಭಾಗಗಳನ್ನು ಅಧ್ಯಯನ ಮಾಡಿ, ಚಿತ್ರ ನಿರ್ಮಾಣದ ಅಚಲ ನಿರ್ಧಾರದೊಂದಿಗೆ ಮತ್ತೆ ತವರಿಗೆ ಮರಳಿದರು ಫಾಲ್ಕೆ ಸಾಹೇಬರು.
ಮತ್ತೆ ಹಣ ಸಾಲದಾಯಿತು. ಪತ್ನಿ ಸರಸ್ವತೀಬಾಯಿ ತಮ್ಮ ಒಡವೆಗಳನ್ನು ಅಡವಿಟ್ಟರು. ರಾಮ, ಕೃಷ್ಣರ ಕಥೆ ಬೇಡವೆಂದು ಕಡೆಗೆ ರಾಜಾ ಹರಿಶ್ಚಂದ್ರನ ಕಥೆಯನ್ನು ಚಿತ್ರ ಮಾಡುವುದೆಂದು ದಾದಾ ನಿರ್ಧಾರ ಮಾಡಿದರು.
ಆ ಕಾಲದಲ್ಲಿ ಚಿತ್ರನಿರ್ಮಾಣದ ಕಲೆ ಯಾರಿಗೂ ತಿಳಿದಿರಲಿಲ್ಲ. ಇದರಿಂದಾಗಿ ರಾಜಾ ಹರಿಶ್ಚಂದ್ರ ಚಿತ್ರದ ಲೇಖಕ, ನಿರ್ಮಾಪಕ, ನಿರ್ದೇಶಕ, ನಟ, ಕಲಾವಿದ, ಛಾಯಾಗ್ರಹಕ ಎಲ್ಲವನ್ನೂ ಮಾಡಿದ ಏಕೈಕ ವ್ಯಕ್ತಿ ಧುಂಡಿರಾಜ್. ಅವರ ಮನೆಯೇ ಫಾಲ್ಕೆ ಫಿಲ್ಮ್ ಸಂಸ್ಥೆ. ಇಡೀ ಚಿತ್ರರಂಗದ ಊಟ, ಉಪಚಾರ ಸರಸ್ವತೀಬಾಯಿ ಅವರದ್ದು. ಕಾಳಗದ ದೃಶ್ಯ ಚಿತ್ರೀಕರಣಗೊಂಡಿದ್ದು ಧುಂಡಿರಾಜರ ಮನೆಯ ಅಡುಗೆಮನೆಯಲ್ಲಿ.
ಕಟ್ಟಕಡೆಗೆ ಏಪ್ರಿಲ್ 21, 1913ರಂದು ಮುಂಬಯಿಯ ಒಲಂಪಿಯಾ ಚಿತ್ರಮಂದಿರದಲ್ಲಿ ಮುಂಬಯಿಯ ಶ್ರಿಮಂತರು, ಪತ್ರಿಕಾ ರಂಗದವರು, ಹಲವು ಮಹನೀಯರ ಮುಂದೆ ಪೂರ್ವಭಾವಿ ಪ್ರದರ್ಶನ ಏರ್ಪಟ್ಟಿತ್ತು. ಈ ಚಿತ್ರವನ್ನು ವೀಕ್ಷಿಸಿದ ಆ ಗುಂಪು ದಂಗಾದರು. ಕಡೆಯೂ ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ, ಕನಸು ನನಸಾಯಿತೆಂದು ಧುಂಡಿರಾಜರು ಸಂತಸಪಟ್ಟರು. ಆದರೆ ಪ್ರೇಕ್ಷಕರ ಮುಂದೆ, ಚಿತ್ರ ಗೆಲ್ಲಬೇಕಾಗಿತ್ತು.


Click it and Unblock the Notifications











