ಅವರ ನಿರ್ದೇಶನದಲ್ಲಿ 'ಮಯೂರ' ಚಿತ್ರ ಬರಬೇಕಿತ್ತು
ಹೈದರಾಬಾದ್, ಜ.8: ಪುನೀತ್ ರಾಜ್ಕುಮಾರ್ ಅಭಿನಯದ 'ಮಯೂರ' ಚಿತ್ರದ ನಿರ್ದೇಶಕ ಶೋಭನ್(38) ಸೋಮವಾರ ರಾತ್ರಿ ಸುಮಾರು 8 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಹು ನಿರೀಕ್ಷೆಯ ಮಯೂರ ಚಿತ್ರವನ್ನು ಅವರು ನಿರ್ದೇಶಿಸಬೇಕಿತ್ತು.
ಚಿತ್ರಕತೆಯೊಂದಕ್ಕೆ ಸಂಬಂಧಿಸಿದಂತೆ ನಟಿ ಭೂಮಿಕಾ ಅವರೊಂದಿಗೆ ಚರ್ಚಿಸುತ್ತಿದ್ದಾಗ ಹಠಾತ್ತಾಗಿ ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ಭೂಮಿಕ ಮತ್ತವರ ಪತಿ ಭರತ್ ಠಾಕೂರ್ ಆ ಕೂಡಲೇ ಅವರನ್ನು ಮಾಧಾಪುರ್ನಲ್ಲಿನ 'ಇಮೇಜ್' ಆಸ್ಪತ್ರೆಗೆ ಸಾಗಿಸಿದರು. ಆದರೆ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಮೂಲತಃ ಆಂಧ್ರಪ್ರದೇಶದವರಾದ ಶೋಭನ್ ವರ್ಷಂ, ಬಾಬಿಯಂತಹ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದರು. ಯಶಸ್ವಿ ನಿರ್ದೇಶಕ ಎಂಬ ಹೆಸರೂ ಅವರ ಅನ್ವರ್ಥವಾಗಿತ್ತು. ಆರ್.ಎಸ್. ಪ್ರೊಡಕ್ಷನ್ ಲಾಂಛನದಲ್ಲಿ ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿರುವ, ಪುನೀತ್ ಅಭಿನಯದ 'ಮಯೂರ' ಚಿತ್ರವನ್ನು ನಿರ್ದೇಶಿಸಬೇಕಿತ್ತು. ಮಯೂರ ಚಿತ್ರದ ಮುಹೂರ್ತವು ಡಿ.14ರಂದು ಇಸ್ಕಾನ್ ದೇವಾಲಯದಲ್ಲಿ ಬಹಳ ಅದ್ದೂರಿಯಾಗಿ ನಡೆದಿತ್ತು. ಆ ಸಂದರ್ಭದಲ್ಲಿ ಶೋಭನ್ ಸಹ ಹಾಜರಿದ್ದರು. ಚಿತ್ರೀಕರಣ ಜ.16ಕ್ಕೆ ಮುಂದೂಡಲ್ಪಟ್ಟ ಕಾರಣ ಅವರು ತಮ್ಮ ಸ್ವಂತ ಊರಿಗೆ ವಾಪಸ್ಸಾಗಿದ್ದರು.
ಬಾಲಿವುಡ್ ನಿರ್ದೇಶಕ ರಾಮ್ಗೋಪಾಲ್ ವರ್ಮಾರ ಗರಡಿಯಲ್ಲಿ ಚಿತ್ರರಂಗದ ಪಟ್ಟುಗಳನ್ನು ಕಲಿತವರು ಶೋಭನ್. ವರ್ಮಾ ನಿರ್ದೇಶನದ ತೆಲುಗಿನ 'ಕ್ಷಣ ಕ್ಷಣಂ' ಚಿತ್ರದಲ್ಲಿ ನಟಿಸಿದ್ದರೂ ಸಹಾ. ಇತ್ತೀಚಿನ ಕೆಲವು ತೆಲುಗು ಚಿತ್ರಗಳಲ್ಲಿ ಹಾಸ್ಯ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಶೋಭನ್ ಅವರ ಹಠಾತ್ ನಿಧನದಿಂದ ಆಘಾತಗೊಂಡಿರುವ ಭೂಮಿಕಾ ಅವರ ಸಾವನ್ನು ನಾವು ನಿರೀಕ್ಷಿಸಿರಲಿಲ್ಲ. ನನ್ನ ಪತಿ ಅವರನ್ನು ಉಳಿಸಿಕೊಳ್ಳಲು ಬಹಳಷ್ಟು ಶ್ರಮಿಸಿದರು ಆದರೆ ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಶೋಭನ್ ಅವರ ಸಾವಿಗೆ ಪುನೀತ್ ಸಂತಾಪ ಸೂಚಿಸಿದ್ದು, ಮಂಗಳವಾರ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವರು ಹೈದರಾಬಾದ್ಗೆ ತೆರಳಿದ್ದಾರೆ.
(ಏಜನ್ಸೀಸ್)


Click it and Unblock the Notifications