ಶಂಕರ್ನಾಗ್ ಜಯಂತಿಗೆ ‘ರಂಗ ಶಂಕರ’ ಇಲ್ಲ
ನವೆಂಬರ್ 9ನೇ ತಾರೀಕು ಶಂಕರ್ನಾಗ್ 48ನೇ ಹುಟ್ಟುಹಬ್ಬ. ಈ ದಿನ ನಾಡಿಗೆ 'ರಂಗ ಶಂಕರ' ಅರ್ಪಿಸಬೇಕು ಎಂಬುದು ಅರುಂಧತಿ ಕನಸಾಗಿತ್ತು. ಮುಖ್ಯಮಂತ್ರಿ ಎಸ್ಸೆಂ ಕೃಷ್ಣ, ಬಾಲಿವುಡ್ ನಟಿ ಶಬಾನ ಆಜ್ಮಿಯಂಥವರು ದೇಣಿಗೆ ಎತ್ತಿದರೂ ನಿರೀಕ್ಷಿತ ಹಣ ಸಂಗ್ರಹ ಸಾಧ್ಯವಾಗಿಲ್ಲ. ಸರ್ಕಾರ ಕೂಡ ಇದರ ನಿರ್ಮಾಣಕ್ಕೆ ಹಣದ ನೆರವನ್ನು ಕೊಟ್ಟಿದೆ.
ನೂರು ಲೈಟುಗಳು, ಬೃಹದಾಕಾರದ ಸೆಟ್ಗಳನ್ನೂ ರಂಗದಿಂದ ಮೊದಲನೇ ಮಹಡಿಗೆ ಅನಾಮತ್ತು ಎತ್ತಬಲ್ಲ ವ್ಯವಸ್ಥೆ ಹೈಡ್ರಾಲಿಕ್ ಟ್ರ್ಯಾಪ್ ಬಾಗಿಲು- ಹೀಗೆ ಬೆಂಗಳೂರು ಹಿಂದೆಂದೂ ಕಂಡಿರದಂಥ ರಂಗ ಸಜ್ಜಿಕೆಗಳನ್ನು 'ರಂಗ ಶಂಕರ' ಒಳಗೊಳ್ಳಲಿದೆ. ಅಷ್ಟೇ ಅಲ್ಲ ; ಮಕ್ಕಳಿಗಾಗಿಯೇ ವಿಶೇಷ ರಂಗ ಸ್ಥಲ, ಒಂದು ಕಲಾ ಗ್ಯಾಲರಿ, ಉಣ್ಣುವ ಮನೆ, ರಂಗ ಗ್ರಂಥಾಲಯ ಮತ್ತು ಆಡಿದ ನಾಟಕಗಳನ್ನು ಮುದ್ರಿಸಿಕೊಳ್ಳುವ ಕೋಣೆ... ರಂಗ ಶಂಕರದಲ್ಲಿ ಇನ್ನೂ ಏನೇನೋ ಸವಲತ್ತುಗಳುಂಟು. ಆದರೆ, ಸದ್ಯಕ್ಕೆ ಕಾಮಗಾರಿ ಅಪೂರ್ಣ.
ಶಬಾನ ಆಜ್ಮಿ, ನಂದಿತಾ ದಾಸ್, ಶರ್ಮಿಳಾ ಟಾಗೋರ್, ಜೋಹ್ರಾ ಸೆಹ್ಗಲ್, ಮಂದಾಕಿನಿ ಗೋಸ್ವಾಮಿ ಮೊದಲಾದವರ ತಂಡ ರಾಯ್ಸ್ಟೆಲ್ ಏಬೆಲ್ ನಿರ್ದೇಶಿಸಿರುವ Betrayal of Anne Frank ನಾಟಕವನ್ನು ಮುಂಬಯಿ ಮತ್ತು ಬೆಂಗಳೂರಿನಲ್ಲಿ ಪ್ರದರ್ಶಿಸಲಿದ್ದಾರೆ. ಈ ಪ್ರದರ್ಶನಗಳ ಉದ್ದೇಶ 'ರಂಗ ಶಂಕರ'ಕ್ಕೆ ದೇಣಿಗೆ ಎತ್ತುವುದು. ಇವರೆಲ್ಲರಷ್ಟೇ ಅಲ್ಲದೆ ಬಾಲಿವುಡ್ ನಟ/ನಿರ್ಮಾಪಕ ಅಮೀರ್ ಖಾನ್ ಕೂಡ ದೇಣಿಗೆ ಸಂಗ್ರಹಿಸಲು ಒಪ್ಪಿದ್ದಾರೆ.
ಇವರೆಲ್ಲರ ಬೆಂಬಲ ಪಡೆದೂ ಅರುಂಧತಿ ತಲೆ ಮೇಲೆ ಕೈಹೊತ್ತು ಕೂರಲು ಕಾರಣ ಸ್ಥಳೀಯ ರಂಗ ಕರ್ಮಿಗಳ ಔದಾಸೀನ್ಯ. ಅರುಂಧತಿ ಕಾಣುತ್ತಿರುವ ದೊಡ್ಡ ಕನಸನ್ನು ಸಾಕಾರ ಮಾಡುವಲ್ಲಿ ಕೈಜೋಡಿಸುತ್ತಿರುವ ಮಂದಿ ಕಡಿಮೆ. ತಗಾದೆ ತೆಗೆಯುತ್ತಿರುವವರೇ ಹೆಚ್ಚು.
ನಮೂನೆಗೆ ನೋಡಿ-
ಸಿ.ಆರ್.ಸಿಂಹ ಹೇಳುತ್ತಾರೆ- ಸ್ಥಳೀಯ ರಂಗ ಕರ್ಮಿಗಳು ಚಿಕ್ಕ- ಚೊಕ್ಕ ಥಿಯೇಟರ್ಗಳನ್ನೇ ನೆಚ್ಚಿಕೊಳ್ಳುತ್ತಾರೆ. ಅರುಂಧತಿಯವರ 'ರಂಗ ಶಂಕರ'ದಂಥಾ ಬೃಹತ್ತು ಹಾಗೂ ಮಹತ್ತಾದ ರಂಗ ಸಜ್ಜಿಕೆಗೆ ಬಾಡಿಗೆ ಕಟ್ಟಬಲ್ಲ ಶಕ್ತಿ ಎಷ್ಟು ಜನಕ್ಕಿದೆ ಹೇಳಿ?
ನಾಟಕ ಅಕಾಡೆಮಿಯ ಅಧ್ಯಕ್ಷ ಆರ್.ನಾಗೇಶ್ ಹೀಗನ್ನುತ್ತಾರೆ- ಇಂಥಾ ಅಪರೂಪದ ರಂಗ ಮಂದಿರದ ನಿರ್ಮಾಣ ಸ್ವಾಗತಾರ್ಹವಾದದ್ದೇ. ಆದರೆ ವೆಚ್ಚ ಅತಿಯಾಯಿತು ಅನ್ನಿಸುತ್ತದೆ. ಯೋಜನೆಯನ್ನು ರೂಪಿಸುವಾಗಲೇ ಅರುಂಧತಿಯವರು ಕಡಿಮೆ ಖರ್ಚಿನ ಹಾದಿ ತುಳಿಯಬೇಕಿತ್ತು.
'ರಂಗ ಶಂಕರ' ಯಾವಾಗ ತಲೆಯೆತ್ತೋದು?
ಅರುಂಧತಿ ಸಣ್ಣ ದನಿಯಲ್ಲೂ ಭರವಸೆಯ ಉತ್ತರ ಹೊಮ್ಮುತ್ತದೆ- 'ಸಂಕೇತ್ ಮುಚ್ಚಿಹೋದ ನಂತರ ನನ್ನ ಮಹತ್ವಾಕಾಂಕ್ಷೆಯ ಯೋಜನೆಯಿದು. ಕಷ್ಟವಾಗುತ್ತಿದೆ ನಿಜ, ಆದರೆ ಮಾಡಿ ತೀರುವ ಹಟವಂತೂ ಇನ್ನೂ ಸತ್ತಿಲ್ಲ !'


Click it and Unblock the Notifications