ಪುನೀತ್ ಚಿತ್ರಕ್ಕಾಗಿಯೇ ಬಂದಳು ಮುಂಬೈ ಬೆಡಗಿ ಶ್ರದ್ಧಾ!
ಪುನೀತ್ ಚಿತ್ರಗಳಿಗೆ ನಾಯಕಿಯರನ್ನು ಆರಿಸುವಲ್ಲಿ ಪಾರ್ವತಮ್ಮ ಎತ್ತಿದ ಕೈ. ಪುನೀತ್ ಚಿತ್ರದಲ್ಲಿ ಕಾಣಿಸಿಕೊಂಡ ನಟಿಮಣಿಯರು(ಉದಾಹರಣೆಗೆ ರಕ್ಷಿತಾ, ರಮ್ಯಾ, ಮೀರಾ ಜಾಸ್ಮೀನ್ ಇತ್ಯಾದಿ) ನಂತರದ ದಿನಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ್ದು ಕಣ್ಮುಂದಿನ ಉದಾಹರಣೆ. ಹೀಗಾಗಿಯೇ ಪುನೀತ್ ಚಿತ್ರಗಳ ನಾಯಕಿಯರ ಬಗ್ಗೆ ಅಭಿಮಾನಿಗಳಿಗೆ ಮತ್ತು ಗಾಂಧಿನಗರಕ್ಕೆ ವಿಶೇಷ ಕುತೂಹಲ. ಇದೀಗ ಅವರ ಹೊಸ ಚಿತ್ರದ ನಾಯಕಿಯಾಗಿ ಶ್ರದ್ಧಾ ಆರ್ಯಾ ಆಯ್ಕೆಯಾಗಿದ್ದಾರೆ.
ಮೀರಾ ಜಾಸ್ಮೀನ್ , ಪಾರ್ವತಿ ಮೆಲ್ಟನ್ ರಂಥ ಚೆಲುವೆಯರನ್ನು ಮಲಯಾಳಂ ಚಿತ್ರರಂಗದಿಂದ ಪುನೀತ್ ಚಿತ್ರಗಳಿಗಾಗಿ ಕರೆತರಲಾಗಿತ್ತು. ಇದೀಗ ಮುಂಬೈನಿಂದ ಶ್ರದ್ಧಾ ಬಂದಿದ್ದಾರೆ. ಈ ಮುಂಬೈ ಬೆಡಗಿ ಗೊಡವ ಮತ್ತು ಕಾದಲ್ ಚಿತ್ರಗಳಲ್ಲಿ ಈಗಾಗಲೇ ನಟಿಸಿದ ಅನುಭವ ಹೊಂದಿದ್ದಾರೆ. ಇನ್ನೂ ಹೆಸರಿಡದ ಪುನೀತ್ ಚಿತ್ರಕ್ಕೆ ಇವರ ಆಯ್ಕೆ ಖಚಿತವಾಗಿದೆ.
ಚಿತ್ರ ಡಿಸೆಂಬರ್ 14ರಂದು ಸೆಟ್ಟೇರಲಿದ್ದು, ಕನಕಪುರ ಶ್ರೀನಿವಾಸ್ ಚಿತ್ರದ ನಿರ್ಮಾಪಕರು. ತೆಲುಗು ನಿರ್ದೇಶಕ ಶೋಭನ್ ನಿರ್ದೇಶನ ಮತ್ತು ಕತೆಯ ಹೊಣೆ ಹೊತ್ತಿದ್ದಾರೆ. ಚಂಡಿ, ವರ್ಷಂ ಸೇರಿದಂತೆ ಯಶಸ್ವಿ ತೆಲುಗು ಚಿತ್ರಗಳ ನಿರ್ದೇಶಿಸಿದ ಸರ್ಟಿಫಿಕೇಟು ಅವರ ಫೈಲಲ್ಲಿದೆ. ಅಂದ ಹಾಗೇ, ಪುನೀತ್ ಅವರ 'ಬಿಂದಾಸ್' ಚಿತ್ರ ತೆರೆಗೆ ಬರಲು ಸಜ್ಜಾಗಿದೆ.
(ದಟ್ಸ್ ಕನ್ನಡ ಸಿನಿವಾರ್ತೆ)


Click it and Unblock the Notifications