ಪ್ರಾಣಿಗಳ ಮೇಲಿಟ್ಟ ಪ್ರೀತಿ ಪತ್ನಿ ಮೇಲಿಡಲಿಲ್ಲ ದರ್ಶನ

ಈ ದಾಸ.. ಕೊಟ್ರೆ ವರ ಇಟ್ಟರೆ ಶಾಪ ಎಂದು ಪಂಚಿಂಗ್ ಡೈಲಾಗ್ ಗಳ ಮೂಲಕ ಮನೆಮಾತಾಗಿರುವ ದರ್ಶನ್, ಅಷ್ಟೊಂದು ವ್ಯಗ್ರರಾಗಲು ಕಾರಣವಾದರು ಏನು? ಸಭ್ಯ ಖಳನಟ ತೂಗುದೀಪ ಶ್ರೀನಿವಾಸ್ ಅವರ ಮಗ ದರ್ಶನ್ ಸಂಭಾವಿತ ಎಂದೇ ಎಲ್ಲರೂ ಅಂದುಕೊಂಡಿದ್ದಾರೆ.
ಸದಾ ಪ್ರಾಣಿ ಪಕ್ಷಿಗಳೊಡಎನ್ ಕಾಲಕಳೆಯಲು ಇಚ್ಛೆ ಪಡುವ ದರ್ಶನ್, ಚಿಕ್ಕಂದಿನಿಂದಲೂ ಪ್ರಾಣಿ ಪಾಲನೆ, ಪೋಷಣೆ ಎಂದರೆ ಎಲ್ಲಿಲ್ಲದ ಆನಂದ. ಮನೆ ಮಂದಿ ಜೊತೆಗಿಂತ ಪ್ರಾಣಿಗಳ ಜೊತೆ ಕಾಲ ಕಳೆದಿದ್ದೆ ಹೆಚ್ಚು. ಕೈಗೆ ಸಿಗುತ್ತಿದ್ದ ಪಾಕೆಟ್ ಮನಿ ಕೂಡಾ ಪ್ರಾಣಿಗಳ ಹೊಟ್ಟೆ ಸೇರುತ್ತಿತ್ತು.
ಇದಕ್ಕೆ ಜೀವಂತ ಸಾಕ್ಷಿಯಾಗಿ ಅವರ ಫಾರ್ಮ್ ಹೌಸ್ ನಲ್ಲಿ ಕುದುರೆಗಳು, ಹಸುಗಳು, ಪಕ್ಷಿಗಳು, ಒಂಟೆ, ಎಮು, ಆಸ್ಟೀಚ್ ಸೇರಿದಂತೆ ವಿವಿಧ ಪ್ರಾಣಿಗಳನ್ನು ಒಳಗೊಂಡ ಮಿನಿ ಜೂ ಕಾಣಬಹುದು.
ಪ್ರಾಣಿ ಪ್ರೀತಿ ಹೆಚ್ಚಾಯಿತೇ?: ಪ್ರಾಣಿಗಳ ಮೇಲೆ ನನಗೆ ಹೆಚ್ಚು ನಂಬಿಕೆ, ಪ್ರೀತಿ ಇದೆ ಎಂದು ದರ್ಶನ್ ಎಲ್ಲೆಡೆ ಹೇಳಿದ್ದಾರೆ ಕೂಡಾ. ಆಫ್ರಿಕನ್ ಮಕಾಸ್ ಇರಬಹುದು, ವಿಚಿತ್ರ ಪಕ್ಷಿ ಇರಬಹುದು, ವೈವಿಧ್ಯಮಯ ತಳಿಯ ಗಿಳಿಗಳಿರಬಹುದು. ಅಥವಾ ಡಜನ್ ಗಟ್ಟಲೆ ಸಾಕುನಾಯಿಗಳಿರಬಹುದು ಎಲ್ಲವೂ ದರ್ಶನ್ ಪ್ರೀತಿ ಗಳಿಸಿವೆ. ಇದರ ಜೊತೆಗೆ ಮೈಸೂರಿನ ಮೃಗಾಲಯದ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ಮರಿಯಾನೆ ಯನ್ನು ಸಾಕುತ್ತಿದ್ದಾರೆ.
ಅತಿಯಾದ ಪ್ರಾಣಿ ಪ್ರೀತಿ ಅವರನ್ನು ಕೆಲವೊಮ್ಮೆ ಕುರುಡಾಗಿಸಿ ಬಿಡುತ್ತಿತ್ತು. ಪ್ರೀತಿ ಮದುವೆ ಯಾದ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗು ವಿನೀಶ್ ಜೊತೆ ಬೆರೆಯುವುದಕ್ಕಿಂತ ಪ್ರಾಣಿಗಳತ್ತ ದರ್ಶನ್ ಚಿತ್ತ ಸದಾ ನೆಟ್ಟಿರುತ್ತಿತ್ತು ಎನ್ನಲಾಗಿದೆ. ಪ್ರಾಣಿಗಳ ಮೆಲೆ ಇಟ್ಟ ಪ್ರೀತಿಯ ಅರ್ಧ ಭಾಗ ಪತ್ನಿಯ ಮೇಲೆ ಇಟ್ಟಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ.
ಗಂಡ ಹೆಂಡತಿ ಮಧ್ಯೆ ಏನೆ ಮನಸ್ತಾಪ ಗಳಿದ್ದರೂ ಮನಸೋ ಇಚ್ಛೆ ಹೊಡೆಯುವಂಥ ಕ್ರೂರತನ ದರ್ಶನ್ ಗೆ ಹೇಗಾದರೂ ಬರಲು ಸಾಧ್ಯ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ದರ್ಶನ್ ರಿಂದ ಸ್ಪೂರ್ತಿಗೊಂಡು ಪ್ರಾಣಿ ಸಾಕಲು ಮುಂದಾದ ಅನೇಕ ಅಭಿಮಾನಿಗಳು, ದರ್ಶನ್ ಕೃತ್ಯ ಕಂಡು ಮೌನಕ್ಕೆ ಶರಣಾಗಿದ್ದಾರೆ.
ಬಹುಶಃ ದರ್ಶನ್ ಪ್ರೀತಿ ಗಳಿಸಿದ ಪ್ರಾಣಿಗಳಿಗೆ ಇಂದು ಮಾತನಾಡುವ ಶಕ್ತಿ ಇದ್ದಿದ್ದರೆ ದರ್ಶನ್ ಗೆ ಬೈದು ಬುದ್ಧಿ ಹೇಳುತ್ತಿದ್ದವು ಎನಿಸುತ್ತದೆ. ಮೂಕ ಪ್ರಾಣಿಗಳನ್ನು ಪ್ರಾಣಕ್ಕಿಂತ ಹೆಚ್ಚಿಗೆ ಪ್ರೀತಿಸುವ ವ್ಯಕ್ತಿಯೊಬ್ಬ ಮಡದಿಯನ್ನು ಸಾಯುವಂತೆ ಹೊಡೆಯುವುದು ಸಹಿಸಲಸಾಧ್ಯ.


Click it and Unblock the Notifications











